ನಟ, ಸಿಸಿಎಲ್ ಆಟಗಾರ ಧ್ರುವ ಸಾವಿಗೆ ಟ್ವಿಸ್ಟ್- ಆತ್ಮಹತ್ಯೆ ಎಂದು ಪೊಲೀಸರಿಗೆ ತಂದೆಯಿಂದ ದೂರು

Public TV
2 Min Read

ಬೆಂಗಳೂರು: ನಟ, ಸಿಸಿಎಲ್ ಆಟಗಾರ ಧೃವ ಶರ್ಮಾ ಸಾವು ಆತ್ಮಹತ್ಯೆ ಎಂದು ತಿಳಿದುಬಂದಿದೆ.

ಸಾಲಬಾಧೆಯಿಂದ ಧ್ರುವ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಂದೆ ಸುರೇಶ್ ಶರ್ಮಾರಿಂದಲೇ ರಾಜನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಧ್ರುವ ಅವರು ಶನಿವಾರ ರಾತ್ರಿ 9 ಗಂಟೆಗೆ ವಿಷ ಕುಡಿದು ಬಂದು ಮನೆಯಲ್ಲಿ ಪ್ರಜ್ಞೆ ಇಲ್ಲದೆ ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಮೂರ್ಛೆ ರೋಗ ಅಂತಾ ದಾಖಲಿಸಲಾಗಿತ್ತು. ಆದ್ರೆ ಮಧ್ಯರಾತ್ರಿ 01:30ಕ್ಕೆ ಧ್ರುವ ಕೊನೆಯುಸಿರೆಳೆದಿದ್ದಾರೆ.

ಬೆಳಿಗ್ಗೆ ಮೂರು ಗಂಟೆಗೆ ನಟ ಸುದೀಪ್, ಪ್ರದೀಪ್, ನಂದ ಕಿಶೊರ್ ಆಸ್ಪತ್ರೆಗೆ ಭೇಟಿ ನೀಡಿದ್ರು. ಧ್ರುವ ಅವರು ಪತ್ನಿ, 5 ವರ್ಷದ ಮಗಳು ಹಾಗೂ 2 ವರ್ಷದ ಮಗನನ್ನ ಅಗಲಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಪಾರ್ಥೀವ ಶರೀರ ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಬಳಿ ಇರೋ ಪ್ರಿಸ್ಟೀಜ್ ವಿಲ್ಲಾಗೆ ರವಾನೆ ಆಗಲಿದೆ. ಇಂದು ಬೆಳಗ್ಗೆ 7:30ಕ್ಕೆ ಮರಣೋತ್ತರ ಪರೀಕ್ಷೆಗಾಗಿ ಧ್ರುವ ಶರ್ಮಾ ಪಾರ್ಥಿವ ಶರೀರ ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆಯಾಗಲಿದೆ.

ಧ್ರುವ ಅವರಿಗೆ ವಿದ್ಯಾರಣ್ಯಪುರದಲ್ಲಿ ನಾಯಿಗೆ ಆಹಾರ ತಯಾರು ಮಾಡೋ ಫ್ಯಾಕ್ಟರಿ ಇದ್ದು, ಅದು ನಷ್ಟದಲ್ಲಿ ನಡೆಯುತ್ತಾ ಇತ್ತು ಎನ್ನಲಾಗಿದೆ.

ಧ್ರುವ ಒಪ್ಪಿಕೊಂಡ ಸಿನಿಮಾವೊಂದರ ಶೂಟಿಂಗ್ ಕಂಪ್ಲೀಟ್ ಮಾಡಿದ್ದರು. ಸಿನಿಮಾದಲ್ಲಿ ಧ್ರುವ ಮೂಗನ ಪಾತ್ರದಲ್ಲಿ ಅಭಿನಯಿಸಿದ್ದು, ಮುಂದಿನ ತಿಂಗಳು ಆಡಿಯೋ ಲಾಂಚ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು.

ಧ್ರುವ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇವರು ಸಿಸಿಎಲ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್‍ನಲ್ಲಿ ಉಪ ನಾಯಕರಾಗಿದ್ದರು. ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್ ಸಿನಿಮಾದಲ್ಲಿ ನಟಿಸಿದ್ದರು.

ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

 ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರ ಪಾಠ ಕೇಳ್ತಿಲ್ಲ ಅನ್ನೋ ಕಾರಣ ಕೊಟ್ಟು ಕಾಲೇಜಿನಿಂದಲೇ ಹೊರಹಾಕಿದ್ದರು. ಸ್ಯಾಂಡಲ್‍ವುಡ್‍ನ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ ಕೂಡ ಧ್ರುವ ಅವರ ಪ್ರತಿಭೆಗೆ ಮಾರು ಹೋಗಿದ್ದರು. ಕೇವಲ ನಟ ಮಾತ್ರವಲ್ಲದೇ ಧ್ರುವ ಒಳ್ಳೆಯ ಸ್ಟಂಟ್ ಕೂಡಾ ಮಾಡುತ್ತಿದ್ದರು.
Share This Article
Leave a Comment

Leave a Reply

Your email address will not be published. Required fields are marked *