ಅತ್ಯಾಪ್ತ ಜಾಕ್ ಮಂಜುಗಾಗಿ ಟಿಕೆಟ್ ಬೇಡಿಕೆ ಇಟ್ರಾ ಕಿಚ್ಚ ಸುದೀಪ್?

Public TV
1 Min Read

ಟ ಸುದೀಪ್ (Sudeep) ಬಿಜೆಪಿ (BJP) ಸೇರ್ಪಡೆ ವಿಚಾರ ನಾನಾ ತಿರುವುಗಳಿಗೆ ಕಾರಣವಾಗುತ್ತಿದೆ. ಚಿತ್ರೋದ್ಯಮದಲ್ಲಿ ಪರ ವಿರೋಧದ ಚರ್ಚೆ ಶುರುವಾಗಿದ್ದರೆ, ರಾಜಕೀಯ ಕ್ಷೇತ್ರದಲ್ಲಿ ಇದನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಎಲ್ಲ ಪಕ್ಷಗಳಲ್ಲೂ ಗುರುತಿಸಿಕೊಂಡಿರುವ ಅಸಂಖ್ಯಾತ ಅಭಿಮಾನಿಗಳಿಗೆ ಸುದೀಪ್ ಯಾವ ಸಂದೇಶ ರವಾನಿಸಲಿದ್ದಾರೆ ಎಂದೂ ಪ್ರಶ್ನೆ ಮಾಡಲಾಗುತ್ತಿದೆ. ಈ ಮಧ್ಯ ಮತ್ತೊಂದು ಸುದ್ದಿಯೂ ಹರಿದಾಡುತ್ತಿದೆ.

ಸುದೀಪ್ ಅವರ ಆಪ್ತ ಸ್ನೇಹಿತ ಹಾಗೂ ಮ್ಯಾನೇಜರ್ ಕೂಡ ಆಗಿರುವ ಜಾಕ್ ಮಂಜು (Jack Manju) ಈ ಬಾರಿಯ ವಿಧಾನಸಭೆಯ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರಂತೆ. ಚಿಕ್ಕಪೇಟೆ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಮನಸ್ಸು ಮಾಡಿದ್ದಾರಂತೆ. ಮಂಜು ಅವರಿಗೆ ಟಿಕೆಟ್ ಕೊಡುವಂತೆ ಸುದೀಪ್ ಬೇಡಿಕೆ ಇಟ್ಟಿದ್ದಾರೆ. ಈ ಕಾರಣಕ್ಕಾಗಿ ಅವರು ಬಿಜೆಪಿಯನ್ನು ಬೆಂಬಲಿಸಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಕಿಚ್ಚ ಸುದೀಪ್ ಬಿಜೆಪಿಗೆ ಸೇರಲಿದ್ದಾರೆ ಎನ್ನುವ ಸುದ್ದಿ ಹರಡುತ್ತಿದ್ದಂತೆಯೇ ಹಲವರು ಹಲವು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಸ್ಟಾರ್ ನಟರಾಗಿ ಅಸಂಖ್ಯಾತ ಅಭಿಮಾನಿಗಳ ಹೃದಯದಲ್ಲಿರುವ ಸುದೀಪ್ ರಾಜಕೀಯ ಕ್ಷೇತ್ರಕ್ಕೆ ಬಂದು ಮತ್ತಷ್ಟು ಸೇವೆ ಮಾಡಲಿ ಎಂದು ಹಾರೈಸುತ್ತಿದ್ದಾರೆ. ನಟ ಪ್ರಕಾಶ್ ರಾಜ್ ಈ ನಡೆಗೆ ಬಿಜೆಪಿಯನ್ನು ದೂರಿದ್ದಾರೆ. ಮತ್ತು ಈ ಸುದ್ದಿ ಸುಳ್ಳಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸುದೀಪ್ ಬಿಜೆಪಿಗೆ ಸೇರ್ಪಡೆ ವಿಚಾರವಾಗಿ ಟ್ವೀಟ್ ಮಾಡಿರುವ ಪ್ರಕಾಶ್ ರೈ ‘ಕರ್ನಾಟಕದಲ್ಲಿ ಸೋಲುವ ಭಯದಲ್ಲಿ ಭ್ರಷ್ಟ ಬಿಜೆಪಿ ಹರಡುತ್ತಿರುವ ಸುಳ್ಳು ಸುದ್ದಿ ಎಂದು ನಾನು ನಂಬುತ್ತೇನೆ. ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಗೆ ಅಸಂಖ್ಯಾತ ಜನರು ಪ್ರತಿಕ್ರಿಯಿಸಿದ್ದಾರೆ.

ನಟ ಸುದೀಪ್ ಇಂದು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಅವರು ಪಕ್ಷವನ್ನು ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುದೀಪ್ ಅವರ ಆಪ್ತರ ಪ್ರಕಾರ ಅಧಿಕೃತವಾಗಿ ಬಿಜೆಪಿಗೆ ಸೇರದೆ ಸ್ಟಾರ್ ಪ್ರಚಾರಕರಾಗಿ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.

Share This Article