ಅಣ್ಣಾಮಲೈ ವಿರುದ್ಧ ಎಫ್‍ಐಆರ್ ದಾಖಲು

Public TV
1 Min Read

ಚೆನ್ನೈ: ತಮಿಳುನಾಡಿನ ಬಿಜೆಪಿ (BJP) ಅಧ್ಯಕ್ಷ ಕೆ.ಅಣ್ಣಾಮಲೈ (Annamalai) ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎರಡು ಗುಂಪುಗಳ ನಡುವೆ ಧಾರ್ಮಿಕ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಧರ್ಮಪುರಿಯ ಬೊಮ್ಮಿಡಿ ಪೊಲೀಸ್ (Police) ಠಾಣೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಜನವರಿ 8 ರಂದು ಪಾಪ್ಪಿರೆಡ್ಡಿಪಟ್ಟಿ ಬಳಿಯ ಬೊಮ್ಮಿಡಿಯ ಸೇಂಟ್ ಲೂಡ್ರ್ಸ್ ಚರ್ಚ್‍ನ ಹೊರಗೆ ನಡೆದ ರ‍್ಯಾಲಿಯಲ್ಲಿ ಚರ್ಚ್‍ಗೆ ಅವರು ಪ್ರವೇಶಿಸುವುದನ್ನು ವಿರೋಧಿಸಿದ ಕ್ರಿಶ್ಚಿಯನ್ ಯುವಕರ ಗುಂಪಿನೊಂದಿಗೆ ಅಣ್ಣಾಮಲೈ ವಾಗ್ವಾದ ನಡೆಸಿದ್ದರು. ಈ ವೇಳೆ ಚರ್ಚ್ ಪ್ರವೇಶಿಸದಂತೆ ತಡೆದ ಪ್ರತಿಭಟನಾಕಾರರು ಮತ್ತು ಬಿಜೆಪಿ ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಗದ್ದಲದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಮ ಮಂದಿರ ಉದ್ಘಾಟನೆ ಭಾರತದ ಹಬ್ಬ: ಹೆಚ್‌ಡಿಕೆ

ಈ ವೀಡಿಯೋ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವೈರಲ್ ಆಗಿದ್ದು, ಅದರಲ್ಲಿ ಅಣ್ಣಾಮಲೈ ಪ್ರತಿಭಟನಾಕಾರರ ಭುಜದ ಮೇಲೆ ಕೈಯಿಟ್ಟು ಸಮಾಧಾನಪಡಿಸಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾ ನಿರತ ಯುವಕರನ್ನು ಅಲ್ಲಿಂದ ಚದುರಿಸಿದ್ದರು. ಬಳಿಕ ಅಣ್ಣಾಮಲೈ ಚರ್ಚ್‍ಗೆ ಪ್ರವೇಶಿಸಿದ್ದರು.

ಅಣ್ಣಾಮಲೈ ವಿರುದ್ಧ ಐಪಿಸಿ ಸೆಕ್ಷನ್ 153 (ಎ), 504, 505 (2) ಅಡಿಯಲ್ಲಿ ಶಾಂತಿಗೆ ಧಕ್ಕೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸಿಗನಿಗೆ ಅಯೋಧ್ಯೆಯ ಮಂತ್ರಾಕ್ಷತೆ ಹಂಚಿದ ಮಲೆನಾಡಿಗರು

Share This Article