ಕುಂದಗೋಳಕ್ಕೆ ಮೇ 19 ರಂದು ಉಪಚುನಾವಣೆ

Public TV
1 Min Read

ಬೆಂಗಳೂರು: ರಾಜ್ಯ ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕುಂದಗೋಳ ಕ್ಷೇತ್ರಕ್ಕೆ ಮೇ 19 ರಂದು ಉಪಚುನಾವಣೆ ನಡೆಯಲಿದೆ.

ಮೇ 19 ರಂದು ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ದಿನವಾಗಿದ್ದು, ಅಂದೇ ಕುಂದಗೋಳದಲ್ಲೂ ಚುನಾವಣೆ ನಡೆಸಲು ಆಯೋಗ ತೀರ್ಮಾನಿಸಿದೆ. ನಾಮಪತ್ರ ಸಲ್ಲಿಸಲು ಏ.29 ಕೊನೆ ದಿನವಾಗಿದ್ದು, ಏ.30ಕ್ಕೆ ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 2 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನಾಂಕವಾಗಿದೆ. ಲೋಕಸಭಾ ಚುನಾವಣೆಯ ಫಲಿತಾಂಶದ ದಿನಾಂಕ ಮೇ 23 ರಂದು ಕ್ಷೇತ್ರದ ಉಪಚುನಾವಣೆಯ ಫಲಿತಾಂಶವೂ ಪ್ರಕಟವಾಗಲಿದೆ.

ಮಾರ್ಚ್ 22 ರಂದು ಹೃದಯಾಘಾತದಿಂದ ಸಚಿವರು ಮೃತ ಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದ ಶಿವಳ್ಳಿ ಅವರು ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ವಿಶ್ರಾಂತಿ ಇಲ್ಲದೇ ಸತತವಾಗಿ ಕಾರ್ಯನಿರ್ವಹಿಸಿದ ಕಾರಣದಿಂದ ಹೃದಯಾಘಾತ ಸಂಭವಿಸಿತ್ತು.

ಮಹದಾಯಿ ನೀರಾವರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿವಳ್ಳಿ ಅವರು 1994ರಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕುಂದಗೋಳ ಕ್ಷೇತ್ರದ ಶಾಸಕರಾಗಿ ಮೂರು ಬಾರಿ ಆಯ್ಕೆ ಆಗಿ, ಈ ಬಾರಿ ಸಚಿವರಾಗಿದ್ರು. ಸಿದ್ದರಾಮಯ್ಯ ಆಪ್ತ ಅವರ ಮಾರ್ಗದರ್ಶನದಲ್ಲಿ ರಾಜಕಾರಣ ನಡೆಸಿದ್ದ ಶಿವಳ್ಳಿ ಅವರು 2004 ಗೆಲುವು ಪಡೆದರೆ, 2008 ರಲ್ಲಿ ಸೋಲುಂಡಿದ್ದರು. ಆದರೆ 2013, 2018 ರಲ್ಲಿ ಗೆಲುವು ಪಡೆದಿದ್ದು 2018ರ ಚುನಾವಣೆಯಲ್ಲಿ 64,871 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಜಯಗಳಿಸಿದ್ದರು. ಸರಳ ಸಜ್ಜನ ಜೀವನಕ್ಕೆ ಹೆಸರಾಗಿದ್ದ ಶಿವಳ್ಳಿ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *