ಮೋದಿಯವರು ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ: ದಿನೇಶ್ ಗುಂಡೂರಾವ್ ಪ್ರಶ್ನೆ

Public TV
4 Min Read

ಬೆಂಗಳೂರು: ಕನ್ನಡಿಗರ ಶ್ರಮದ ತೆರಿಗೆ ಹಣದಲ್ಲಿ ಕಾಂಗ್ರೆಸ್ ಜಾಹೀರಾತು ನೀಡುತ್ತಿದೆ ಎಂದು ಆರೋಪಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‍ರವರಿಗೆ (Nirmala Sitharaman) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸರಣಿ ಟ್ವೀಟ್‍ಗಳ ಮೂಲಕ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ.

ದಿನದ 24 ಗಂಟೆ ಟಿವಿಯಲ್ಲಿ ಹಾಗೂ ದಿನಪತ್ರಿಕೆಗಳಲ್ಲಿ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಪ್ರಸಾರ ಮಾಡಲು ವೆಚ್ಚ ಮಾಡುತ್ತಿರುವ ದುಡ್ಡು ಯಾರ ಶ್ರಮದ ತೆರಿಗೆ ಹಣ? ಮೋದಿಯವರು (Narendra Modi) ಅವರ ಪಿತ್ರಾರ್ಜಿತ ಆಸ್ತಿಯಿಂದ ಜಾಹೀರಾತುಗಳಿಗೆ ದುಡ್ಡು ನೀಡುತ್ತಿದ್ದಾರೆಯೇ? ಮೋದಿಯವರು `ಮೋದಿ ಗ್ಯಾರಂಟಿ’ ಎಂಬ ಜಾಹೀರಾತಿಗೆ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಹಣ ಜನರ ಶ್ರಮದ ತೆರಿಗೆ ಹಣವೇ ಅಲ್ಲವೆ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜಿಮ್ಸ್ ಆಸ್ಪತ್ರೆಯಲ್ಲಿ ರೀಲ್ಸ್ ಮಾಡಿದ 38 ವಿದ್ಯಾರ್ಥಿಗಳು ಅಮಾನತು

ದೇಶದ ಹಣಕಾಸು ಸ್ಥಿತಿಯ ಬಗ್ಗೆ ಲೋಕಸಭೆಯಲ್ಲಿ ಶ್ವೇತಪತ್ರ ಮಂಡಿಸಿರುವ ನಿರ್ಮಲಾರವರೆ, ಮೋದಿ ಸರ್ಕಾರ ಕೇವಲ ಜಾಹೀರಾತುಗಳಿಗಾಗಿಯೇ ಸಾವಿರಾರು ಕೋಟಿ ರೂ. ಖರ್ಚು ಮಾಡುತ್ತಿರುವ ಬಗ್ಗೆ ಶ್ವೇತಪತ್ರದಲ್ಲಿ ಯಾಕೆ ಉಲ್ಲೇಖವಿಲ್ಲ? ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವುದು ಸರ್ಕಾರದ ಹಣವೋ ಅಥವಾ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಹಣವೋ? ಶ್ವೇತಪತ್ರದಲ್ಲಿ ಜಾಹೀರಾತಿಗೆ ಖರ್ಚು ಮಾಡುತ್ತಿರುವುದು ಯಾವ ಹಣ ಹಾಗೂ ಯಾರ ಹಣ ಎಂದು ಸಾರ್ವಜನಿಕರ ಮುಂದೆ ತೆರೆದಿಡಬೇಕಿತ್ತಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಯಾವುದೇ ಚಾನೆಲ್ ತಿರುಗಿಸಿದರೂ ಒಂದಲ್ಲ ಒಂದು ಚಾನೆಲ್‍ನಲ್ಲಿ `ಮೋದಿ ಗ್ಯಾರಂಟಿ’ ಹೆಸರಿನ ಜಾಹೀರಾತು ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಪ್ರತಿನಿತ್ಯ ದಿನ ಪತ್ರಿಕೆಗಳಲ್ಲಿ ಮೋದಿ ಗ್ಯಾರಂಟಿ ಜಾಹೀರಾತಿಗಾಗಿ ಪುಟ ಮೀಸಲಿಡಲಾಗಿದೆ. ಕೇವಲ ಜಾಹೀರಾತಿಗಾಗಿ ಇಷ್ಟೊಂದು ಹಣ ಖರ್ಚು ಮಾಡುವ ಅಗತ್ಯವಿದೆಯೇ? ನಿಮ್ಮ ಮೋದಿಯವರು ತಮ್ಮ ಅಧಿಕಾರಾವಧಿಯಲ್ಲಿ ನಿಜವಾದ ಅಭಿವೃದ್ಧಿ ಮಾಡಿದ್ದರೆ ಇಷ್ಟೊಂದು ಜಾಹೀರಾತು ಕೊಡುವ ಅಗತ್ಯ ಯಾಕಿತ್ತು? ಅಧಿಕಾರದ ಅವಧಿಯಲ್ಲಿ ಕೇವಲ ಭಾಷಣದ ತೌಡು ಕುಟ್ಟಿ ಈಗ ಜಾಹೀರಾತಿಗಾಗಿ ಸಾವಿರಾರು ಕೋಟಿ ರೂ. ಸಾರ್ವಜನಿಕರ ಹಣ ದುರುಪಯೋಗ ಮಾಡಿಕೊಳ್ಳುವುದು ಸಾಧನೆಯೇ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಸಾರ್ವಜನಿಕರ ಸಾವಿರಾರು ಕೋಟಿ ರೂ. ತೆರಿಗೆ ಹಣವನ್ನು `ಮೋದಿ ಗ್ಯಾರಂಟಿ’ ಜಾಹೀರಾತಿಗೆ ದುರಪಯೋಗಪಡಿಸಿಕೊಳ್ಳುತ್ತಿರುವ ನಿಮ್ಮ ಸರ್ಕಾರ ಜಾಹೀರಾತಿನಲ್ಲಿ ಸತ್ಯವನ್ನಾದರೂ ಹೇಳಬೇಕಲ್ಲವೆ? ಜಾಹೀರಾತಿನಲ್ಲಿ ಮೋದಿಯವರು 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ್ದಾರೆ ಎಂದು ತೋರಿಸುತ್ತೀರಿ. ಬಜೆಟ್‍ನಲ್ಲಿ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ನೀಡುತ್ತಿರುವುದಾಗಿ ಹೇಳುತ್ತೀರಿ. 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದ ಮೇಲೆ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ಕೊಡುವ ಪರಿಸ್ಥಿತಿ ಯಾಕೆ? ನಿಮ್ಮ ಮೋದಿ ಗ್ಯಾರಂಟಿ ಎಂಬ ಜಾಹೀರಾತು ಎಂತಹ ಸುಳ್ಳಿನ ಮೂಟೆ ಎಂದು ಇದರಲ್ಲೇ ತಿಳಿಯುತ್ತದೆ ಅಲ್ಲವೇ ಎಂದು ಅವರು ವ್ಯಂಗ್ಯ ಮಾಡಿದ್ದಾರೆ.

ಲೋಕಸಭೆಯಲ್ಲಿ ಶ್ವೇತಪತ್ರವನ್ನು ಯುಪಿಎ ಅವಧಿಯ ಆಡಳಿತವನ್ನು ಟೀಕಿಸಲು ಬಳಸಿದ್ದೀರಿ. ಶ್ವೇತಪತ್ರ ಎಂಬುದು ಸರ್ಕಾರವೊಂದರ ಖರ್ಚು, ವೆಚ್ಚ, ಬಾಬ್ತು, ಆರ್ಥಿಕ ಹಿನ್ನೋಟ ಮತ್ತು ಆರ್ಥಿಕ ಮುನ್ನೋಟದ ನಿಖರ ಅಂಕಿ ಅಂಶದ ದಾಖಲೆ. ನೀವು ಮಂಡಿಸಿದ ಶ್ವೇತಪತ್ರ ಯುಪಿಎ ಆಡಳಿತ ಟೀಕಿಸುವುದಕ್ಕೆ ಸೀಮಿತವಾಯಿತು. ಶ್ವೇತಪತ್ರದಲ್ಲಿ ನಿಮ್ಮ ಸರ್ಕಾರದ ಆರ್ಥಿಕ ವೈಫಲ್ಯದ ಉಲ್ಲೇಖವೇಕಿಲ್ಲ? ಕಳೆದ ಹತ್ತು ವರ್ಷಗಳಿಂದ ನಿಮ್ಮ ಸರ್ಕಾರ ಕಡಿದು ಗುಡ್ಡೆ ಹಾಕಿದ್ದು ಏನು ಎಂದು ತೆರೆದಿಡಬೇಕಿತ್ತಲ್ಲವೇ ಎಂದು ಅವರು ಕುಟುಕಿದ್ದಾರೆ.

2014 ರವರೆಗೆ ದೇಶದ ಸಾಲ 54 ಲಕ್ಷ ಕೋಟಿ ರೂ. ಇತ್ತು ಆದರೆ ನೀವು ಮತ್ತು ಕೆಲವು ಅಂಧಭಕ್ತರ ಪಾಲಿನ ಅವತಾರ ಪುರುಷ ಮೋದಿಯವರು ಕೇವಲ ಹತ್ತು ವರ್ಷದಲ್ಲಿ ದೇಶದ ಸಾಲವನ್ನು 171 ಲಕ್ಷ ಕೋಟಿ ರೂ. ಗಡಿ ದಾಟಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶದ ಸಾಲ ದಾಖಲೆಯ 211% ರಷ್ಟು ಏರಿಕೆಯಾಗಿದೆ. ನಿಮ್ಮ ಮೋದಿ ಮಾಡಿರುವ ಸಾಲದಿಂದ ಪ್ರತಿಯೊಬ್ಬ ಭಾರತೀಯನ ತಲೆಯ ಮೇಲೆ 1.30 ಲಕ್ಷ ರೂ. ಸಾಲದ ಹೊರೆ ಬಿದ್ದಿದೆ. ಯಾರ ಉದ್ಧಾರಕ್ಕಾಗಿ ಮೋದಿಯವರು ಇಷ್ಟೊಂದು ಸಾಲ ಮಾಡಿದರು? ನಿಮ್ಮ ಸರ್ಕಾರ ಈ ಪ್ರಮಾಣದಲ್ಲಿ ಸಾಲ ಮಾಡಿದ್ದು ಯಾಕೆ ಎಂಬುದು ಶ್ವೇತಪತ್ರದಲ್ಲಿ ಉಲ್ಲೇಖವಾಗಬೇಕಿತ್ತಲ್ಲವೇ? ಶ್ವೇತಪತ್ರದಲ್ಲಿ ಸಾಲದ ಬಗ್ಗೆ ಪ್ರಸ್ತಾಪ ಮಾಡಲು ನಿಮಗೆ ಅಪಥ್ಯವಾಯಿತೆ? ನೀವು ಈ ದೇಶದ ಹಣಕಾಸು ಮಂತ್ರಿ, ಆದರೆ ನೀವು ಹಿಟ್ಲರ್ ಸಂಪುಟದ ಪ್ರೊಪಾಗ್ಯಾಂಡ ಮಿನಿಸ್ಟರ್ ಗೋಬೆಲ್ಸ್‍ನಂತೆ ವರ್ತಿಸುತ್ತಿದ್ದೀರಿ. ಹಿಟ್ಲರ್ ಮಾಡಿದ್ದ ದುಷ್ಕøತ್ಯಗಳನೆಲ್ಲಾ ಗೋಬೆಲ್ಸ್ ಮಹತ್ಕಾರ್ಯ ಎಂದು ಜರ್ಮನ್ನರಲ್ಲಿ ಪ್ರಚಾರ ಮಾಡಿ ಭ್ರಮೆ ಸೃಷ್ಟಿಸುತ್ತಿದ್ದ. ಜರ್ಮನ್ನರಿಗೆ ಹಿಟ್ಲರ್‍ನ ಅಸಲಿ ಮುಖ ತಿಳಿಯುವ ಹೊತ್ತಿಗೆ ಜರ್ಮನಿಯೇ ನಾಶವಾಗಿತ್ತು. ಸುಳ್ಳು ಪ್ರಚಾರ ಹಾಗೂ ಜನರಲ್ಲಿ ಕಲ್ಪಿತ ಭ್ರಮೆಗಳನ್ನು ಸೃಷ್ಟಿಸಿ ಭಾರತವನ್ನು ಇನ್ನೊಂದು ಜರ್ಮನಿ ಮಾಡಬೇಡಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರನ್ನು ಭೇಟಿಯಾದ 6 ವರ್ಷದ ʼರೈಲ್‌ ಮಂತ್ರಿʼ!

Share This Article