ಬೈಕ್-ಆಟೋ ಮುಖಾಮುಖಿ ಡಿಕ್ಕಿ: ಬಿಕ್ಕಿ ಬಿಕ್ಕಿ ಪ್ರಾಣ ಬಿಟ್ಟ ಸವಾರ

Public TV
1 Min Read

– ಆಟೋ ಚಾಲಕ ಸೇರಿ ಮೂವರ ಸ್ಥಿತಿ ಗಂಭೀರ
– ಬೈಕ್, ಆಟೋ ಪೀಸ್ ಪೀಸ್

ಧಾರವಾಡ: ಬೈಕ್ ಹಾಗೂ ಆಟೋ ನಡುವೆ ಡಿಕ್ಕಿ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಹೊಲ್ತಿಕೋಟಿ ಗ್ರಾಮದ ಕ್ರಾಸ್ ಬಳಿ ನಡೆದಿದೆ.

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಸಂತೋಷ್ ಪಾಟೀಲ್ (22) ಮೃತ ಬೈಕ್ ಸವಾರ. ದುರ್ಘಟನೆಯಲ್ಲಿ ಸಂತೊಷ್ ಕಮ್ಮಾರ್ (22), ರವಿ ರೇವಣ್ಣವರ್ (19) ಹಾಗೂ ಆಟೋ ಚಾಲಕ ಇಮ್ತಿಯಾಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಂಕ್ರಮಣದ ಹಿನ್ನೆಲೆ ಸಂತೋಷ್ ಪಾಟೀಲ್ ಹಾಗೂ ಆತನ ಇಬ್ಬರು ಸ್ನೇಹಿತರು ಒಂದೇ ಬೈಕ್‍ನಲ್ಲಿ ಧಾರವಾಡದ ನಿಗದಿಯಿಂದ ಕಾರವಾರದ ದಾಂಡೇಲಿಗೆ ಸ್ನಾನ ಮಾಡಲು ಹೋಗುತ್ತಿದ್ದರು. ಆದರೆ ಹೊಲ್ತಿಕೋಟಿ ಗ್ರಾಮದ ಬಳಿ ಆಟೋ ಚಾಲಕ ಹಾಗೂ ಬೈಕ್ ಸವಾರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್‍ನಲ್ಲಿದ್ದ ಮೂವರು ಕೆಳಗೆ ಬಿದ್ದಿದ್ದಾರೆ.

ಸಂತೋಷ್ ಪಾಟೀಲ್ ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಅತಿಯಾದ ರಕ್ತಸ್ರಾವದಿಂದ ಬಿಕ್ಕಿ ಬಿಕ್ಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಇದನ್ನು ನೋಡಿದ ಸ್ಥಳೀಯರು ಆಂಬುಲೆನ್ಸ್ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಯುವಕರು ಹಾಗೂ ಆಟೋ ಚಾಲಕನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಾಗಿಸಿದ್ದರು. ಆದರೆ ರವಿ ಹಾಗೂ ಇಮ್ತಿಯಾಜ್‍ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.

ಘಟನೆಯಲ್ಲಿ ಬೈಕ್ ಹಾಗೂ ಆಟೋ ಜಖಂಗೊಂಡಿವೆ. ಈ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಸಂತೋಷ್ ಪಾಟೀಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *