ಕ್ಲಿನಿಕ್ ಮೇಲೆ ವೈದ್ಯಾಧಿಕಾರಿಗಳ ತಂಡ ದಾಳಿ – ವೈದ್ಯ ಪರಾರಿ, ಆಸ್ಪತ್ರೆಗೆ ಬೀಗ ಮುದ್ರೆ

Public TV
1 Min Read

ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ನಕಲಿ ಕ್ಲಿನಿಕ್‍ಗಳ ಮೇಲೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದು, ಕ್ಲಿನಿಕ್ ಗೆ ಬೀಗ ಮುದ್ರೆ ಹಾಕಿದ್ದಾರೆ.

ರೋಗಿಗಳ ಜೊತೆ ಚಲ್ಲಾಟವಾಡುವ ನಕಲಿ ಕ್ಲಿನಿಕ್ ಗಳ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರ ಮಾಹಿತಿ ಮೇರೆಗೆ ಮಾಲೂರಿನಲ್ಲಿ ನಕಲಿ ಕ್ಲಿನಿಕ್‍ಗಳ ಮೇಲೆ ಜಿಲ್ಲಾ ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ.

ಮಾಲೂರು ಪಟ್ಟಣದ ರೈಲ್ವೇ ನಿಲ್ದಾಣ ಬಳಿಯ ದರ್ಶನ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ವೇಳೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನ ತಪಾಸಣೆ ನಡೆಸಿದ್ದಾರೆ. ಈ ವೇಳೆ ನಕಲಿ ವೈದ್ಯ ಕ್ಲಿನಿಕ್ ಬಿಟ್ಟು ಪರಾರಿಯಾಗಿದ್ದಾನೆ. ಅಷ್ಟೇ ಅಲ್ಲದೇ ನಕಲಿ ಕ್ಲಿನಿಕ್ ಜೊತೆ ಔಷಧ, ಸಿರಂಜುಗಳನ್ನ ವಶಕ್ಕೆ ಪಡೆದುಕೊಂಡು ವೈದ್ಯಾಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ.

ಈ ನಕಲಿ ವೈದ್ಯರು ಭ್ರೂಣ ಲಿಂಗ ಪತ್ತೆ, ಭ್ರೂಣ ಹತ್ಯೆಯಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ. ಆದ್ದರಿಂದ ಈ ತಾಲೂಕಿನಲ್ಲಿ ಮತ್ತಷ್ಟು ನಕಲಿ ವೈದ್ಯರನ್ನ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ.

ನಕಲಿ ವೈದ್ಯ ನಾರಾಯಣಸ್ವಾಮಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *