ಚಿಕ್ಕಮಗಳೂರು: ನಿವೃತ್ತ ಸರ್ಕಾರಿ ನೌಕರನೊಬ್ಬ ನಕಲಿ ಸಿಬಿಐ ಅಧಿಕಾರಿಗಳಿಂದ ಡಿಜಿಟಲ್ ಅರೆಸ್ಟ್ (Digital Arrest) ಆಗಿ 37 ಲಕ್ಷ ರೂ. ಹಣ ಕಳೆದುಕೊಂಡಿರುವುದು ಶೃಂಗೇರಿಯಲ್ಲಿ ನಡೆದಿದೆ.
ವಂಚಕರು ದೆಹಲಿಯಿಂದ ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ವಾಟ್ಸಪ್ ವೀಡಿಯೋ ಕಾಲ್ ಮಾಡಿ, ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡನ್ನು ಬೇರೊಬ್ಬರು ಉಪಯೋಗಿಸಿ ಮನಿ ಲಾಂಡರಿಂಗ್ ಮಾಡುತ್ತಿದ್ದಾರೆ. ಆ ಆರೋಪಿಯನ್ನು ಬಂಧಿಸಲಾಗಿದೆ. ಈ ಕೇಸ್ ಕೋರ್ಟ್ನಲ್ಲಿದೆ. ಹೀಗಾಗಿ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ಆರ್ಬಿಐನಿಂದ ಪರಿಶೀಲನೆ ಮಾಡಿಸಿ, ಮರಳಿ ನೀಡುವುದಾಗಿ ಹೇಳಿ ವಂಚಿಸಿದ್ದಾರೆ. ಅಲ್ಲದೇ, ಯಾವುದೇ ಕಾರಣಕ್ಕೂ ರಿಟರ್ನ್ ಕಾಲ್ ಮಾಡದಂತೆ ನಕಲಿ ಸಿಬಿಐ ಐಡಿ ಕಾರ್ಡ್ ತೋರಿಸಿ ಬೆದರಿಸಿದ್ದಾರೆ. ಇದನ್ನೂ ಓದಿ: Cyber Crime| ಚಿತ್ರದುರ್ಗದಲ್ಲಿ ಹಿರಿಯ ವೈದ್ಯರಿಗೆ 1.27 ಕೋಟಿ ವಂಚನೆ
ನಿವೃತ್ತ ನೌಕರ ಹಂತ-ಹಂತವಾಗಿ ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣದ ಜೊತೆಗೆ ತಮ್ಮ ಪತ್ನಿಯ ಖಾತೆಯಲ್ಲಿದ್ದ ಒಟ್ಟು 37 ಲಕ್ಷ ರೂ. ಹಣವನ್ನು ನಕಲಿ ಆರ್ಬಿಐ ಖಾತೆ ವರ್ಗಾಯಿಸಿದ್ದಾನೆ. ಬಳಿಕ, ಈ ವಿಷಯವನ್ನು ಯಾರಿಗೂ ಹೇಳದೆ 6 ತಿಂಗಳು ಕಳೆದಿದ್ದಾನೆ. ಹಣ ವಾಪಸ್ ಬರದೇ ಇದ್ದಿದ್ದರಿಂದ ವಂಚನೆಗೆ ಒಳಗಾಗಿರುವುದು ತಿಳಿದು, ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಇತ್ತೀಚೆಗೆ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದು ವೇಳೆ ಯಾರಾದರೂ ಸೈಬರ್ ಕ್ರೈಂ ಗೆ ಒಳಗಾದರೆ, ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕೆಂದು ಚಿಕ್ಕಮಗಳೂರು (Chikkamagaluru) ಪೊಲೀಸರು ಮನವಿ ಮಾಡಿದ್ದಾರೆ. ಇದನ್ನೂ ಓದಿ: Cyber Attack | ಸ್ಟಾರ್ ಹೆಲ್ತ್ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು