ದೀಪಕ್ ರಾವ್ ಕೊಲೆ ಪ್ರಕರಣ – ಮತ್ತಿಬ್ಬರು ಆರೋಪಿಗಳ ಬಂಧನ

Public TV
1 Min Read

ಮಂಗಳೂರು: ಜಿಲ್ಲೆಯ ಕಾಟಿಪಳ್ಳ ದೀಪಕ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಬ್ದುಲ್ ಅಜೀಜ್ (42), ಅಬ್ದುಲ್ ಅಜೀಮ್ (34) ಬಂಧಿತ ಆರೋಪಿಗಳು. ಕೊಲೆಯಾದ ದಿನದಂದು ಬಂಧನ ಮಾಡಿದ್ದ ನಾಲ್ವರು ಆರೋಪಿಗಳು ನೀಡಿದ ಮಾಹಿತಿಯನ್ನು ಆಧಾರಿಸಿ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಮಂಗಳೂರಿನ ಕಾಟಿಪಳ್ಳ ನಿವಾಸಿಗಳು ಎಂದು ತಿಳಿದು ಬಂದಿದೆ.

ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ದೀಪಕ್ ರಾವ್ ನನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಯಾದ ದಿನ ಸ್ಥಳೀಯರು ನೀಡದ ಮಾಹಿತಿ ಆಧಾರಿಸಿ ಅರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು ಎಂದು ತಿಳಿಸಿದ್ದರು. ಈ ಮಾಹಿತಿ ಆಧಾರಿಸಿ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದ್ದರು. ಈ ವೇಳೆ ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ನಿಲ್ಲಿಸುವಂತೆ ಸೂಚನೆ ನೀಡಿದರೂ ನಿಲ್ಲಿಸದೇ ಹೋಗಿತ್ತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರು ಅನುಮಾನಗೊಂಡು ಕಾರನ್ನು ಚೇಸ್ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಆರೋಪಿಗಳ ಮೇಲೆ ಗುಂಡಿನ ದಾಳಿಯನ್ನು ಮಾಡಲಾಗಿತ್ತು. ಇದರರಲ್ಲಿ ಪಿಂಕಿ ನವಾಸ್, ರಿಜ್ವಾನ್ ಎಂಬ ಆರೋಪಿಗಳಿಗೆ ಗುಂಡೇಟು ತಗಲಿತ್ತು. ಇದನ್ನೂ ಓದಿ:  ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

ಪ್ರಸ್ತುತ ಪಿಂಕಿ ನವಾಸ್, ರಿಜ್ವಾನ್ ಇಬ್ಬರು ಆರೋಪಿಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಮತ್ತಿಬ್ಬರು ಆರೋಪಿಗಳಾದ ನೌಶಾದ್, ಇರ್ಷಾನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರೆಸಿದೆ.

Share This Article
Leave a Comment

Leave a Reply

Your email address will not be published. Required fields are marked *