ಕಾಫಿನಾಡಿನಲ್ಲಿ ಜ್ವರಕ್ಕೆ ಒಂದೇ ತಿಂಗಳಲ್ಲಿ ಮೂವರು ಬಲಿ

Public TV
2 Min Read

ಚಿಕ್ಕಮಗಳೂರು: ಎರಡು ತಿಂಗಳಿನಿಂದ ಚಿಕ್ಕಮಗಳೂರು ತಾಲೂಕಿನ ಮರ್ಲೆ, ತಿಮ್ಮನಹಳ್ಳಿ, ನಾಗರಹಳ್ಳಿ, ಗೌಡನಹಳ್ಳಿ, ಇಂದಾವರ ಸೇರಿದಂತೆ ಹಲವು ಗ್ರಾಮದ ಜನರು ಜ್ವರದಿಂದ ಬಳಲುತ್ತಿದ್ದಾರೆ. ಒಂದೇ ತಿಂಗಳಲ್ಲಿ ಜ್ವರಕ್ಕೆ ಮೂವರು ಬಲಿಯಾಗಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಏಳಕ್ಕೂ ಹೆಚ್ಚು ಗ್ರಾಮದ ಜನ ಹಾಸಿಗೆ ಹಿಡಿದಿದ್ದು, ಹಳ್ಳಿಯಿಂದ ಹಳ್ಳಿಗೆ ಹರಡುತ್ತಿರುವ ವೈರಲ್ ಫಿವರ್ ನಿಂದ ಸಾವಿರ ಜನಸಂಖ್ಯೆವುಳ್ಳ ಗ್ರಾಮದಲ್ಲಿ ಆರೋಗ್ಯವಾಗಿ ಇರುವವರನ್ನು ಹುಡುಕುವಂತಾಗಿದೆ. ಜನ ಹಾಸಿಗೆ ಹಿಡಿಯುತ್ತಿರುವುದರಿಂದ ಹಳ್ಳಿ ಮಂದಿ ಆತಂಕಕ್ಕೀಡಾಗಿದ್ದಾರೆ. ಒಂದೇ ತಿಂಗಳಲ್ಲಿ ಏಳು ತಿಂಗಳ ಲೋಚನ್, 16ರ ಹರೆಯದ ಮೇಘನಾ ಹಾಗೂ ತಿಮ್ಮಣ್ಣ(56) ಎಂಬ ಮೂವರು ಜ್ವರಕ್ಕೆ ಬಲಿಯಾಗಿದ್ದಾರೆ.

ಆಶಾ ಕಾರ್ಯಕರ್ತರು, ನರ್ಸ್‍ಗಳು ಬರುತ್ತಾರೆ ಮಾತ್ರೆ ಕೊಟ್ಟು ಹೋಗುತ್ತಾರೆ. ಆದರೆ ಜನರು ಮಾತ್ರ ಹುಷಾರಾಗುತ್ತಿಲ್ಲ. ಹುಷಾರಾದವರು ವಾರವಷ್ಟೇ ಓಡಾಡಿ ಮತ್ತೆ ಮಲಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯೂ ಸಿಗದ ಕಾರಣ ಹಳ್ಳಿ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗೌಡನಹಳ್ಳಿ, ಚಿಕ್ಕಮಗಳೂರು ನಗರದಿಂದ ಕೂಗಳತೆ ದೂರದಲ್ಲಿರುವ 300 ಮನೆಗಳುಳ್ಳ ಗ್ರಾಮವಾಗಿದೆ. ಆದರೆ ಈ ಗ್ರಾಮದಲ್ಲಿ ಆರೋಗ್ಯವಾಗಿರುವವರನ್ನು ಹುಡುಕಬೇಕಾಗಿದೆ. ಯಾಕೆಂದರೆ 300 ಮನೆಗಳ ಗ್ರಾಮದಲ್ಲಿ ಇರುವವರೆಲ್ಲರೂ ಕಾಯಿಲೆಯಿಂದ ಮಲಗಿದ್ದಾರೆ. ಹೇಳುವುದಕ್ಕೆ ಚಿಕ್ಕ ಹಳ್ಳಿಯಾದರು ಪ್ರತಿದಿನ ಆಸ್ಪತ್ರೆಗೆ ಹೋಗುವವರ ಸಂಖ್ಯೆ 300ಕ್ಕೂ ಅಧಿಕವಾಗಿದೆ. ಅಂಬಳೆ ಹೋಬಳಿಯ ಬಹುತೇಕ ರೋಗಿಗಳು ಅಲ್ಲಿಗೆ ಬರುತ್ತಾರೆ.

ಆರ್ಥಿಕವಾಗಿ ಬಲವಿದ್ದವರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಕೂಲಿ ಕಾರ್ಮಿಕರು, ರೈತರು ಜಿಲ್ಲಾಸ್ಪತ್ರೆಗೆ ಬಂದು ನರಳಾಡುತ್ತಾ ಬದುಕುತ್ತಿದ್ದಾರೆ. ಇಂಜೆಕ್ಷನ್ ಪವರ್ ಇರುವ ತನಕ ನಾರ್ಮಲ್ ಆಗಿರೋರು ಬಳಿಕ ಮತ್ತೆ ಕುಂಟುತ್ತಾ ಸಾಗುತ್ತಾರೆ. ವಾರಕ್ಕೆ ಹುಷಾರಾದವರು ಮುಂದಿನ ವಾರ ಮತ್ತೆ ಆಸ್ಪತ್ರೆಗೆ ಬರುವಂತಾಗಿದೆ. ಕೂಡಲೇ ಜಿಲ್ಲಾಡಳಿತ ಇಲ್ಲಿನ ಕಾಯಿಲೆಗೆ ಶಾಶ್ವತ ಪರಿಹಾರ ಹುಡುಕಬೇಕೆಂದು ಗ್ರಾಮಸ್ಥ ಮರೀಗೌಡ ಒತ್ತಾಯಿಸಿದ್ದಾರೆ.

ಕಾಫಿನಾಡಿನ ಗ್ರಾಮೀಣ ಭಾಗದ ಒಂದಲ್ಲ ಒಂದು ಹಳ್ಳಿಯ ಜನ ಪ್ರತಿದಿನ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದಾರೆ. ಅಲ್ಲಿನ ಜನ ಹಾಸಿಗೆ ಹಿಡಿಯುತ್ತಿರುವುದು ಚಿಂತೆಗೀಡು ಮಾಡಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸೋಂಕು ತಗಲದಿರುವ ಗ್ರಾಮಗಳತ್ತ ಗಮನ ಹರಿಸಿ ಮುಂದಾಗುವ ಅನಾಹುತವನ್ನ ತಪ್ಪಿಸಬೇಕು. ಜೊತೆಗೆ ಡೇಂಘಿ ಹಾಗೂ ಚಿಕೂನ್ ಗುನ್ಯಾದಿಂದ ಬಳಲುತ್ತಿರುವ ಗ್ರಾಮಗಳಲ್ಲಿ ಹೆಲ್ತ್ ಕ್ಯಾಂಪ್ ಹಾಕಿ ಜನರ ಆರೋಗ್ಯವನ್ನು ಸುಧಾರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *