ಕಿರಿಯ ಮಗನ ಜೊತೆ ಸೇರಿ ಹಿರಿಯ ಮಗನನ್ನು ಕೊಲೆಗೈದು ತಾನೇ ದೂರು ನೀಡಿದ ತಾಯಿ!

Public TV
1 Min Read

ಧಾರವಾಡ: ಆಸ್ತಿಗಾಗಿ ತಾಯಿಯೊಬ್ಬಳು ತನ್ನ ಕಿರಿಯ ಮಗನ ಜೊತೆ ಸೇರಿ ಹಿರಿಯ ಮಗನನ್ನು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಚನ್ನಪ್ಪ ಹೊಸಮನಿಯೇ ತಾಯಿ ಹಾಗೂ ಸಹೋದರನಿಂದ ಕೊಲೆಯಾದ ವ್ಯಕ್ತಿ. ಕಳೆದ ಜೂನ್ 29 ರಂದು ದೇವಿಕೊಪ್ಪ ಗ್ರಾಮದ ಬಳಿಯ ಇಂಚಗೇರಿ ಕ್ರಾಸ್ ಬಳಿ ಚನ್ನಪ್ಪ ಶವ ಪತ್ತೆಯಾಗಿತ್ತು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ್ದ ಕಲಘಟಗಿ ಪೊಲೀಸರು, ತನಿಖೆ ಕೈಗೊಂಡಿದ್ದರು.

ಇತ್ತ ಕೊಲೆಯಾದ ಚನ್ನಪ್ಪನ ತಾಯಿ ಮಲ್ಲವ್ವ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಮಗನ ಕೊಲೆಯಾಗಿದೆ ಎಂದು ದೂರನ್ನು ನೀಡಿದ್ದಳು. ನಂತರ ಪೊಲೀಸರು ತನಿಖೆ ನಡೆಸಿದ ಬಳಿಕ ಮಲ್ಲವ್ವ, ಸಹೋದರ ಬಸವರಾಜ್, ಸುಪಾರಿ ಹಂತಕರಾದ ನಾಗಯ್ಯ ಹಿರೇಮಠ ಹಾಗೂ ಚನ್ನಬಸಪ್ಪ ಎಂಬವರನ್ನು ಬಂಧಿಸಿದ್ದರು.

ವಿಚಾರಣೆ ನಡೆಸಿದ ವೇಳೆ 2 ಎಕರೆ ಆಸ್ತಿಗಾಗಿ ಮಗನ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ತಾಯಿ ಮಲ್ಲವ್ವ ಒಪ್ಪಿಕೊಂಡಿದ್ದಾಳೆ. ಅಲ್ಲದೇ ಈ ಕೊಲೆ ದೇವಿಕೊಪ್ಪ ಗ್ರಾಮದ ಚನ್ನಪ್ಪನ ಮನೆಯಲ್ಲೇ ನಡೆದಿದ್ದು, ಕೊಲೆಯ ನಂತರ ಹಂತಕರು ಶವವನ್ನ ಇಂಚಗೇರಿ ಕ್ರಾಸ್ ಬಳಿ ತಂದು ಎಸೆದು ಹೋಗಿರುವುದಾಗಿ ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಸದ್ಯ ಈ ನಾಲ್ವರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕಲಘಟಗಿ ಪೊಲೀಸರು, ಅರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *