ನಾನು ದೇವೇಗೌಡ್ರ ಬಳಿ ಕ್ಷಮೆ ಕೇಳುತ್ತೇನೆ- ಎಚ್ ವಿಶ್ವನಾಥ್

Public TV
2 Min Read

– ಸಾರಾ ಮಹೇಶ್ ವಿರುದ್ಧ ವಾಗ್ದಾಳಿ

ಮೈಸೂರು: ನಾನು ದೇವೇಗೌಡರ ಬಳಿ ಕ್ಷಮೆ ಕೇಳುತ್ತೇನೆ. ದೋಸ್ತಿ ಸರ್ಕಾರ ಪತನಕ್ಕೆ ಸರ್ಕಾರ ನಡೆಸಿದವರೇ ಕಾರಣ. ದೋಸ್ತಿ ಸರ್ಕಾರದ ಪತನಕ್ಕೆ ನಾವು 20 ಶಾಸಕರಾಗಲಿ, ಬಿಜೆಪಿ ಆಗಲಿ ಕಾರಣವಲ್ಲ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಪತನಕ್ಕೆ ಸರ್ಕಾರ ನಡೆಸಿದವರೇ ಕಾರಣವಾಗಿದ್ದಾರೆ. ಸರ್ಕಾರ ನಡೆಸುವವರು ನಾಯಕರ ಥರ ಇರಲಿಲ್ಲ, ಮಾಲೀಕರ ರೀತಿ ಇದ್ದರು. ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಕ್ಷಮೆ ಕೇಳುತ್ತೇನೆ. ಸನ್ನಿವೇಶದ ಒತ್ತಡ, ನನಗೆ ಆದ ಅವಮಾನ, ನನ್ನ ನಿರ್ಲಕ್ಷಿಸಿದ ರೀತಿಯಿಂದ ರಾಜೀನಾಮೆ ಕೊಟ್ಟಿದ್ದೇನೆ. ದೇವೇಗೌಡರ ಮಗಳು ಕೆ.ಆರ್. ಪೇಟೆ ಕ್ಷೇತ್ರಕ್ಕೆ ಬರಲಿದ್ದಾರೆ. ಇದಕ್ಕೆ ಕೆ.ಆರ್. ಪೇಟೆ ಶಾಸಕರಿಗೆ ಅವಮಾನ ಮಾಡಿದರು ಎಂದರು.

ನನ್ನನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ದೂರ ಮಾಡಿದ್ದೇ ಜೆಡಿಎಸ್ ಎಂದು ಗಂಭೀರ ಆರೋಪ ಮಾಡಿದ ಅವರು, ನಾವು ಅತೃಪ್ತರಲ್ಲ. ನಾವು ತೃಪ್ತರು. ದೋಸ್ತಿ ಸರ್ಕಾರ ನಡೆಸಿದವರು ಅತೃಪ್ತರಾಗಿದ್ದಾರೆ. ದೋಸ್ತಿಗಳ ನಡುವಿನ ಅತೃಪ್ತಿ, ಅಸಮಾಧಾನ, ಅನುಮಾನ ಇದರಿಂದ ಸರ್ಕಾರ ಬೀಳಿಸಿ ಕೊಂಡ್ರಿ. ಇದು ಆಪರೇಷನ್ ಕಮಲ ಅಲ್ಲ. ಸಾರಾ ಮಹೇಶ್ ಎಂಬ ಅಪ್ರಬುದ್ಧ ಬಾಯಿಗೆ ಬಂದಂತೆ ಹೇಳುತ್ತಾನೆ. 20 ಜನ ಶಾಸಕರು ದುಡ್ಡಿಗಾಗಿ ಮಾರಿಕೊಂಡಿಲ್ಲ. ಪದವಿಗಾಗಿ ಪದವಿ ತ್ಯಾಗ ಮಾಡಿಲ್ಲ. ರಾಜೀನಾಮೆ ಕೊಟ್ಟ ಶಾಸಕರು ದುಡ್ಡಿನ ಕುಳಗಳು ಎಂದರು.

ನಾನು ಸತ್ಯವಂತ, ಸಂತ, ಮಹಾತ್ಮಗಾಂಧಿ ಎಂದೆಲ್ಲ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳುತ್ತಿದ್ದರು. ಆದರೆ, ಅವರು ಮಾಡಿದ್ದೇನು ಎಂದು ಪ್ರಶ್ನಿಸಿದ ವಿಶ್ವನಾಥ್, ಸದನದಲ್ಲಿ ಇಲ್ಲದ ವ್ಯಕ್ತಿ ವಿರುದ್ಧ ಮಾತನಾಡಲು ಬಿಟ್ಟರು ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಗೂ ಮುನ್ನ ಮೈಸೂರು ಪತ್ರಕರ್ತರ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಸುದ್ದಿಗೋಷ್ಠಿ ವೇಳೆ ಗಲಾಟೆಯಾಗುವ ಸಂಭವದಿಂದಾಗಿ ಎರಡು ತುಕಡಿ ಸಿಆರ್, ಕೆಎಸ್‍ಆರ್ ಪಿ ಹಾಗೂ 30ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.

ಈ ಮಧ್ಯೆ ಮೈಸೂರು ಪತ್ರಕರ್ತರ ಭವನದ ಬಳಿ ಜೆಡಿಎಸ್ ಕಾರ್ಯಕರ್ತರು ಲಗ್ಗೆಯಿಟ್ಟಿದ್ದು. ಕಾರ್ಯಕರ್ತರನ್ನ ಭವನಕ್ಕೆ ಬರದಂತೆ ಪೊಲೀಸರು ತಡೆದಿದ್ದರು. ಅಲ್ಲದೆ ಸುದ್ದಿಗೋಷ್ಠಿ ಮುಗಿಯುವವೆರೆಗೂ ಬರದಂತೆ ಸೂಚನೆ ನೀಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *