ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ವ್ಯಕ್ತಿಗೆ ಜಿಲ್ಲಾಧಿಕಾರಿ ಕ್ಲಾಸ್

Public TV
1 Min Read

ದಾವಣಗೆರೆ: ತಮಗೆ ನ್ಯಾಯ ಸಿಗಲಿಲ್ಲ ಎಂದು ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಷ ಕುಡಿಯಲು ಯತ್ನಿಸಿದ ವ್ಯಕ್ತಿಗೆ ಜಿಲ್ಲಾಧಿಕಾರಿಗಳೇ ಕ್ಲಾಸ್ ತೆಗೆದುಕೊಂಡು ಬುದ್ದಿವಾದ ಹೇಳಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಲಿಂಗರಾಜ್ ಎಂಬವರು ನಾಲ್ಕು ವರ್ಷಗಳಿಂದ ಅಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಏಕಾಏಕಿ ಕೆಲಸದಿಂದ ತೆಗೆದುಹಾಕಿದ್ದಾರೆ. ಇದರಿಂದ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ರು ಯಾವುದೇ ಪ್ರಯೋಜನವಾಗಿಲ್ಲ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ ನವರ ಶಿಫಾರಸ್ಸಿನಿಂದ ಬೇರೆಯವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರಿಂದ ಇಂದು ನಿಂಗರಾಜ್ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ವಿಷ ಕುಡಿಯುವುದಾಗಿ ಹೆದರಿಸಿದ್ದಾರೆ. ಇದರಿಂದ ಕೋಪಗೊಂಡ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು, ಆತ್ಮಹತ್ಯೆ ಯತ್ನ ಮಾಡುತ್ತೇನೆ ಎಂದ ನಿಂಗರಾಜ್‍ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರು.

ಏನ್ ಸಾಧನೆ ಮಾಡಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತೀಯಾ. ನಾನು 5 ವರ್ಷ ಮಗುವಾಗಿದ್ದಾಗ ತಂದೆಯನ್ನು ಕಳೆದುಕೊಂಡಿದ್ದೆ. ನನ್ನ ತಾಯಿ ರೊಟ್ಟಿ ಮಾಡಿ ಖಾನಾವಳಿಗೆ ಮಾರಿ ಜೀವನ ನಡೆಸುತ್ತಾ ನನ್ನನ್ನು ಸಾಕಿದ್ದಾರೆ. ಕಷ್ಟದಿಂದ ಓದಿ ಜಿಲ್ಲಾಧಿಕಾರಿಯಾಗಿದ್ದೇನೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಗ್ರಾಮದಲ್ಲಿ ಹೋಗಿ ಅಲ್ಲಿನ ಜನರನ್ನು ಕೇಳಿ ನಮ್ಮ ಕಷ್ಟ ಏನು ಎಂದು ಗೊತ್ತಾಗುತ್ತೆ. ದುಡಿದು ತಿನ್ನುವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಬಂದಿಯಲ್ಲ ನೀನೆಂತ ಗಂಡಸು ಎಂದು ಖಡಕ್ ಆಗಿ ನಿಂಗರಾಜ್ ಗೆ ಬುದ್ದಿ ಹೇಳಿದರು.

ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನಿನ್ನ ಸಮಸ್ಯೆಯನ್ನು ಬಗೆಹರಿಸಿ ನಾನು ನಿನಗೆ ನ್ಯಾಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತನ್ನ ಕಷ್ಟದ ಜೀವನ ನೆನಪಿಸಿಕೊಂಡು ಕಣ್ಣಲ್ಲಿ ನೀರು ತಂದರು.

Share This Article
Leave a Comment

Leave a Reply

Your email address will not be published. Required fields are marked *