ಸುಳ್ವಾಡಿ ದುರಂತ: 51 ಕಾಯಿ ಒಡೆದು ಹರಕೆ ತೀರಿಸಿದ ಭಕ್ತ

Public TV
2 Min Read

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷಪ್ರಸಾದ ಸೇವಿಸಿ 15 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭಕ್ತರೊಬ್ಬರು ಹೊತ್ತಿದ್ದ ಹರಕೆಯನ್ನು ಇಂದು ತೀರಿಸಿದ್ದಾರೆ.

ಕನಕಪುರದ ನಾಗೇಶ ಹರಕೆ ಹೊತ್ತಿದ್ದ ಭಕ್ತ. ಇವರು ವಿಷ ಹಾಕಿದ ಪಾಪಿಗಳು ಸಿಗಲೆಂದು ಹರಕೆ ಹೊತ್ತಿದ್ದರು. ವಿಷ ಹಾಕಿದ ಪಾಪಿಗಳು 150 ಗಂಟೆಯೊಳಗೆ ಸಿಕ್ಕರೆ 51 ಕಾಯಿ ಒಡೆಯುತ್ತೇನೆಂದು ದೇವರ ಮುಂದೆ ಪ್ರಾರ್ಥನೆ ಮಾಡಿದ್ದರು.

ವಿಷ ಹಾಕಿದ ಪಾಪಿಗಳು ಬಂಧನವಾದ ಬೆನ್ನಲ್ಲೇ ಇದೀಗ ನಾಗೇಶ್, ಸುಳ್ವಾಡಿ ಮಾರಮ್ಮ ದೇವಸ್ಥಾನದ ಮುಂದೆ ಕಾಯಿ ಒಡೆದು ತಾವು ಹೊತ್ತಿದ್ದ ಹರಕೆಯನ್ನು ತೀರಿಸಿದ್ದಾರೆ. ಇದೇ ವೇಳೆ ಇನ್ನು ಮುಂದೆ ದೇವಸ್ಥಾನ ಆವರಣದಲ್ಲಿ ಶಾಂತಿ ನೆಲೆಸುವಂತೆ ಪ್ರಾರ್ಥನೆ ಸಲ್ಲಿಸಿದ್ರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗೇಶ್, ಈ ದೇವಸ್ಥಾನಕ್ಕೆ ನಾವು ಕಳೆದ 15 ವರ್ಷಗಳಿಂದ ಬರುತ್ತಿದ್ದೇವೆ. 2008-09ರಿಂದ ದೇವಸ್ಥಾನಕ್ಕೆ ಜಾಸ್ತಿ ಬರುತ್ತಿದ್ದೇನೆ. ಈ ದೇವಸ್ಥಾನಕ್ಕೆ ಬಂದ ಬಳಿಕ ನನಗೆ ತುಂಬಾನೇ ಅನುಕೂಲವಾಗಿದೆ. ಕನಕಪುರ-ಬೆಂಗಳೂರು ಮಧ್ಯೆ ಬಿಡದಿ ತಟ್ಟೆ ಇಡ್ಲಿ ಅಂತ ನಮ್ಮದು ಹೋಟೆಲ್ ಇದೆ. ಅಂದು ಅದ್ಯಾರೋ 5 ಮಂದಿ ಸಮುಂಗಲೆಯರು ಮಹದೇಶ್ವರ ಬೆಟ್ಟಕ್ಕೆ ಹೋಗಿ 8 ಗಂಟೆ ಸುಮಾರಿಗೆ ನಮ್ಮ ಹೊಟೇಲ್ ಗೆ ಬಂದಿದ್ದರು. ಆವಾಗ ನನಗೆ ಮದುವೆಯಾಗಿರಲಿಲ್ಲ. ಆ ಸಂದರ್ಭದಲ್ಲಿ ಅವರು ಕಿಚ್ ಗುತ್ ಮಾರಮ್ಮನ ದೇವಸ್ಥಾನಕ್ಕೆ ಹೋಗು, ಒಳ್ಳೆಯದಾಗುತ್ತೆ ಅಂತ ಹೇಳಿದ್ದರು. ಹೀಗಾಗಿ ಇಲ್ಲಿಗೆ ಬರಲು ಆರಂಭಿಸಿದೆ. ಹಾಗೆಯೇ ಮನೆ ಕಟ್ಟಿಸಿದೆ, ಹೋಟೆಲ್ ಮಾಡಿದೆ. ರೇಷ್ಮೆನೂ ಬೆಳೆಯುತ್ತಿದ್ದೇನೆ. ಇವುಗಳ ಜೊತೆಗೆ ಕೃಷಿಯನ್ನೂ ಮಾಡುತ್ತಿದ್ದೇನೆ ಅಂದ್ರು.

ಪ್ರಸಾದಕ್ಕೆ ವಿಷ ಹಾಕಿದ ವಿಚಾರ ನನಗೆ ತುಂಬಾನೇ ಬೇಸರ ತಂದಿದೆ. ಹೋದ ವಾರ ನಾವು ಬರಬೇಕಿತ್ತು. ಆದ್ರೆ ಬಂದಿರಲಿಲ್ಲ. ಒಂದು ವೇಳೆ ಬರುತ್ತಿದ್ದರೆ ನಾವೂ ಇರುತ್ತಿರಲಿಲ್ಲ. ಹೀಗಾಗಿ ಹೋದ ವಾರವೇ ನಾನು ಹರಕೆ ಕಟ್ಟಿಕೊಂಡೆ. 150 ಗಂಟೆಯಲ್ಲಿ ವಿಷ ಹಾಕಿದೋರು ಸಿಕ್ಕಿಬಿಟ್ರೆ ನಾನು 51 ಕಾಯಿ ಒಡೆಯುತ್ತೀನಿ ಎಂದು ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಂದು 51 ಕಾಯಿ ಒಡೆದಿದ್ದೇನೆ ಅಂತ ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *