ಉಡುಪಿ ಪೊಲೀಸರು ಬಿಜೆಪಿಯ ಏಜೆಂಟರು- ಜಿಲ್ಲಾ ಕಾಂಗ್ರೆಸ್ ಆರೋಪ

Public TV
2 Min Read

ಉಡುಪಿ: ಭಾರತ್ ಬಂದ್ ವೇಳೆ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ, ನಗರಸಭಾ ಸದಸ್ಯರ ಮೇಲೆ ಬಿಜೆಪಿ ಗೂಂಡಾಗಳು ಮತ್ತು ಪೊಲೀಸ್ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್‍ನಿಂದ ಆರೋಪಿಸಿದೆ.

ಈ ಘಟನೆಯಿಂದ ಕಾಂಗ್ರೆಸ್ ಪಕ್ಷ ಧೃತಿಗೆಟ್ಟಿಲ್ಲ. ಬಿಜೆಪಿಯವರ ಗೂಂಡಾಗಿರಿ ಮತ್ತು ಪೊಲೀಸ್ ಅಧಿಕಾರಿಗಳ ದೌರ್ಜನ್ಯ ಎದುರಿಸಲು ಕಾಂಗ್ರೆಸ್ ಸದಾ ಸಿದ್ದವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಹೇಳಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಪ್ರಖ್ಯಾತ್ ಶೆಟ್ಟಿ, ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿದ್ದು ಎಂದೂ ಕೂಡ ಹಿಂಸೆ ಪ್ರಚೋದನೆ ನೀಡುವ ಕೆಲಸ ಮಾಡಿದ ಉದಾಹರಣೆಗಳಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆ ವಿರುದ್ಧ ಭಾರತ್ ಬಂದ್ ಕರೆ ನೀಡಿದ್ದು, ಅದರ ಪ್ರಯುಕ್ತ ಜಿಲ್ಲೆಯಲ್ಲಿ ಕೂಡ ನಾಗರಿಕರಿಂದ ಉತ್ತಮವಾದ ಬೆಂಬಲ ವ್ಯಕ್ತವಾಗಿತ್ತು. ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ ಹಿನ್ನಲೆಯಲ್ಲಿ ನಾಗರಿಕರು ಸಹಕರಿಸಿ ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ ವೇಳೆ ಬಿಜೆಪಿಗರು ಮಧ್ಯೆ ಬಂದು ಜನರನ್ನು ಕೆರಳಿಸುವ ಕೆಲಸ ಮಾಡಿರುವುದು ಅವರ ಹತಾಶೆ ಭಾವನೆಯನ್ನು ತೋರಿಸುತ್ತದೆ ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ವೇಳೆ ಬಿಜೆಪಿಗರು ಹಲವು ಬಾರಿ ಬಂದ್ ನಡೆಸಿದ್ದಾರೆ. ಎಂದೂ ನಾವು ತಡೆದಿಲ್ಲ. ಯಾವುದೇ ಸಂದರ್ಭದಲ್ಲಿ ಕೂಡ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿಲ್ಲ. ಉದ್ದೇಶ ಪೂರ್ವಕವಾಗಿ ಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಬಿಜೆಪಿಗರು ಮಧ್ಯ ಪ್ರವೇಶಿಸಿ ಬಂದ್ ಹಾಳು ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು. ಈ ಸಮಯದಲ್ಲಿ ರಕ್ಷಣೆ ನೀಡಬೇಕಾಗಿದ್ದ ಪೋಲಿಸರು ಕೂಡ ಬಿಜೆಪಿ ಪಕ್ಷದ ಏಜೆಂಟರಂತೆ ವರ್ತಿಸಿರುವುದು ಖಂಡನೀಯ ಎಂದು ಹೇಳಿದರು.

ಪ್ರತಿಭಟನೆಯ ವೇಳೆ ಶಾಂತಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಉಡುಪಿ ಪೋಲಿಸರು ಸಂಪೂರ್ಣ ವಿಫಲರಾಗಿದ್ದು, ಅವರುಗಳ ದೌರ್ಜನ್ಯವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಕಾಂಗ್ರೆಸ್ ಪಕ್ಷ ಇಂತಹ ಘಟನೆಯಿಂದ ಧೃತಿಗೆಟ್ಟಿಲ್ಲ ಬದಲಾಗಿ ಮುಂದೆಯೂ ಕೂಡ ಬಿಜೆಪಿಗರ ಗೂಂಡಾಗಿರಿಗೆ ಮತ್ತು ಪೋಲಿಸರ ದೌರ್ಜನ್ಯಕ್ಕೆ ಸೂಕ್ತ ಉತ್ತರ ನೀಡಲು ಶಕ್ತರಿದ್ದೇವೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *