ಹೆಚ್‍ಡಿಕೆಗಿಂತ, ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್ಚು ಅಭಿವೃದ್ಧಿಯಾಗಿತ್ತು- ನಾರಾಯಣ ಗೌಡ

Public TV
2 Min Read

– ಕೈ ಎತ್ತಿ ಮತ ಹಾಕಿಸಿದ ಪಕ್ಷವೇ ಅಭಿವೃದ್ಧಿಗೆ ಹಣ ನೀಡಲಿಲ್ಲ
– ಬಿಎಸ್‍ವೈ ಸಾವಿರ ಕೋಟಿ ರೂ. ಅನುದಾನ ನೀಡಿದ್ದಾರೆ

ಮಂಡ್ಯ: ಕುಮಾರಸ್ವಾಮಿ ಮುಖ್ಯಮಂತ್ರಿಯಾದಾಗ ಅಭಿವೃದ್ಧಿ ಕೆಲಸಗಳಾಗಿಲ್ಲ, ಬದಲಿಗೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ನಮ್ಮ ಕ್ಷೇತ್ರಕ್ಕೆ ಅಭಿವೃದ್ದಿ ಕೆಲಸಗಳಾಗಿವೆ ಎಂದು ಹೆಚ್‍ಡಿಕೆ ವಿರುದ್ಧ ಅನರ್ಹ ಶಾಸಕ ನಾರಾಯಣ ಗೌಡ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನ ಕಿಕ್ಕೇರಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯರ ಕಾಂಗ್ರೆಸ್ ಸರ್ಕಾರ ಇತ್ತು. ಆ ಸರ್ಕಾರಕ್ಕೆ ನಾನೇನು ಕೈ ಎತ್ತಿ ಮತ ಹಾಕಿರಲಿಲ್ಲ. ಆದರೂ ಅವರು ನಮ್ಮ ಕ್ಷೇತ್ರಕ್ಕೆ ಅಭಿವೃದ್ಧಿ ಕೆಲಸ ಮಾಡಿದ್ದರು. ನಾಲ್ಕು ಮೊರಾರ್ಜಿ ಶಾಲೆ, ಒಂದು ಕಿತ್ತೂರು ರಾಣಿ ಚೆನ್ನಮ್ಮ, ಒಂದು ನವೋದಯ ಶಾಲೆಯನ್ನು ಮಂಜೂರು ಮಾಡಿದ್ದರು. ಆದರೆ ನಾನು ಕೈ ಎತ್ತಿ ಮತ ಹಾಕಿಸಿದ ಸರ್ಕಾರದಲ್ಲಿ ಆ ಶಾಲೆಗಳ ಕಾಂಪೌಂಡ್ ಕಟ್ಟಿಸಲು ಸಹ ಹಣ ಬಿಡುಗಡೆ ಮಾಡಲಿಲ್ಲ ಎಂದು ಹರಿಹಾಯ್ದಿದ್ದಾರೆ.

ಈ ತಾಲೂಕಿನ ನಾಲ್ಕೈದು ಕಿಡಿಗೇಡಿಗಳು ಪುಣ್ಯಾತ್ಮರು ನನ್ನ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರ, ಕುಮಾರಸ್ವಾಮಿ, ರೇವಣ್ಣ ಅವರ ಕಿವಿ ಊದಿದರು. ಪುಣ್ಯಾತ್ಮ ಕೃಷ್ಣಪ್ಪ ಅವರು 30 ವರ್ಷ ಹೇಗಿದ್ದರೋ ಗೊತ್ತಿಲ್ಲ. ನಾನು ಆರೂವರೆ ವರ್ಷ ಇರಲು ಭಾರೀ ಕಷ್ಟ ಆಯಿತು. ನಾನು ನನ್ನ ತಾಲೂಕಿಗೆ 700 ಕೋಟಿ ರೂ. ಯೋಜನೆ ಸಿದ್ಧಪಡಿಸಿಕೊಂಡಿದ್ದೆ. ಇದಕ್ಕಾಗಿ ಹದಿಮೂರು ತಿಂಗಳು ತಿರುಗಿ ತಿರುಗಿ ನನಗೆ ಸಾಕಾಗಿ ಹೋಯಿತು. ಮನೆಗೆ ಹೋದರೆ ಚಪ್ಪಲಿ ಬಿಡುವ ಜಾಗದಲ್ಲಿ ನನ್ನನ್ನು ನಿಲ್ಲಿಸುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಎರಡನೇ ಬಾರಿಗೆ ನಮ್ಮದೇ ಸರ್ಕಾರ ಇದೆ. ಈಗಲೂ ಅಭಿವೃದ್ಧಿ ಮಾಡಲಿಲ್ಲ ಅಂದರೆ ಜನರಿಗೆ ನಾನು ಏನು ಹೇಳಬೇಕು. ಅದಕ್ಕಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ರಾಜೀನಾಮೆ ಕೊಟ್ಟಿದ್ದೇನೆ. ಅದೃಷ್ಟವೋ ಏನೋ ನನ್ನ ತಾಲೂಕಿನ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆಗ ನಾನು ಅವರ ಬಳಿ ಹೋದೆ, 700 ಕೋಟಿ ರೂ. ಅನುದಾನದ ಕೇಳಿದೆ. ಅದಕ್ಕೆ ಅವರು ನಾರಾಯಣ ಗೌಡ ಆ ಕ್ಷೇತ್ರದಲ್ಲಿ ನಮ್ಮ ಶಾಸಕರಿರಲಿಲ್ಲ. ಆದರೂ ಆಗಲೇ 700 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಇದೀಗ 700 ಕೋಟಿ ರೂ. ಜೊತೆಗೆ ನಮ್ಮ ತಂದೆಯ ಹೆಸರಿನಲ್ಲಿ ಇನ್ನೂ 300 ಕೋಟಿ ರೂ. ಹೆಚ್ಚು ಒಟ್ಟು 1 ಸಾವಿರ ಕೋಟಿ ರೂ. ಕೊಡುತ್ತೇನೆ ಎಂದರು. ಅಲ್ಲದೆ ನಾನು ಏನೇ ಕೆಲಸ ಕೇಳಿದರೂ ಮಾಡಿಕೊಡುವ ಭರವಸೆ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *