ಗಣರಾಜೋತ್ಸವ ಹಿನ್ನೆಲೆ ದೆಹಲಿಯಲ್ಲಿ ಹೈಅಲರ್ಟ್‌ – ಅಪರಾಧಿಗಳ ಸುಳಿವು ಪತ್ತೆಗಾಗಿ ಪೊಲೀಸರಿಗೆ AI ಸ್ಮಾರ್ಟ್‌ ಕನ್ನಡಕ

2 Min Read

– ಅಲರ್ಟ್‌ ಪೋಸ್ಟರ್‌ಗಳಲ್ಲಿ ಫಸ್ಟ್‌ಟೈಮ್‌ ದೆಹಲಿ ಭಯೋತ್ಪಾದಕನ ಚಿತ್ರ
– ಭದ್ರತೆಗೆ 10,000 ಪೊಲೀಸ್ ಸಿಬ್ಬಂದಿ ನೇಮಕ, ಅತಿಥಿಗಳ ಗ್ಯಾಲರಿಗೆ ನದಿಗಳ ಹೆಸರು

ನವದೆಹಲಿ: 77ನೇ ಗಣರಾಜೋತ್ಸವ ದಿನಾಚರಣೆ (Republic Day 2026) ಹಿನ್ನಲೆ ಜನವರಿ 26 ರಂದು ಕರ್ತವ್ಯ ಪಥದಲ್ಲಿ ನಡೆಯಲಿರುವ ಪರೇಡ್‌ಗೂ ಮುನ್ನ ದೆಹಲಿ ಪೊಲೀಸರು (Delhi Police) ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿದ್ದಾರೆ. ಈ ಬಾರಿ ಪೊಲೀಸ್‌ ಇಲಾಖೆ ಬಿಡುಗಡೆ ಮಾಡಿರುವ ಅಲರ್ಟ್ ಪೋಸ್ಟರ್‌ಗಳಲ್ಲಿ ಮೊದಲ ಬಾರಿಗೆ ದೆಹಲಿಯ ಸ್ಥಳೀಯ ಭಯೋತ್ಪಾದಕನ ಚಿತ್ರವನ್ನ ಸೇರಿಸಲಾಗಿದೆ.

ಈ ಭಯೋತ್ಪಾದಕನನ್ನ (Terroris) ಮೊಹಮ್ಮದ್ ರೆಹಾನ್ ಎಂದು ಗುರುತಿಸಲಾಗಿದ್ದು, ಅಲ್-ಖೈದಾ ಇನ್ ಇಂಡಿಯನ್ ಸಬ್‌ಕಾಂಟಿನೆಂಟ್ ಸಂಘಟನೆಗೆ ಸೇರಿದ್ದಾನೆ ಎನ್ನಲಾಗಿದೆ. ರೆಹಾನ್ ದೆಹಲಿ ಪೊಲೀಸ್ ಹಾಗೂ ಕೇಂದ್ರೀಯ ಗುಪ್ತಚರ ಏಜೆನ್ಸಿಗಳ ಕಣ್ತಪ್ಪಿಸಿ ಬಹುಕಾಲದಿಂದ ತಲೆಮರಿಸಿಕೊಂಡಿದ್ದಾನೆ. ಗಣರಾಜ್ಯೋತ್ಸವದ ದಿನದಂದು ಭಯೋತ್ಪಾದಕ ದಾಳಿಯ ಎಚ್ಚರಿಕೆ ಇರೋದ್ರಿಂದ ಆತನ ಪೋಸ್ಟರ್‌ ಪ್ರಕಟಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ, ಭಯೋತ್ಪಾದಕರ ನಡುವೆ ತೀವ್ರ ಗುಂಡಿನ ಚಕಮಕಿ

ಗಣರಾಜ್ಯೋತ್ಸವದ ಹಿನ್ನೆಲೆ ಕರ್ತವ್ಯ ಪಥ ಮತ್ತು ಸಂಪೂರ್ಣ ನವದೆಹಲಿ ಜಿಲ್ಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಬಹುಸ್ತರದ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ದೆಹಲಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳ ಬಹುಸ್ತರದ ಸುರಕ್ಷಾ ವಲಯ ನಿಯೋಜಿಸಿದೆ. ಸಾವಿರಾರು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳನ್ನು ಅಡ್ವಾನ್ಸ್ಡ್‌ ಫೇಶಿಯಲ್ ರೆಕಗ್ನಿಷನ್ ವ್ಯವಸ್ಥೆ ಜೊತೆಗೆ ಸಂಪರ್ಕಿಸಲಾಗಿದೆ.

AI ಸ್ಮಾರ್ಟ್‌ ಕನ್ನಡಕ
ಅಲ್ಲದೇ ಅಪರಾಧಿ ಹಿನ್ನೆಲೆಯ ವ್ಯಕ್ತಿಗಳು ಅಥವಾ ಕಳ್ಳತನದ ವಾಹನಗಳನ್ನ ಗುರುತಿಸಿದ ತಕ್ಷಣ ಅಲರ್ಟ್ ನೀಡುವ ಎಐ ವ್ಯವಸ್ಥೆಯನ್ನ ನಿಯೋಜಿಸಲಾಗಿದೆ. ಅದಕ್ಕಾಗಿ ಪೊಲೀಸರಿಗೆ ಎಐ ಸ್ಮಾರ್ಟ್‌ ಕನ್ನಡಕಗಳನ್ನ ನೀಡಲಾಗಿದೆ. ಅಂದು ಸುಮಾರು 10,000 ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗುತ್ತದೆ. ಏರ್ ಸರ್ವೇಲೆನ್ಸ್‌ಗಾಗಿ ಆಂಟಿ-ಡ್ರೋನ್ ಯೂನಿಟ್‌ಗಳು ಮತ್ತು ಎತ್ತರದ ಕಟ್ಟಡಗಳ ಮೇಲೆ ಸ್ನೈಪರ್ ತಂಡಗಳನ್ನ ನಿಯೋಜಿಸಲಾಗಿದೆ. ಇದನ್ನೂ ಓದಿ: ಆಂಧ್ರದಲ್ಲಿ ಮತ್ತೊಂದು ಬಸ್ ದುರಂತ – ಮೂವರು ಸಜೀವ ದಹನ; ಬಸ್‌, ಕಂಟೈನರ್‌ ಧಗಧಗ

ಹೋಟೆಲ್‌ಗಳು, ಗೆಸ್ಟ್ ಹೌಸ್‌ಗಳು, ಬಾಡಿಗೆದಾರರು ಮತ್ತು ಗೃಹ ಸಹಾಯಕರ ಸಮಗ್ರ ಪರಿಶೀಲನೆ ನಡೆಯುತ್ತಿದೆ. ಪಾದಚಾರಿಗಳಿಗೆ ಕನಿಷ್ಠ 3 ಹಂತದ ತಪಾಸಣೆ (ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಸೇರಿದಂತೆ) ಮತ್ತು ವಾಹನಗಳಿಗೆ ಕಠಿಣ ತಪಾಸಣೆ ಮಾಡಲಾಗುತ್ತದೆ ಎಂದು ನವದೆಹಲಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಆಯುಕ್ತ ದೇವೇಶ್ ಕುಮಾರ್ ಮಹಲಾ ಅವರು ಹೇಳಿದ್ದಾರೆ.

ಅತಿಥಿಗಳ ಗ್ಯಾಲರಿಗೆ ನದಿಗಳ ಹೆಸರು
ಕರ್ತವ್ಯ ಪಥದಲ್ಲಿ ನಡೆಯುವ ಸಮಾರಂಭದಲ್ಲಿ ಆಸನ ವ್ಯವಸ್ಥೆಯನ್ನು ದೇಶದ ಪ್ರಮುಖ ನದಿಗಳ ಹೆಸರಿನಲ್ಲಿ ಮಾಡಲಾಗಿದೆ. ಬಿಯಾಸ್, ಬ್ರಹ್ಮಪುತ್ರ, ಚಂಬಲ್, ಚೆನಾಬ್, ಗಂಡಕ್, ಗಂಗಾ, ಘಾಘ್ರಾ, ಗೋದಾವರಿ, ಸಿಂಧೂ ಮತ್ತು ಝೀಲಂ ಆವರಣಗಳ ಅತಿಥಿಗಳು ಉದ್ಯೋಗ ಭವನ ಮೆಟ್ರೋ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ. ಕಾವೇರಿ, ಕೋಸಿ, ಕೃಷ್ಣ, ಮಹಾನದಿ, ನರ್ಮದಾ, ಪೆನ್ನಾರ್, ಪೆರಿಯಾರ್, ರವಿ, ಸನ್, ಸಟ್ಲೆಜ್, ತೀಸ್ತಾ, ವೈಗೈ ಮತ್ತು ಯಮುನಾ ಆವರಣಗಳ ಅತಿಥಿಗಳು ಕೇಂದ್ರ ಸಚಿವಾಲಯದ ಮೆಟ್ರೋ ನಿಲ್ದಾಣದಲ್ಲಿ ಇಳಿಯಬೇಕಾಗುತ್ತದೆ.

ಛತ್ರಿ ಪರ್ಫ್ಯೂಮ್‌ಗೆ ನಿಷೇಧ
ಅತಿಥಿಗಳ ಸೌಕರ್ಯ ಮತ್ತು ಸುರಕ್ಷತೆಗಾಗಿ ಸುರಕ್ಷಾ ನಿಯೋಜನೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸಮಾರಂಭ ಸ್ಥಳದೊಳಗೆ ಬ್ಯಾಗ್, ಬ್ರೀಫ್‌ಕೇಸ್, ಆಹಾರ-ಪಾನೀಯ, ಮೊಬೈಲ್ ಫೋನ್ (ಅನುಮತಿಸಿದವುಗಳನ್ನು ಹೊರತುಪಡಿಸಿ), ಎಲೆಕ್ಟ್ರಾನಿಕ್ ವಸ್ತುಗಳು, ಪವರ್ ಬ್ಯಾಂಕ್, ನೀರಿನ ಬಾಟಲ್, ಶಸ್ತ್ರಾಸ್ತ್ರಗಳು, ಚೂಪಾದ ವಸ್ತುಗಳು, ಉರಿಯಬಹುದಾದ ವಸ್ತುಗಳು, ಛತ್ರಿ, ಪರ್ಫ್ಯೂಮ್, ಆಟಿಕೆ ಶಸ್ತ್ರಾಸ್ತ್ರಗಳು ಮತ್ತು ಯಾವುದೇ ಸ್ಫೋಟಕಗಳನ್ನು ತರಲು ಸಂಪೂರ್ಣ ನಿಷೇಧಿಸಲಾಗಿದೆ.

Share This Article