– ಮಂಪರು ಪರೀಕ್ಷೆ ನಡೆಸಲು ಅರ್ಜಿ ಸಲ್ಲಿಸಿದ್ದ ಪೊಲೀಸರು
– ದಕ್ಷಿಣ ಕನ್ನಡ ಪೊಲೀಸರನ್ನು ತೇಜೋವಧೆ ಮಾಡಿತ್ತು ಬುರುಡೆ ಗ್ಯಾಂಗ್
ಮಂಗಳೂರು: ಬುರುಡೆ ಗ್ಯಾಂಗಿನ ಪಾತ್ರಧಾರಿ ಚಿನ್ನಯ್ಯನಿಗೆ (Chinnayya) ಮೊದಲೇ ಮಂಪರು ಪರೀಕ್ಷೆ ಮಾಡಿದ್ದರೆ ಒಂದು ತಿಂಗಳ ಕಾಲ ಧರ್ಮಸ್ಥಳದಲ್ಲಿ (Dharmasthala) ಈ ಬೃಹತ್ ನಾಟಕವೇ ನಡೆಯುತ್ತಿರಲಿಲ್ಲ ಎಂಬ ಮಾತುಗಳು ಈಗ ಕೇಳಿ ಬರುತ್ತಿವೆ.
ಹೌದು. ಪಾಪ ಪ್ರಜ್ಞೆ ಕಾಡುತ್ತಿರುವ ಹಿನ್ನೆಲೆಯಲ್ಲಿ ನಾನು ಸತ್ಯ ಹೇಳಲು ಮುಂದೆ ಬಂದಿದ್ದೇನೆ ಎಂದಾಗಲೇ ದಕ್ಷಿಣ ಕನ್ನಡದ ಜಿಲ್ಲಾ ಎಸ್ಪಿ ಡಾ. ಅರುಣ್ (Dr. Arun) ಅವರು ಚೆನ್ನಯ್ಯನಿಗೆ ಮಂಪರು ಪರೀಕ್ಷೆ ಮಾಡಲು ಮುಂದಾಗಿದ್ದರು.
ಚೆನ್ನಯ್ಯನ ಬಗ್ಗೆ ಅರುಣ್ ಕುಮಾರ್ ಮತ್ತು ದಕ್ಷಿಣ ಕನ್ನಡದ ಪೊಲೀಸರಿಗೆ ಕೆಲ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಕೋರ್ಟ್ಗೆ ಮಂಪರು ಪರೀಕ್ಷೆ ಮಾಡಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಹಣದ ಆಮಿಷವೊಡ್ಡಿ ಧರ್ಮಸ್ಥಳಕ್ಕೆ ಕರೆಸಿದ್ದರು: ಸತ್ಯ ಕಕ್ಕಿದ ಚಿನ್ನಯ್ಯ
ಪೊಲೀಸರು ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅರುಣ್ ಕುಮಾರ್ ಮತ್ತು ದಕ್ಷಿಣ ಕನ್ನಡದ ಪೊಲೀಸರ ವಿರುದ್ಧವೇ ಈ ಬುರುಡೆ ಗ್ಯಾಂಗ್ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡಲು ಆರಂಭಿಸಿತ್ತು. ಸಾಕ್ಷಿಯನ್ನು ಕೊಲ್ಲಲು ಮುಂದಾಗಿದ್ದಾರೆ. ವ್ಯವಸ್ಥೆಯೇ ಷಡ್ಯಂತ್ರದ ಭಾಗವಾಗಿದೆ ಎಂದು ದೂರಲು ಆರಂಭಿಸಿತ್ತು. ಈ ಮಧ್ಯೆ ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಆದೇಶಿಸಿತ್ತು.
ಚೆನ್ನಯ್ಯ ತೋರಿಸಿದ 11ನೇ ಜಾಗದ ಮೇಲ್ಭಾಗದ ಗುಡ್ಡದಲ್ಲಿ ಒಂದು ಕಳೇಬರ ಪತ್ತೆಯಾಗಿತ್ತು. ಈ ಕಳೇಬರ ಪತ್ತೆಯಾದ ನಂತರ ಈ ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಬೇಕಾ? ಬೇಡವೇ ಎಂಬುದರ ಬಗ್ಗೆ ದಕ್ಷಿಣ ಕನ್ನಡ ಪೊಲೀಸರಿಗೆ ಮತ್ತು ಎಸ್ಐಟಿ ಪೊಲೀಸರ ಮಧ್ಯೆ ಸಣ್ಣ ಗೊಂದಲ ಏರ್ಪಟ್ಟಿತ್ತು. ಇದನ್ನೂ ಓದಿ: ನಂಗೆ ಆರೋಗ್ಯ ಸರಿಯಿಲ್ಲ, ಬೆದರಿಕೆಯಿದೆ – ರಕ್ಷಣೆ ಕೊಡಿ ಅಂತಾ ಪೊಲೀಸರಿಗೆ ಸುಜಾತ ಭಟ್ ಮನವಿ
ದಕ್ಷಿಣ ಕನ್ನಡ ಪೊಲೀಸರು ಈ ಕಳೇಬರದ ತನಿಖೆಯ ವ್ಯಾಪ್ತಿ ನಮಗೆ ಸೇರಬೇಕು. ಎಸ್ಐಟಿ ತನಿಖೆ ಹೂತಿದ್ದ ಶವಗಳ ಬಗ್ಗೆ ತನಿಖೆ ನಡೆಸಬೇಕು. ಆದರೆ ಇದು ಆತ್ಮಹತ್ಯೆ ಮಾಡಿಕೊಂಡ ಬಳಿ ನೆಲದ ಮೇಲೆ ಮೂಳೆಗಳು ಬಿದ್ದಿದೆ. ಹೀಗಾಗಿ ಈ ತನಿಖೆ ಎಸ್ಐಟಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದ್ದರು. ಆದರೆ ಶವ ಶೋಧದ ತನಿಖೆಯ ವೇಳೆ ಈ ಮೂಳೆಗಳು ಪತ್ತೆಯಾಗಿರುವ ಕಾರಣ ಕೊನೆಗೆ ಈ ಪ್ರಕರಣವನ್ನು ಎಸ್ಐಟಿಗೆ ವರ್ಗಾಯಿಸಲಾಗಿತ್ತು.