ಕೇಂದ್ರದ ವಿರುದ್ಧ ಮತ್ತೆ ಸಿಡಿದ ರೈತರು; ಫೆಬ್ರವರಿ 26 ಕ್ಕೆ ರೈತರಿಂದ ದೆಹಲಿ ಚಲೋ

Public TV
2 Min Read

ಬೆಂಗಳೂರು: ದೆಹಲಿಯಲ್ಲಿ ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ 2021 ರ ಡಿಸೆಂಬರ್ 21 ರಂದು ಪ್ರಧಾನ ಮಂತ್ರಿಗಳು ನೀಡಿದ್ದ ಭರವಸೆ ಈಡೇರದ ಕಾರಣ ದೇಶಾದ್ಯಂತ ಮುಂದಿನ ಫೆಬ್ರವರಿ 26 ಕ್ಕೆ ದೆಹಲಿ ಚಲೋ (Delhi Chalo) ಮಾಡಲು ರೈತರು ತೀರ್ಮಾನಿಸಿದ್ದಾರೆ.

ದೇಶದ ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ ‘ದೆಹಲಿ ಚಲೋ’ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪೂರ್ವಭಾವಿಯಾಗಿ ರಾಜಕೀಯತರವಾಗಿ ರೈತರನ್ನ ಜಾಗೃತಿ ಮೂಡಿಸಲು ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸಲಾಗುತ್ತಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ 6 ಕಿಸಾನ್ ಮಹಾ ಪಂಚಾಯತ್‌ಗಳನ್ನು ಒಡಿಸ್ಸಾದ ಭುವನೇಶ್ವರ, ಪಂಜಾಬಿನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ, ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗಿದೆ. ಮುಂಬರುವ ಒಂದೂವರೆ ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇನ್ನೂ 14 ಕಿಸಾನ್ ಮಹಾ ಪಂಚಾಯತ್ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಹಿಜಬ್ ವಿವಾದದ ಬಗ್ಗೆ ಮಾತನಾಡದೆ ಸುಮ್ಮನೆ ಕೈ ಸನ್ನೆ ಮಾಡಿದ ಡಿ.ಕೆ.ಶಿವಕುಮಾರ್

ದೆಹಲಿ ಚಲೋ ಕಾರ್ಯಕ್ರಮದ ಪ್ರಮುಖ ಒತ್ತಾಯಗಳು
* ಡಾ. ಸ್ವಾಮಿನಾಥನ್ ವರದಿಯಂತೆ C2+50% ಸೂತ್ರದ ಪ್ರಕಾರ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. MSP ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು.
* ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು.
* ಭೂಸ್ವಾಧೀನ ಕಾನೂನು 2013 ರಲ್ಲಿ ರಾಜ್ಯ ಸರ್ಕಾರಗಳು ಮಾಡಿದ ಬದಲಾವಣೆಗಳನ್ನು ತಕ್ಷಣವೇ ಹಿಂಪಡೆಯಬೇಕು. 70% ರೈತರ ಲಿಖಿತ ಅನುಮತಿ ಮತ್ತು ಯಾವುದೇ ಭೂಸ್ವಾಧೀನಕ್ಕೆ ಮೊದಲು ಬಡ್ಡಿದರ ಜೊತೆಗೆ 4 ಪಟ್ಟು ಪರಿಹಾರವನ್ನು ಖಚಿತಪಡಿಸಿಕೊಳ್ಳಲು ಭೂ ಸ್ವಾಧೀನ ಕಾನೂನು 2013 ಅನ್ನು ಜಾರಿಗೊಳಿಸಬೇಕು.
* ಎಲ್ಲಾ ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳ ಬೆಲೆ ಕುಸಿಯದಂತೆ ರಕ್ಷಿಸಬೇಕು. ಭಾರತ ಸರ್ಕಾರ ಡಬ್ಲ್ಯೂಟಿಒದಿಂದ ಹೊರಬರಬೇಕು. ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳನ್ನು ರದ್ದುಗೊಳಿಸಬೇಕು. ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಯನ್ನು ನಿಲ್ಲಿಸಬೇಕು.
* ವಿದ್ಯುತ್ ಮಂಡಳಿಗಳ ಖಾಸಗೀಕರಣ ಬೇಡ. ಕೃಷಿ ಪಂಪ್ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು.
* ಕೃಷಿ ಮತ್ತು ಚಿಲ್ಲರೆ ಸಣ್ಣ ಉದ್ಯಮಗಳಿಗೆ ಮಾತ್ರ ಮೀಸಲಿಡಬೇಕು. ಕೃಷಿಯಲ್ಲಿ ಎಫ್‌ಡಿಐ ಮತ್ತು ಇ-ಕಾಮರ್ಸ್ ಸೇರಿದಂತೆ ಚಿಲ್ಲರೆ ವ್ಯಾಪಾರದ ಎಲ್ಲಾ ಸ್ವರೂಪಗಳನ್ನು ನಿಷೇಧಿಸಲಾಗುವುದು. ಕೃಷಿ ಮತ್ತು ಚಿಲ್ಲರೆ ವ್ಯಾಪಾರದ ಕಾರ್ಪೊರೇಟೀಕರಣವನ್ನು ತಡೆಗಟ್ಟಲು ನೀತಿ ಮತ್ತು ಕಾನೂನು ಜಾರಿ ಮಾಡಬೇಕು.
* 60 ವರ್ಷ ತುಂಬಿದ ರೈತರಿಗೆ ಪಿಂಚಣಿಯನ್ನು ಮಾಸಿಕ ಐದು ಸಾವಿರ ನಿಗದಿಪಡಿಸಬೇಕು. ಇದನ್ನೂ ಓದಿ: ಕಾಂಗ್ರೆಸ್‍ನ ಮೊದಲ ಅಧ್ಯಕ್ಷರೇ ಬ್ರಿಟಿಷರು, ಹಾಗಾದ್ರೆ ಕಾಂಗ್ರೆಸ್ಸಿಗರು ಬ್ರಿಟಿಷರ ಬೂಟು ನೆಕ್ಕಿದ್ರಾ? – ಆರ್.ಅಶೋಕ್ ಕೌಂಟರ್

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕುರುಬೂರ್ ಶಾಂತಕುಮಾರ್, ಜಗಜೀತ್ ಸಿಂಗ್ ದಲ್ಲೆವಾಲ್ (ಪಂಜಾಬ್), ಕೆ.ವಿ.ಬಿಜು (ಕೇರಳ), ಅಭಿಮನ್ಯು ಕೋಹರ್ ಮತ್ತು ಲಖ್ವಿಂದರ್ ಸಿಂಗ್ ಔಲಾಖ್ (ಹರಿಯಾಣ), ಸಚಿನ್ ಮೊಹಾಪಾತ್ರ (ಒರಿಸ್ಸಾ), ಅರುಣ್ ಸಿನ್ಹಾ (ಬಿಹಾರ), ರವಿದತ್ ಸಿಂಗ್ (ಮಧ್ಯಪ್ರದೇಶ), ಶಂಕರ್ ದಾರೆಕರ್ (ಮಹಾರಾಷ್ಟ್ರ), ರಾಜ್ಯ ರೈತ ಸಂಘದ ವಿ.ಆರ್.ನಾರಾಯಣ ರೆಡ್ಡಿ, ರಾಜ್ಯ ಕಬ್ಬು ಬೆಳೆಗಾರ ಸಂಘದ ಬಸವರಾಜ್ ಪಾಟೀಲ್, ಎನ್.ಹೆಚ್.ದೇವಕುಮಾರ್, ಅತ್ತಳ್ಳಿ ದೇವರಾಜ್, ಬರಡನ್ಪುರ ನಾಗರಾಜ್, ಪರಶುರಾಮ್, ರಾಜೇಶ್, ಧರ್ಮರಾಜ್ ಉಪಸ್ಥಿತರಿದ್ದರು.

Share This Article