ನಂಜನಗೂಡಿನಲ್ಲಿ ವಿಜೃಂಭಣೆಯ ‘ಕಪಿಲಾ ಆರತಿ’

Public TV
1 Min Read

ಮೈಸೂರು: ನಂಜನಗೂಡಿನಲ್ಲಿನ ಕಪಿಲಾ ನದಿಯ ಸ್ನಾನ ಘಟ್ಟದಲ್ಲಿ ವಿಜೃಂಭಣೆಯಿಂದ ಲಕ್ಷ ದೀಪೋತ್ಸವ ನಡೆಯಿತು. ಸಾವಿರಾರು ಭಕ್ತರು ಕಪಿಲಾ ಆರತಿ ಮಾಡಿ ಪೂಜೆ ಸಲ್ಲಿಸಿದರು.

‘ನಮ್ಮ ನದಿ, ನಮ್ಮ ಶ್ರದ್ಧೆ’ ಘೋಷಣೆಯೊಂದಿಗೆ ಕಳೆದ ಮೂರು ವರ್ಷಗಳಿಂದ ಶ್ರದ್ಧೆ ಭಕ್ತಿಯಿಂದ ಈ ಕಪಿಲಾ ಆರತಿ ನಡೆಯುತ್ತಿದೆ. ನಂಜನಗೂಡಿನ ಯುವ ಬ್ರಿಗೇಡ್ ಧರ್ಮ ಜಾಗೃತಿ ಬಳಗವು ಈ ದೀಪೋತ್ಸವ ಆಚರಿಸುತ್ತಿದೆ. ಸುಮಾರು 800 ಮೀಟರ್ ಉದ್ದವಿರುವ ಕಪಿಲಾ ಸ್ನಾನಘಟ್ಟದ ಮೆಟ್ಟಿಲುಗಳಲ್ಲಿ ಜೋಡಿಸಿಟ್ಟಿದ್ದ ಲಕ್ಷಲಕ್ಷ ಸಾಲು ಸಾಲು ದೀಪಗಳಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಪತೀತ ಪಾವನ ಕಪಿಲಾ ಮಾತೆಗೆ ಭಕ್ತ ಸಮೂಹ ನಮಿಸಿತು.

ಪಾರಂಪರಿಕ ಹದಿನಾರು ಕಾಲು ಮಂಟಪ, ನೂತನ ಸೇತುವೆ, ನದಿಯ ದಂಡೆ ಹಾಗೂ ಸ್ನಾನಘಟ್ಟದ ಆವರಣದ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸ್ನಾನಘಟ್ಟದ ಬಳಿ ಪ್ರತಿಷ್ಠಾಪಿಸಿದ ಓಂಕಾರ ಮೂರ್ತಿ ಬಳಿ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಪ್ರಧಾನ ಆಗಮಿಕ ಜೆ. ನಾಗಚಂದ್ರ ದೀಕ್ಷಿತ್, ಪುರೋಹಿತ ಕೃಷ್ಣ ಜೋಯಿಸ್ ತಂಡದ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆದವು.

ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ತೀರ್ಥ ಶ್ರೀಗಳು, ಹಿರೇಹಡಗಲಿ ಶ್ರೀಹಾಲ ಸ್ವಾಮೀಜಿ ಮಹಾಸಂಸ್ಥಾನ ಮಠದ ಅಭಿನವ ಹಾಲ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೇಶಾನಚಿದಜೀ ಮಹಾರಾಜ್, ಸ್ವಾಮಿ ಶಿವಕಾಂತಾನಚಿದಜೀ ಮಹಾರಾಜ್ ಕಪಿಲಾರತಿ ಬೆಳಗಿಸುವ ಮೂಲಕ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಮೆಟ್ಟಿಲುಗಳ ಮೇಲೆ ಜೋಡಿಸಿಟ್ಟಿದ ದೀಪಗಳಿಗೆ ಯುವ ಸಮೂಹ ಪಂಜಿನಿಂದ ಏಕಕಾಲದಲ್ಲಿ ದೀಪ ಹೊತ್ತಿಸಿದರು. ಅಲ್ಲದೆ ತೇಲುವ ಎಲೆಯ ತಟ್ಟೆಯಲ್ಲಿ ದೀಪಗಳನ್ನಿಟ್ಟು ಹೊತ್ತಿಸಿ ನದಿಯಲ್ಲಿ ತೇಲಿ ಬಿಟ್ಟರು. ಸಾವಿರಾರು ಭಕ್ತರು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಂಡು ಪುಳಕಿತರಾದರು.

Share This Article
Leave a Comment

Leave a Reply

Your email address will not be published. Required fields are marked *