ಕಲಬುರಗಿಯಲ್ಲಿ ಧರಂ ಸಿಂಗ್ ಅಂತಿಮ ದರ್ಶನ- ಎನ್‍ವಿ ಮೈದಾನದಲ್ಲಿ ಅಭಿಮಾನಿ ಸಾಗರ

Public TV
2 Min Read

– ಸಂಜೆ ನೆಲೋಗಿಯಲ್ಲಿ ಅಂತ್ಯಸಂಸ್ಕಾರ

ಕಲಬುರಗಿ: ಗುರುವಾರದಂದು ಹೃದಯಾಘಾತದಿಂದ ನಿಧನರಾದ ಮಾಜಿ ಸಿಎಂ ಧರಂ ಸಿಂಗ್ ಅವರ ಅಂತ್ಯಸಂಸ್ಕಾರ ಇಂದು ನೆರವೇರಲಿದೆ. ಈಗಾಗಲೇ ಪಾರ್ಥಿವ ಶರೀರ ಕಲಬುರುಗಿಯಲ್ಲಿದೆ.

ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಪಾರ್ಥಿವ ಶರೀರ ಬೀದರ್ ಏರ್‍ಪೋರ್ಟ್ ತಲುಪಿತ್ತು. 8.30ರಿಂದ ಸುಮಾರು 9.45ರ ತನಕ ಏರ್‍ಪೋರ್ಟ್ ಹೊರಗೆ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ವೇಳೆ ಸಾವಿರಾರು ಮಂದಿ ಅಂತಿಮ ದರ್ಶನ ಪಡೆದ್ರು. ಬಳಿಕ ಬೀದರ್‍ನಿಂದ ಕಲಬುರಗಿ ಕಡೆ ಪಾರ್ಥಿವ ಶರೀರ ರಸ್ತೆ ಮಾರ್ಗವಾಗಿ ಸಾಗಿತು. ಅಣದುರ್ಗ, ಹಳ್ಳಿಖೇಡ್, ಹುಮ್ನಾಬಾದ್ ಮಾರ್ಗದುದ್ದಕ್ಕೂ ಸಾವಿರಾರು ಜನರು ಧರಂ ಸಿಂಗ್ ಅಂತಿಮ ದರ್ಶನ ಪಡೆದ್ರು.

ಇಂದು ಬೆಳಗ್ಗೆಯಿಂದ ಕಲಬುರಗಿಯ ಎನ್‍ವಿ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12.30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. 1.30ಕ್ಕೆ ಧರ್ಮಸಿಂಗ್ ಕರ್ಮಭೂಮಿ, ಅವರ ಕ್ಷೇತ್ರವಾದ ಜೇವರ್ಗಿಗೆ ಪಾರ್ಥೀವ ಶರೀರ ರವಾನೆ ಆಗಲಿದೆ. ಇಲ್ಲೇ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ. ಮಧ್ಯಾಹ್ನ 3 ಗಂಟೆಗೆ ಜೇವರ್ಗಿಯಿಂದ 35 ಕಿಲೋ ಮೀಟರ್ ದೂರವಿರುವ ಸ್ವಗ್ರಾಮ ನೆಲೋಗಿಗೆ ಪಾರ್ಥಿವ ಶರೀರ ಸಾಗಲಿದೆ. ಸಂಜೆ 4 ರಿಂದ 5 ಗಂಟೆವರೆಗೆ ಇಲ್ಲೇ ಅಂತಿಮ ದರ್ಶನಕ್ಕೆ ಇಡಲಾಗುತ್ತೆ. ಬಳಿಕ ಸಂಜೆ 6 ಗಂಟೆ ಸುಮಾರಿಗೆ ರಜಪೂತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ.

ಕಲಬುರುಗಿಯ ರಿಂಗ್ ರೋಡ್‍ನಲ್ಲಿರೋ ನಾಗನಹಳ್ಳಿಯಲ್ಲಿರುವ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ಮಾಡಲು ಧರ್ಮಸಿಂಗ್ ಕುಟುಂಬ ಈ ಮೊದಲು ನಿರ್ಧರಿಸಿತ್ತು. ಆದರೆ ಜೇವರ್ಗಿ ಹಾಗೂ ನೆಲೋಗಿ ಜನರು ನೆಲೋಗಿಯಲ್ಲೇ ಅಂತ್ಯಸಂಸ್ಕಾರ ಮಾಡಬೇಕೆಂದು ಪಟ್ಟು ಹಿಡಿದು ಅತ್ತು, ಕರೆದು ಗೋಳಾಡಿದ್ರು. ಪ್ರತಿಭಟನೆ ಕೂಡಾ ಮಾಡಿದ್ರು. ಆಮೇಲೆ ಹುಟ್ಟೂರು ನೆಲೋಗಿಯಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬ ನಿರ್ಧರಿಸಿತು.

ಇಂದು ಸಂಜೆ 6 ಗಂಟೆ ಬಳಿಕ ನೆಲೋಗಿಯಲ್ಲಿ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಶುರುವಾಗಲಿವೆ. ರಜಪೂತ ಸಂಪ್ರದಾಯದಂತೆ ಧರ್ಮಸಿಂಗ್ ದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಗುತ್ತೆ. ಇದಕ್ಕಾಗಿ ಮಹರಾಷ್ಟ್ರದ ಲಾತೂರ್‍ನಿಂದ ಗಂಧದ ಕಟ್ಟಿಗೆ ಕೂಡಾ ತರಿಸಲಾಗಿದೆ. ಸಚಿವ ಶರಣ ಪ್ರಕಾಶ್ ಪಾಟೀಲ್, ಅಂತ್ಯಸಂಸ್ಕಾರದ ಜವಾಬ್ದಾರಿ ಹೊತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟವೇ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *