“ಅನ್ನ ಬಿಟ್ರೆ ಏನಿಲ್ಲ, ಎದೆಯಲ್ಲಿ ಹಾಲು ಬರ್ತಿಲ್ಲ- 8 ದಿನದ ಮಗುವಿಗೆ ಏನು ನೀಡಲಿ”

Public TV
1 Min Read

– ಕಂದನ ಸ್ಥಿತಿ ಕಂಡು ಬಾಣಂತಿಯ ಕಣ್ಣೀರು

ನವದೆಹಲಿ: ಕಳೆದು ಕೆಲವು ದಿನಗಳಿಂದ ಅನ್ನ ಹೊರತು ಬೇರೆ ಯಾವುದೇ ಪೌಷ್ಠಿಕಾಂಶ ಆಹಾರ ಸೇವಿಸುತ್ತಿಲ್ಲ. ಹಾಗಾಗಿ ಎದೆಯಲಿ ಹಾಲು ಬರುತ್ತಿಲ್ಲ. ಈಗ ನನ್ನ 8 ದಿನದ ಮಗಳಿಗೆ ಏನು ಕುಡಿಸಲಿ ಎಂದು ಬಾಣಂತಿ ಕಣ್ಣೀರು ಹಾಕುತ್ತಿದ್ದಾರೆ.

ಲಾಕ್‍ಡೌನ್ ಕೆಳವರ್ಗದ ಜನರನ್ನು ಮತ್ತಷ್ಟು ಕೆಳಗೆ ತೆಗೆದುಕೊಂಡು ಹೋಗ್ತಿದೆ. ಪ್ರತಿದಿನದ ದುಡಿಮೆಯನ್ನು ನಂಬಿಕೊಂಡು ಜೀವನ ಸಾಹಿಸುತ್ತಿದ್ದ ಅದೆಷ್ಟೋ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ತಲುಪಿವೆ. ಅಂತಹ ಪ್ರತಿ ಕುಟುಂಬಗಳದ್ದು ಒಂದೊಂದು ಕಷ್ಟ. ಬಾಣಂತಿ ಸರಿಯಾದ ಪೌಷ್ಠಿಕಾಂಶ ಆಹಾರ ಸಿಗದಕ್ಕೆ ಕಣ್ಣೀರಿಡುತ್ತಿದ್ದಾರೆ. ತಾಯಿ ಮಾತು ಕೇಳಿದ್ರೆ ನೀವು ಸಹ ಭಾವುಕರಾಗುತ್ತೀರಿ.

ದೆಹಲಿಯ ಮೆಹಕ್ ಎಂಟು ದಿನಗಳ ಹಿಂದೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮೆಹಕ್ ಮತ್ತು ಪತಿ ಗೋಪಾಲ್ ಉತ್ತರಾಖಂಡ ರಾಜ್ಯದ ನೈನಿತಾಲ್ ನಿವಾಸಿಗಳು. ಕೂಲಿ ಅರಸಿ ವಲಸೆ ಬಂದಿರೋ ದಂಪತಿ ಹಳೆ ದೆಹಲಿಯ ಟೌನ್ ಹಾಲ್ ವ್ಯಾಪ್ತಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ನಿಂದ ಎಲ್ಲವೂ ಸ್ತಬ್ಧಗೊಂಡಿದ್ದು, ಜೀವ ಉಳಿಸಿಕೊಳ್ಳಲು ಮನೆ ಸೇರುವಂತಾಗಿದೆ. ಈ ಸಮಯದಲ್ಲಿ ಮೆಹಕ್ ಮಗುವಿಗೆ ಜನ್ಮ ನೀಡಿದ್ದು, ಕುಟುಂಬಕ್ಕೆ ದುರ್ಭಿಕ್ಷದಲ್ಲಿ ಅಧಿಕ ಮಾಸ ಬಂದಂತಾಗಿದೆ. ಇದನ್ನೂ ಓದಿ: ಅಣ್ಣನ ಚಿತೆಗೆ ತಂಗಿಯಿಂದಲೇ ಅಂತ್ಯಕ್ರಿಯೆ- ಸ್ಮಶಾನದಲ್ಲಿದ್ದ ಅರೆಸುಟ್ಟ ಕಟ್ಟಿಗೆ ಆಯ್ದು ತಂದ ತಾಯಿ

ಮಗು ಹುಟ್ಟಿದ ಖುಷಿಗಿಂತ ಅದರ ಆರೈಕೆ, ಲಾಲನೆ-ಪಾಲನೆ ಹೇಗೆ ಮಾಡಬೇಕೆಂಬ ಚಿಂತೆ ದಂಪತಿಯನ್ನು ಕಾಡ್ತಿದೆ. ಎರಡು ದಿನದಲ್ಲಿ ಒಂದು ಬಾರಿ ಊಟ ಸಿಕ್ಕರೆ ನಮ್ಮ ಪುಣ್ಯ. ಪೌಷ್ಠಿಕಾಂಶ ಆಹಾರ ಎಲ್ಲಿ ಸಿಗಬೇಕು. ನಾನು ಸರಿಯಾಗಿ ಆಹಾರ ಸೇವನೆ ಮಾಡದೇ ಇರೋದರಿಂದ ಎದೆಯಲ್ಲಿ ಹಾಲು ಬರುತ್ತಿಲ್ಲ. ಎಂಟು ದಿನದ ಈ ಪುಟ್ಟ ಮಗುವಿಗೆ ಏನು ಕುಡಿಸಲಿ ಎಂದು ಮೆಹಕ್ ಕಣ್ಣೀರು ಹಾಕುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *