ಸಿಎಎ, ಎನ್‌ಆರ್‌ಸಿ ದೇಶದಲ್ಲಿನ ಮುಸ್ಲಿಮರ ಮೇಲೆ ಪರಿಣಾಮ ಬೀರಲ್ಲ- ಜಮಾ ಮಸೀದಿ ಮೌಲ್ವಿ

Public TV
2 Min Read

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್‌ಆರ್‌ಸಿ ಕುರಿತು ದೇಶಾದ್ಯಂತ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ದೆಹಲಿಯ ಜಮಾ ಮಸೀದಿಯ ಮೌಲ್ವಿ ಶಾಹಿ ಇಮಾಮ್ ಅಹ್ಮದ್ ಬುಖಾರಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದ್ದು, ಕಾಯ್ದೆಯ ಜಾರಿಯಿಂದ ದೇಶದಲ್ಲಿನ ಮುಸ್ಲಿಮರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ಜಾರಿಯಿಂದ ಭಾರತದಲ್ಲಿರುವ ಮುಸ್ಲಿಮರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರನ್ನು ತಿರಸ್ಕರಿಸಲಾಗುತ್ತದೆ ಎಂದರು.

ಪ್ರತಿಭಟನೆ ಮಾಡುವುದು ಪ್ರಜಾಪ್ರಭುತ್ವದ ಹಕ್ಕು. ಇದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಇದನ್ನು ಹತೋಟಿಯಲ್ಲಿಡುವುದು ಮುಖ್ಯ. ಹೀಗಾಗಿ ಭಾವನೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಅಲ್ಲದೆ ಸಿಎಎ ಮೂಲಕ ಪಾಕಿಸ್ತಾನ, ಅಫ್ಘಾನಿಸ್ಥಾನ ಹಾಗೂ ಬಾಂಗ್ಲಾದೇಶದ ಮುಸ್ಲಿಮರು ಭಾರತದ ನಾಗರಿಗತ್ವದಿಂದ ವಂಚಿತರಾಗಿದ್ದಾರೆ ಎಂದು ಶಾಹಿ ಇಮಾಮಿ ಸಯ್ಯದ್ ಅಹ್ಮದ್ ಬುಖಾರಿ ಬೇಸರ ವ್ಯಕ್ತಪಡಿಸಿದರು.

ಇಮಾಮ್ ಅಹ್ಮದ್ ಬುಖಾರಿ ಅವರು ದೆಹಲಿ ಜಮಾ ಮಸೀದಿಯ ಮೌಲ್ವಿಯಾಗಿದ್ದಾರೆ. ದೇಶದ ಪ್ರತಿಷ್ಠಿತ ಮಸೀದಿಗಳ ಪೈಕಿ ಜಮಾ ಮಸೀದಿಯೂ ಒಂದು. ಜಮಿಯಾ ಮಿಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆ ಇಮಾಮ್ ಅಹ್ಮದ್ ಬುಖಾರಿ ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸಿದ್ದು, ಹಿಂಸಾಚಾರಕ್ಕೆ ತಿರುಗಿತ್ತು. ಹೀಗಾಗಿ ಪೊಲೀಸರು ಮೂವರು ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‍ನ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಮಂಗಳವಾರ ನಡೆದ ತೀವ್ರ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಪ್ರತಿಭಟನಾಕಾರರು ಪೊಲೀಸರ ಮೇಲೆ ಸಹ ಹಲ್ಲೆ ನಡೆಸಿದ್ದರು. ಹೀಗಾಗಿ ಪೊಲೀಸರು ಹಿಂಸಾತ್ಮಕ ಪ್ರತಿಭಟನಾಕಾರರ ವಿರುದ್ಧ ಗಲಭೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ತಡೆ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳು ದೆಹಲಿ ನಗರ ಸಾರಿಗೆ ಬಸ್ಸುಗಳಿಗೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಹಾಗೂ ಸಾರೈ ಜುಲೆನಾ ಪೊಲೀಸ್ ಬೂತ್‍ನಲ್ಲಿದ್ದ ಹಲವು ವಾಹನಗಳನ್ನು ಧ್ವಂಸ ಮಾಡಿದ್ದಾರೆ. ಪರಿಸ್ಥಿತಿ ಹತೋಟಿಗೆ ಬಾರದೇ ಇದ್ದಾಗ ಗುಂಪು ಚದುರಿಸಲು ಪೊಲೀಸರು ಗ್ಯಾಸ್ ಫಿರಂಗಿ ಬಳಸಿದ್ದಾರೆ. ಆದರೂ ಪ್ರತಿಭಟನಾಕಾರರು ಗೇಟ್ ನಂ.4.7 ಹಾಗೂ 8ರಿಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಆಗ ಪೊಲೀಸ್ ಸಿಬ್ಬಂದಿ ವಿಶ್ವವಿದ್ಯಾಲಯದೊಳಗೆ ಪ್ರವೇಶಿಸಿ ಹಿಂಸಾತ್ಮಕ ಪ್ರತಿಭನಾಕಾರರನ್ನು ಎಳೆತಂದು ಎಫ್‍ಐಆರ್ ದಾಖಲಿಸಿದ್ದಾರೆ.

ಈ ಸಂದರ್ಭದಲ್ಲಿ ಹಲವು ಪೊಲೀಸ್ ಸಿಬ್ಬಂದಿಗೆ ತೀವ್ರ ಗಾಯಗಳಾಗಿವೆ. ಇಷ್ಟಾದರೂ ಪ್ರತಿಭಟನಾಕಾರರು ಟಿಕೋನಾ ಪಾರ್ಕ್, ಝಾಕೀರ್ ನಗರ, ಧಲನ್ ಪೊಲೀಸ್ ಬೂತ್ ಬಳಿಯ ಸುಮಾರು 70 ರಿಂದ 80 ಬೈಕ್‍ಗಳನ್ನು ಧ್ವಂಸ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *