ಭಟ್ಕಳದಲ್ಲಿದ್ದಾರೆ ಪಾಕಿಸ್ತಾನಿಗಳು| ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದವರು, ತಲೆಮರೆಸಿಕೊಂಡವರೆಷ್ಟು?

Public TV
5 Min Read

ಕಾರವಾರ: ದೇಶದಲ್ಲಿ ಎಲ್ಲೇ ಉಗ್ರವಾದಿ ಚಟುವಟಿಕೆ ಇರಲಿ ಅದಕ್ಕೆ ಭಟ್ಕಳವನ್ನು ಲಿಂಕ್ ಮಾಡಲಾಗುತ್ತದೆ. ಭಟ್ಕಳದಲ್ಲಿ ಇತ್ತೀಚಿನ ವರೆಗೂ ಉಗ್ರವಾದಿ ಚಟುವಟಿಕೆಗೆ ಬೆಂಬಲ ನೀಡಿ ಬಂಧಿತರಾದವರ ಸಂಖ್ಯೆ ಕಡಿಮೆ ಇಲ್ಲ. ಕರ್ನಾಟಕದಲ್ಲೇ ಅತೀ ಹೆಚ್ಚು ಉಗ್ರವಾದಿ ಆರೋಪದಡಿ ಜೈಲು ಸೇರಿದ ಹಾಗೂ ತಲೆಮರೆಸಿಕೊಂಡವರ ಸಂಖ್ಯೆಯಲ್ಲಿ ಭಟ್ಕಳ (Bhatkal) ಮೊದಲ ಸ್ಥಾನದಲ್ಲಿದೆ.

ದೆಹಲಿಯಲ್ಲಿ ಕಾರ್ ಬ್ಲಾಸ್ಟ್ ಬೆನ್ನಲ್ಲೇ ದೇಶಾದ್ಯಂತ ಸೂಕ್ಷ್ಮ ಪ್ರದೇಶಗಳಿಗೆ ಅಲರ್ಟ್‌ ನೀಡಲಾಗಿದೆ. ಇದೇ ರೀತಿ ಉತ್ತರ ಕನ್ನಡ ಜಿಲ್ಲೆಯ ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲೂ ಅಲರ್ಟ್‌ ನೀಡಲಾಗಿದ್ದು, ಈ ಹಿಂದೆ ಉಗ್ರವಾದಿ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಹೊತ್ತವರ ಕುರಿತು ಈಗಿನ ಚಟುವಟಿಕೆ ಬಗ್ಗೆ ಇಂಚಿಂಚು ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಂಗ್ರಹಿಸುತ್ತಿದೆ. ಭಟ್ಕಳದಲ್ಲಿ ಉಗ್ರವಾದ ಆರೋಪ ಹೊತ್ತವರೆಷ್ಟು? ಪಾಕಿಸ್ತಾನದ ಪ್ರಜೆಗಳು ವಾಸವಿರುವವರು ಎಷ್ಟು? ಈಗಿನ ಸ್ಥಿತಿ ಏನಿದೆ? ಇದನ್ನೂ ಓದಿ: Delhi Explosion | ವಿದೇಶಕ್ಕೆ ಪರಾರಿಯಾಗಲು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ ಶಾಹಿನ

ಭಟ್ಕಳಕ್ಕೆ ಉಗ್ರವಾದಿತ್ವದ ಅಂಟು ಅಂಟಲು ಇಂಡಿಯನ್ ಮುಜಾಹಿದಿನ್ ಹಾಗೂ ಐಸೀಸ್‌ ಸಂಘಟನೆ ಕಾರಣ. ಈ ಎರಡು ಸಂಘಟನೆಯ ಪ್ರಮುಖರು ಭಟ್ಕಳ ಮೂಲದವರಾಗಿದ್ದು, ಭಟ್ಕಳದಲ್ಲಿ ಹಲವು ಯುವಕರು ಉಗ್ರವಾದಿ ಸಂಘಟನೆ ಬೆಂಬಲಿಸಿದ ಆರೋಪವಿದೆ. ಹಲವರಿಗೆ ಶಿಕ್ಷೆಯಾದರೆ, ಹಲವರ ಪ್ರಕರಣ ನ್ಯಾಯಾಲಯದಲ್ಲಿದೆ. ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಐಎಮ್ ಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಹ್ಮದ್ ಸಿದ್ದೀಬಪ್ಪ ಅಲಿಯಾಸ್ ಯಾಸಿನ್ ಭಟ್ಕಳ್ ಮೂಲಕ ಮೊದಲ ಬಾರಿಗೆ ಭಟ್ಕಳದ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.

ಯಾಸಿನ್ ಭಟ್ಕಳ್ ಭಾರತದಲ್ಲಿ ನಡೆದ ಅನೇಕ ಬಾಂಬ್ ಸ್ಫೋಟ ಪ್ರಕರಣದ ರೂವಾರಿಯಾಗಿದ್ದ. ಪ್ರಮುಖವಾಗಿ 2010 ರಲ್ಲಿ ಪೂನಾ ಜರ್ಮನ್ ಬೇಕರಿ ಬ್ಲಾಸ್ಟ್, 2011 ರಲ್ಲಿ ಮುಂಬೈನಲ್ಲಿ ನಡೆದ ಬ್ಲಾಸ್ಟ್, 2013 ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಬ್ಲಾಸ್ಟ್ ಹಾಗೂ 2008 ರಿಂದ 2012 ರ ನಡುವೆ ದೆಹಲಿ, ಅಹಮದಾಬಾದ್, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿಯಾಗಿದ್ದ ಈತ 2013 ರಲ್ಲಿ ನೇಪಾಳದ ಗಡಿಯಲ್ಲಿ ಬಂಧಿತನಾಗುತ್ತಾನೆ. 2016 ರಲ್ಲಿ NIA ವಿಶೇಷ ನ್ಯಾಯಾಲಯ ಯಾಸಿನ್ ಭಟ್ಕಳ್‌ಗೆ ಮರಣ ದಂಡನೆ ವಿಧಿಸದ್ದು, ಸದ್ಯ ತಿಹಾರ್ ಜೈಲಿನಲ್ಲಿ ಇದ್ದಾನೆ.

ರಿಯಾಜ್ ಭಟ್ಕಳ್ ಕೂಡ ಭಟ್ಕಳ ಮೂಲದವನಾಗಿದ್ದು, ಐ.ಎಮ್ ಸಂಘಟನೆಯ ಸಹ ಸಂಸ್ಥಾಪಕ. ಈತನೊಂದಿಗೆ ಇಕ್ಬಾಲ್ ಭಟ್ಕಳ, ಯಾಸಿನ್ ಭಟ್ಕಳ್ ಸಹ ಕೈಜೋಡಿಸಿದರು. ಇವರು ಕೃತ್ಯಗಳಿಗೆ ಹಣಕಾಸು ನೆರವು, ಬಾಂಬ್ ದಾಳಿ ಯೋಜನೆ ರೂಪಿಸುವುದು, ತಂತ್ರಜ್ಞಾನ, ಲಾಜಿಸ್ಟಿಕ್ ವ್ಯವಸ್ಥೆ, ದಾಳಿಗಳಿಗೆ ಸ್ಥಳ ಆಯ್ಕೆಯಂತಹ ಕಾರ್ಯದಲ್ಲಿ ತೊಡಗಿದ್ದು, ಕಿಸ್ತಾನದ ISI ಮತ್ತು Lashkar-e-Taiba ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪವಿದೆ. ಇದನ್ನೂ ಓದಿ: ಡಾ.ಉಮರ್ ಬಾಂಬ್ ಎಕ್ಸ್‌ಪರ್ಟ್‌ – 10 ನಿಮಿಷದಲ್ಲಿ ಬಾಂಬ್ ತಯಾರಿಸಿದ್ನಾ ಉಗ್ರ? ಕಾರಿನೊಳಗೆ ಹೇಗಿತ್ತು ಸೆಟಪ್‌?

ರಿಯಾಜ್ ಭಟ್ಕಳ IM ಸಂಘಟನೆಯ ಸ್ಟ್ರಾಟಜಿಕ್ ಬ್ರೈನ್ ಎಂದೇ ಕರೆಯಲಾಗುತ್ತದೆ. ಇಕ್ಬಾಲ್ ಭಟ್ಕಳ್ ಯುವಕರನ್ನು ಸೆಳೆಯುವ ಮತ್ತು ಸಂಘಟನೆಯ ಉದ್ದೇಶವನ್ನು ಬಿತ್ತರಿಸುವ ಕಾರ್ಯವನ್ನು ನೀಡಿಕೊಳ್ಳುತಿದ್ದ ಆರೋಪವಿದೆ. ಯಾಸಿನ್ ಭಟ್ಕಳ್ ಐ.ಎಮ್‌ನ ತಳಮಟ್ಟದ ಕಾರ್ಯಗಳನ್ನು ನೋಡಿಕೊಳ್ಳುವ ಜೊತೆ ಬಾಂಬ್ ತಯಾರಿಕೆ, ಟಾರ್ಗೆಟ್ ಕಮಾಂಡಿಂಗ್ ಕಾರ್ಯಾಚರಣೆ ತಂಡದ ಮುಖ್ಯಸ್ಥನಾಗಿದ್ದ ಆರೋಪವಿದೆ.

ರಿಯಾಜ್ ಭಟ್ಕಳ ಪಾಕಿಸ್ತಾನದಲ್ಲಿ ಅಡಗಿದ್ದಾನೆ ಎಂದು ಹೇಳಲಾಗುತ್ತಿದ್ದು, ಇಕ್ಬಾಲ್ ಭಟ್ಕಳ್ ರಿಯಾಜ್ ಜೊತೆಗೆ ಪಾಕಿಸ್ತಾನದಲ್ಲಿ ಇರಬಹುದು ಎಂದು ಕೇಂದ್ರ ಗುಪ್ತಚರ ಇಲಾಖೆ ವಾದವಾಗಿವೆ. ಈ ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಭಟ್ಕಳ ಮೂಲದ ಇವರು ಉಗ್ರಸಂಘಟನೆ ಹುಟ್ಟುಹಾಕಿದ ಕಾರಣ ಹಾಗೂ ಪಾಕಿಸ್ತಾನದ ಜೊತೆ ಸಂಪರ್ಕ ಕಾರಣ ಭಟ್ಕಳ ನಗರ ಮೊದಲಬಾರಿಗೆ ಟಾರ್ಗೆಟ್ ಆಯಿತು. ಇದಲ್ಲದೇ ಹಲವು ಜನ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ. ಹೀಗಾಗಿಯೇ ಭಟ್ಕಳದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯ ಕಚೇರಿಯು ಸಹ ತೆರೆಯಲಾಗಿದೆ.

ಎಷ್ಟು ಜನ ಉಗ್ರ ಚಟುವಟಿಕೆ ಆರೋಪ ಹೊಂದಿದ್ದಾರೆ?
ಭಟ್ಕಳದಲ್ಲಿ 2025 ರ ಹೊಸ ಮಾಹಿತಿ ಪ್ರಕಾರ ವಿವಿಧ ಉಗ್ರ ಚಟುವಟಿಕೆ ಹಾಗೂ ಬೆಂಬಲದಲ್ಲಿ ನ್ಯಾಯಾಲಯದಲ್ಲಿ ಆರೋಪ ಎದುರಿಸುತ್ತಿರುವ ಜೆ.ಸಿ ಕಸ್ಟಡಿಯಲ್ಲಿ ಇರುವವರು ಒಟ್ಟು ಐದು ಜನ .ಆರೋಪದಿಂದ ಮುಕ್ತರಾದವರು ಒಟ್ಟು ಆರು ಜನ.ತಲೆಮರೆಸಿಕೊಂಡವರು ಒಟ್ಟು ಒಂಬತ್ತು ಜನರಿದ್ದಾರೆ.

ಯಾವ ಜೈಲಿನಲ್ಲಿ ಎಷ್ಟು ಜನರಿದ್ದಾರೆ?
ಬಾಂಬ್ ಬ್ಲಾಸ್ಟ್ ಸೇರಿದಂತೆ ವಿವಿಧ ಪ್ರಕರಣದಲ್ಲಿ ಐದು ಜನ ಜೈಲಿನಲ್ಲಿ ಇದ್ದಾರೆ. ಇದರಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿ ಮೂರು ಜನ,

ಪ್ರಮುಖ ಉಗ್ರರು ಯಾರು.?
ಉಗ್ರ ಚಟುವಟಿಕೆ ಆರೋಪ ಹೊತ್ತು ತಲೆಮರೆಸಿಕೊಂಡವರಲ್ಲಿ 9 ಜನರಿದ್ದಾರೆ. ಇವರಲ್ಲಿ ಪ್ರಮುಖವಾಗಿ ರಿಯಾಜ್ ಭಟ್ಕಳ್, ಇಕ್ಭಾಲ್ ಭಟ್ಕಳ್,ಹಬೀಬ್ ಜಿಲಾನಿ ಪ್ರಮುಖರಾಗಿದ್ದಾರೆ.

ಭಟ್ಕಳ ಹಾಗೂ ಪಾಕಿಸ್ತಾನದ ಸಂಬಂಧ ಭಟ್ಕಳದಲ್ಲಿದ್ದಾರೆ ಪಾಕಿಸ್ತಾನದ 13 ಜನ!
ಭಟ್ಕಳ ಹಾಗೂ ಪಾಕಿಸ್ತಾನದ ಸಂಬಂಧ ಇಂದು ನಿನ್ನೆಯದಲ್ಲಿ ಸ್ವತಂತ್ರ ಪೂರ್ವದಿಂದಲೂ ಪಾಕಿಸ್ತಾನ ಭಾಗದೊಂದಿಗೆ ಭಟ್ಕಳಿಗರ ವೈವಾಹಿಕ ಸಂಬಂಧಗಳು ನಡೆದಿವೆ. ಸ್ವತಂತ್ರ ನಂತರ ಭಾರತ ವಿಭಜನೆಯಾದಾಗ ಭಟ್ಕಳದ ಸಂಬಂಧಗಳು ದೂರವಾದವು. ಹಿಂದೆಯೇ ಪಾಕಿಸ್ತಾನದ ಭಾಗಕ್ಕೆ ಹೆಣ್ಣು -ಗಂಡಿನ ವಿವಾಹ ಸಂಬಂಧಗಳು ಇದ್ದವು. ಅದು ಭಾರತದಿಂದ ಪಾಕಿಸ್ತಾನ ವಿಭಜನೆಯಾಗಿ ದೂರವಾದರೂ, ಉದ್ಯೋಗದ ನೆಪದಲ್ಲಿ ದೇಶ ಬಿಟ್ಟು ಹೊರ ರಾಷ್ಟ್ರಗಳಿಗೆ ತೆರಳಿದ ಭಟ್ಕಳ ಯುವಕರು ಪಾಕಿಸ್ತಾನದ ವಿವಾಹ ಸಂಬಂಧವನ್ನು ಮುಂದುವರೆಸಿದರು. ಹೆಚ್ಚಾಗಿ ಗಲ್ಫ್ ರಾಷ್ಟ್ರದಲ್ಲಿ ಈ ಸಂಬಂಧಗಳು ಚಿಗುರಿದ್ದು, ಹೀಗೆ 12 ಮಹಿಳೆ ಹಾಗೂ ಒಂದು ಮಗು ಸೇರಿ 13 ಜನ ಪಾಕಿಸ್ತಾನದವರು. ಇದೀಗ ಭಟ್ಕಳದಲ್ಲಿ ನೆಲಸಿದ್ದಾರೆ. ಇವರೆಲ್ಲರೂ ದೀರ್ಗಾವಧಿ ವಿಸಾದಡಿ ನೆಲಸಿದ್ದಾರೆ. ಈ ಹಿಂದೆ ಪಾಕಿಸ್ತಾನದ ಮಹಿಳೆಯೊಬ್ಬಳ ವಿಸಾ ಅವಧಿ ಮುಗಿದು ಜೈಲು ಪಾಲಾಗುವಂತ ಘಟನೆ ನಡೆದಿತ್ತು. ಇದನ್ನೂ ಓದಿ: ಫರಿದಾಬಾದ್‌ನಲ್ಲಿ ಜಪ್ತಿ ಮಾಡಿದ್ದ ಸ್ಫೋಟಕ ಶ್ರೀನಗರ ಠಾಣೆಯಲ್ಲಿ ಸ್ಫೋಟ – ಇದು ಆಕಸ್ಮಿಕ ಘಟನೆ; ಗೃಹಸಚಿವಾಲಯ, ಡಿಜಿಪಿ ಸ್ಪಷ್ಟನೆ

ಸದ್ಯ ಈ 13 ಪಾಕಿಸ್ತಾನಿಗಳ ಮಾಹಿತಿ ಜಿಲ್ಲಾ ಪೊಲೀಸ್ ಹಾಗೂ ಕೇಂದ್ರ ಗುಪ್ತಚರ ಇಲಾಖೆಯ ಬಳಿ ಇದೆ. ಆದರೇ ಈವರೆಗೂ ಈ ಮಹಿಳೆಯರು ದೇಶದ್ರೋಹಿ ಚಟುವಟಿಕೆಯಲ್ಲಿ ಭಾಗಿಯಾಗದಿರುವುದು ಇವರ ವೈವಾಹಿಕ ಬದ್ಧತೆ ಎತ್ತಿ ಹಿಡಿಯುತ್ತದೆ. ಆದರೆ ಎಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದರೋ ಅಂದಿನಿಂದ ಇಲ್ಲಿ ದೀರ್ಗಾವಧಿ ವಿಸಾದಡಿ ನೆಲಸಿರುವ ಮಹಿಳೆಯರಿಗೂ ಸಂಕಷ್ಟ ಎದುರಾಗುವಂತೆ ಆಗಿದೆ. ಇನ್ನು ಈ ಹಿಂದೆಯೇ ಈ ದೇಶದ ಪೌರತ್ವಕ್ಕಾಗಿ ಹಲವು ಭಟ್ಕಳ ಯುವಕರನ್ನು ಮದುವೆಯಾದ ಮಹಿಳೆಯರು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಇನ್ನು ಕೆಲವು ಮಹಿಳೆಯರಂತೂ ಮೊಮ್ಮಕ್ಕಳನ್ನು ಕಂಡರೂ ಇದುವರೆಗೂ ಭಾರತೀಯ ನಾಗರಿಕತೆಯ ಹಕ್ಕು ಸಿಕ್ಕಿಲ್ಲ.

ಇತ್ತೀಚಿನ ದಿನದಲ್ಲಿ ಭಟ್ಕಳ ಕೇಂದ್ರ ಗುಪ್ತಚರ ಇಲಾಖೆಯ ಟಾರ್ಗೆಟ್‌ನಲ್ಲಿದೆ. ಭಟ್ಕಳದ ಮುಸ್ಲಿಂ ಯುವಕರಿಗೆ ಹೊರದೇಶದಲ್ಲಿ ಉದ್ಯೋಗ ಮಾಡಲು ಪಾಸ್‌ಪೋರ್ಟ್‌ ಸಹ ದೊರಕುವುದು ಕಷ್ಟಕರವಾಗಿದ್ದು, ಚಿಕ್ಕ ಪ್ರಕರಣವಿದ್ದರೂ ಪಾಸ್‌ಪೋರ್ಟ್‌ ನಿರಾಕರಣೆ ಮಾಡಲಾಗುತ್ತಿದೆ. ಇದಲ್ಲದೇ ಭಟ್ಕಳದಲ್ಲಿ ಕೆಲವು ಯುವಕರು ದೇಶದ್ರೋಹಿ ಸಂಘಟನೆ ಜೊತೆ ತಮ್ಮನ್ನು ಗುರುತಿಸಿಕೊಳ್ಳುತ್ತಿರುವುದು ಇಡೀ ಭಟ್ಕಳವನ್ನು ಅನುಮಾನದ ದೃಷ್ಟಿಯಲ್ಲಿ ನೋಡುವಂತಾಗಿದೆ.

Share This Article