ಧರಂ ಸಿಂಗ್ ಅಜಾತಶತ್ರು, ಯಾರನ್ನೂ ದ್ವೇಷಿಸುತ್ತಿರಲಿಲ್ಲ: ಹೆಚ್‍ಡಿಕೆ

By
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‍ನ ಹಿರಿಯ ಮುಖಂಡರಾಗಿದ್ದ ಧರಂ ಸಿಂಗ್ ಇಂದು ನಿಧನರಾದ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾದ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹೆಚ್‍ಡಿಕೆ, ಇದೊಂದು ದುರದೃಷ್ಟಕರ ಸಂಗತಿ ಅಂದ್ರು. ನನ್ನ ಹಾಗೂ ಧರಂ ಸಿಂಗ್ ಅವರ ಹತ್ತಿರ ಸಂಪರ್ಕ ಬಂದಿದ್ದು ಸಮ್ಮಿಶ್ರ ಸರ್ಕಾರದ 20 ತಿಂಗಳು ಅವರು ಮುಖ್ಯಮಂತ್ರಿಯಾಗಿದ್ದಾಗ. ನನ್ನ ತಂದೆಯ ಒಡನಾಡಿ ಅವರು. ಬೇರೆ ಬೇರೆ ಪಕ್ಷದಲ್ಲಿದ್ದರೂ ತಂದೆಯವರಿಗೂ ಅವರಿಗೂ ಉತ್ತಮ ಸ್ನೇಹ, ಬಾಂಧವ್ಯವಿತ್ತು. ಬಹಳ ಒಡನಾಟವಿತ್ತು. ಧರಂ ಸಿಂಗ್ ಅವರು ಒಬ್ಬ ಅಜಾತಶತ್ರು ಎಂದು ಹೇಳಲು ಬಯಸುತ್ತೇನೆ. ರಾಜಕಾರಣದಿಂದ ಯಾರನ್ನೂ ದ್ವೇಷಿಸುತ್ತಿರಲಿಲ್ಲ. ಶತ್ರುಗಳು ಬಂದರೂ ಚೆನ್ನಾಗಿ ಮಾತನಾಡಿಸುತ್ತಿದ್ದರು. ಕೆಟ್ಟದ್ದು ಮಾಡಬೇಕೆಂದು ಬಂದ ಶತ್ರುಗಳೂ ಕೂಡ ಅವರ ನಡವಳಿಕೆ ನೋಡಿ ಬದಲಾಗುವಂತೆ ಅವರ ನಡವಳಿಕೆ ಇತ್ತು ಅಂದ್ರು.

ಅವರು ರಾಜ್ಯದ ಒಬ್ಬ ಅಪರೂಪದ ರಾಜಕಾರಣಿ. ಒಂದು ದೊಡ್ಡ ಸಮಾಜದ ಹಿನ್ನೆಲೆ ಅಥವಾ ಬೆಂಬಲ ಇಲ್ಲದಿದ್ರೂ, ಅಲ್ಪಸಂಖ್ಯಾತರಾಗಿಯೂ ಸುದೀರ್ಘ ರಾಜಕಾರಣದಲ್ಲಿ ಯಶಸ್ಸು ಕಂಡ ಅಪರೂಪದ ರಾಜಕಾರಣಿ ಎಂದು ಅವರನ್ನು ಎಚ್‍ಡಿಕೆ ಬಣ್ಣಿಸಿದ್ರು.

ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ಮುಳುವಾದ ಎಂಬಂತ ಭಾವನೆ ಎಂದೂ ಅವರಲ್ಲಿ ಕಾಣಲಿಲ್ಲ. ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದು ನಾನು ಮುಖ್ಯಮಂತ್ರಿಯಾದಾಗ ಆಶೀರ್ವಾದ ಪಡೆಯಲು ಮನೆಗೆ ಹೋಗಿದ್ದೆ. ಈತ ನನ್ನನ್ನು ಇಳಿಸಿ ನನ್ನ ಸ್ಥಾನ ತುಂಬಿದ ಎಂಬ ಭಾವನೆ ಅವರ ಮುಖದಲ್ಲೂ ಕಾಣಲಿಲ್ಲ. ಒಳ್ಳೆ ಕೆಲಸ ಮಾಡಿ ಎಂದು ಖುಷಿಯಾಗಿಯೇ ಆಶೀರ್ವಾದ ಮಾಡಿ ಕಳಿಸಿದ್ರು ಅಂತ ಹೆಚ್‍ಡಿಕೆ ಹೇಳಿದ್ರು.

Share This Article
Leave a Comment

Leave a Reply

Your email address will not be published. Required fields are marked *