ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ

2 Min Read

ಬೆಂಗಳೂರು: ಕೇರಳ ವಿಧಾನಸಭಾ ಚುನಾವಣಾ(Kerala Election) ಪ್ರಚಾರ ಭಾಷಣದಲ್ಲಿ ಗುಜರಾತಿಗಳು ಅನಕ್ಷರಸ್ಥರು (People illiterate in Gujarat) ಎಂಬ ತಮ್ಮ ಹೇಳಿಕೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Kharge) ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ಇತ್ತೀಚೆಗೆ ಕೇರಳದಲ್ಲಿ ನಡೆದ ಚುನಾವಣಾ ಭಾಷಣದಲ್ಲಿ ನಾನು ಮಾಡಿದ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ. ಹೀಗಿದ್ದರೂ ಈ ಹೇಳಿಕೆಗೆ ನನ್ನ ಪ್ರಾಮಾಣಿಕ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಗುಜರಾತ್ ಜನರ ಭಾವನೆಗಳನ್ನು ನೋಯಿಸುವುದು ನನ್ನ ಉದ್ದೇಶವಾಗಿರಲಿಲ್ಲ. ಗುಜರಾತ್ ಜನರ ಬಗ್ಗೆ ನನಗೆ ಯಾವಾಗಲೂ ಗೌರವವಿದೆ ಮತ್ತು ಮುಂದೆಯೂ ಗೌರವ ಇರುತ್ತದೆ ಎಂದು ಬರೆದಿದ್ದಾರೆ.


ಖರ್ಗೆ ಹೇಳಿದ್ದೇನು?
ಏಪ್ರಿಲ್ 5, 2026 ರಂದು ಕೇರಳದ ಇಡುಕ್ಕಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: RSS, BJP ಕಾರ್ಯಕರ್ತರನ್ನು ಕೊಲ್ಲಲು ಮುಸ್ಲಿಮರಿಗೆ ಮಲ್ಲಿಕಾರ್ಜುನ ಖರ್ಗೆ ಕರೆ ಆರೋಪ – ಬೆಂಗ್ಳೂರಲ್ಲಿ ದೂರು ದಾಖಲು

ಕೇರಳದ ಜನರು ಬಹಳ ಬುದ್ಧಿವಂತರು ಮತ್ತು ವಿದ್ಯಾವಂತರು. ಅವರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಪ್ರಧಾನಿ ಮೋದಿ ಮತ್ತು ಪಿಣರಾಯಿ ವಿಜಯನ್ ಅವರು ಗುಜರಾತ್ ಅಥವಾ ಇತರ ಕಡೆಗಳಲ್ಲಿ ಇರುವ ಅನಕ್ಷರಸ್ಥರನ್ನು ಬೇಕಾದರೆ ಮರುಳು ಮಾಡಬಹುದು, ಆದರೆ ಕೇರಳದ ಜನರನ್ನು ಮರುಳು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.

ಈ ಹೇಳಿಕೆಯನ್ನು ಖಂಡಿಸಿದ ಬಿಜೆಪಿ, ಗುಜರಾತ್ ಜನರನ್ನು ಅನಕ್ಷರಸ್ಥರು ಎಂದು ಕರೆಯುವ ಮೂಲಕ ಖರ್ಗೆ ಅವರು ಇಡೀ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿತ್ತು.

ಕೇರಳದ ಸಾಕ್ಷರತೆಯ ಪ್ರಮಾಣ ಹೆಚ್ಚಿರುವುದನ್ನು ಶ್ಲಾಘಿಸುವ ಭರದಲ್ಲಿ ಗುಜರಾತಿಗಳನ್ನು ಅನಕ್ಷರಸ್ಥರು ಎಂದು ಹೋಲಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.

Share This Article