ಉಪಚುನಾವಣೆ ಅಭ್ಯರ್ಥಿ ಆಯ್ಕೆ- ಕಾಂಗ್ರೆಸ್‍ನಲ್ಲಿ ಬಿಗ್ ಫೈಟ್

Public TV
1 Min Read

ಬೆಂಗಳೂರು: ಮೈತ್ರಿ ಸರ್ಕಾರ ಪತನದ ಬಳಿಕ ನಡೆದ ರಾಜ್ಯ ಕಾಂಗ್ರೆಸ್‍ನಲ್ಲಿ ನಡೆದ ಬೆಳವಣಿಗೆಗಳು ಉಪಚುನಾವಣೆ ಹತ್ತಿರವಾಗುತ್ತಿದಂತೆ ಬೇರೆಯದ್ದೇ ಸ್ವರೂಪ ಪಡೆದುಕೊಳ್ಳುತ್ತಿದ್ದು, ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಈಗಾಗಲೇ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆಯಾಗಿದ್ದು, ಉಳಿದ 7 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಇಂದು ಕೆಪಿಸಿಸಿ ಕಚೇರಿಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಮೂಲ ಹಾಗೂ ವಲಸಿಗ ನಾಯಕರ ನಡುವೆ ವಾಕ್ಸಮರ ನಡೆದಿದೆ.

ಸಭೆ ಆರಂಭವಾಗುತ್ತಿದಂತೆ ಸಿದ್ದರಾಮಯ್ಯ ಬಳಗ, ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದೆ ಎಂದು ಎಐಸಿಸಿ ಮುಖಂಡ ಬಿಕೆ ಹರಿಪ್ರಸಾದ್ ಸಿಡಿದೆದ್ದರು. ಶಿವಾಜಿನಗರದಿಂದ ರಿಜ್ವಾನ್ ಕಣಕ್ಕೆ ಇಳಿಸುವ ಸಿದ್ದರಾಮಯ್ಯ ಮಾತಿಗೆ ಸಿಡಿಮಿಡಿಗೊಂಡ ಹರಿಪ್ರಸಾದ್ ಅವರು, ನಿನ್ನೆ ಮೊನ್ನೆ ಬಂದವರು ಸಲಹೆ ನೀಡಿದರೆ ನಾವು ಹೇಗೆ ಸ್ವೀಕರಿಸುವುದು. ಪಕ್ಷದಲ್ಲಿ ಇಷ್ಟು ವರ್ಷ ನಾವು ಕೆಲಸ ಮಾಡಿದ್ದು, ಆದರೆ ಈಗ ನಿಮ್ಮ ಸ್ವಹಿತಾಸಕ್ತಿಯ ಐಡಿಯಾಗಳನ್ನು ಮುಂದಿಟ್ಟುಕೊಂಡು ಬರುತ್ತೀರಿ. ಶಿವಾಜಿನಗರ ಉಪಚುನಾವಣೆ ಅಭ್ಯರ್ಥಿ ನೀವೇ ಫೈನಲ್ ಮಾಡಿ. ಆದರೆ ಸಲೀಂ ಅಹ್ಮದ್ ಒಳ್ಳೆಯ ಅಭ್ಯರ್ಥಿ ಎಂಬುವುದು ನನ್ನ ಅಭಿಪ್ರಾಯ ಎಂದು ಹೇಳಿ ಸಭೆಯಿಂದ ಹೊರ ನಡೆದರು ಎಂದು ಮೂಲಗಳಿಂದ ತಿಳಿದು ಬಂದಿದೆ.

ಇತ್ತ ಎಂದಿನಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಮಾಜಿ ಸಂಸದ ಕೆಎಚ್ ಮನಿಯಪ್ಪ ನಡುವೆಯೂ ಮುಸುಕಿನ ಕಿತ್ತಾಟ ನಡೆಯಿತು. ಮುನಿಯಪ್ಪ ಅವರು ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರೆ, ರಮೇಶ್ ಕುಮಾರ್ ಮಾತ್ರ ಮೌನ ವಹಿಸಿದರು. ಕೋಲಾರ ನಗರಸಭೆ ಚುನಾವಣೆಯಲ್ಲಿ ನಾನು ಹೇಳಿದವರಿಗೆ ಟಿಕೆಟ್ ಕೊಟ್ಟಿಲ್ಲ. ಎಲ್ಲವನ್ನು ನೀವೇ ಫೈನಲ್ ಮಾಡಿದರೆ ನಾವೇನು ಮಾಡಬೇಕು. ಲೋಕಸಭೆ ಎಲೆಕ್ಷನ್‍ನಲ್ಲಿ ಸೋಲಿಸಿ, ನನ್ನನ್ನು ಜಿಲ್ಲೆಯಿಂದ ಹೊರಹಾಕ್ಬೇಕು ಎಂದು ಪ್ಲಾನ್ ಮಾಡಿದ್ದೀರಾ ಎಂದು ಮುನಿಯಪ್ಪ ಅವರು ಕಿಡಿಕಾರಿದರು.

Share This Article
Leave a Comment

Leave a Reply

Your email address will not be published. Required fields are marked *