ದೇವೇಗೌಡರ ಸ್ಪರ್ಧೆ ಖಚಿತ, ಆದ್ರೆ ಬೆಂಗಳೂರು ಉತ್ತರ, ತುಮಕೂರಿನಿಂದ ಅಲ್ಲ!

Public TV
2 Min Read

– ಹಾಸನದಿಂದಲೇ ಕಣಕ್ಕೆ ಇಳಿಯುವಂತೆ ಪುತ್ರರ ಮನವಿ
– ತುಮಕೂರಿನಿಂದ ಪ್ರಜ್ವಲ್ ಸ್ಪರ್ಧೆ?

ಬೆಂಗಳೂರು: ರಾಜ್ಯ ರಾಜಕೀಯದ ಮೈತ್ರಿ ಪಕ್ಷಗಳ ಅಭ್ಯರ್ಥಿ ಆಯ್ಕೆಯಲ್ಲಿ ಭಾರೀ ಬದಲಾವಣೆ ಆಗುವ ನಿರೀಕ್ಷೆ ಇದ್ದು, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹಾಸನದಿಂದಲೇ ಸ್ಪರ್ಧೆ ಮಾಡುವ ಸಾಧ್ಯತೆಯಿದೆ.

ಇಲ್ಲಿಯವರೆಗೆ ಎಚ್‍ಡಿಡಿ ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಇದನ್ನು ಬದಲಾವಣೆ ಮಾಡುವ ಲಕ್ಷಣಗಳು ಕಂಡು ಬಂದಿದ್ದು, ದೇವೇಗೌಡರಿಗೆ ಇದು ಅಂತಿಮ ಚುನಾವಣೆ ಆಗಿರುವುದರಿಂದ ಹಾಸನದಿಂದಲೇ ಸ್ಪರ್ಧೆ ಮಾಡಲು ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

ಈಗಾಗಲೇ ರೇವಣ್ಣ ಅವರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದು, ದೇವೇಗೌಡರನ್ನು ಹಾಸನದಿಂದಲೇ ಸ್ಪರ್ಧೆ ಮಾಡಲು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ. ಅಂತಿಮ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆಯ ನಿರ್ಧಾರ ಬೇಡ ಎಂದು ಇಬ್ಬರು ಪುತ್ರರು ಹೇಳಿದ್ದಾರೆ.

ಹಾಸನ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಅವರನ್ನು ಘೋಷಣೆ ಮಾಡಿದ ಬಳಿಕ ಕ್ಷೇತ್ರದ ಮುಖಂಡರಿಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ದೇವೇಗೌಡರಿಗೆ ಇರುವ ಅನುಭವ ಪ್ರಜ್ವಲ್ ಅವರಿಗೆ ಇಲ್ಲ ಎಂದಿದ್ದರು. ಅಲ್ಲದೇ ಮೈತ್ರಿ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ದೇವೇಗೌಡರು ಸ್ಪರ್ಧೆ ಮಾಡಿದರೆ ಮಾತ್ರ ನಮ್ಮ ಬೆಂಬಲ ಇರುತ್ತೆ ಎಂದು ಬಹಿರಂಗವಾಗಿ ಹೇಳಿದ್ದರು. ಪರಿಣಾಮ ದೇವೇಗೌಡರನ್ನು ಹಾಸನದಿಂದ ಸ್ಪರ್ಧೆಗೆ ಇಳಿಸಿ, ಪ್ರಜ್ವಲ್ ರನ್ನು ತುಮಕೂರು ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ದೇವೇಗೌಡರ ಮುಂದೇ ಪ್ರಸ್ತಾಪ ಮಾಡಲಾಗಿದ್ದು, ಎರಡು ದಿನಗಳ ಬಳಿಕ ಅಂತಿಮ ನಿರ್ಧಾರ ಪ್ರಕಟವಾಗುತ್ತದೆ ಎಂಬ ಮಾಹಿತಿ ಲಭಿಸಿದೆ.

ಈಗಾಗಲೇ ರೇವಣ್ಣ ಅವರು ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ಕೂಡ ದೇವೇಗೌಡರ ಮನವೊಲಿಕೆ ಮಾಡಲು ಮುಂದಾಗಿದ್ದಾರೆ. ಪರಿಣಾಮ ಪ್ರಜ್ವಲ್ ತುಮಕೂರಿನಿಂದ ಸ್ಪರ್ಧೆ ಮಾಡುವ ಬಗ್ಗೆ ನಿರ್ಧಾರ ಪ್ರಕಟಿಸಲಾಗುತ್ತದೆ ಎನ್ನಲಾಗಿದೆ.

ಹಾಸನ ಕ್ಷೇತ್ರಕ್ಕೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಘೋಷಣೆಯಾದ ಬಳಿಕ ಎ ಮಂಜು ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಪ್ರಜ್ವಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದೆ ಯಾವುದೇ ಅಪಾಯ ಆಗದೇ ಇರಲಿ ಎನ್ನುವ ಕಾರಣಕ್ಕೆ ಜೆಡಿಎಸ್ ನಾಯಕರು ಅಭ್ಯರ್ಥಿ ಬದಲಾವಣೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *