ಮಾಲೂರು ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಕಾಮಿಗೆ ಗಲ್ಲು

Public TV
1 Min Read

ಕೋಲಾರ: ಜಿಲ್ಲೆಯ ಮಾಲೂರು ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ ಆರೋಪಿಗೆ ಕೋಲಾರದ ಎರಡನೇ ಜಿಲ್ಲಾ ಸತ್ರ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಮಾಲೂರು ತಾಲೂಕು ಟೇಕಲ್ ಗ್ರಾಮದ ನಿವಾಸಿ ಸುರೇಶ್ ಬಾಬು (25) ಗಲ್ಲು ಶಿಕ್ಷೆಗೆ ಗುರಿಯಾದ ಆರೋಪಿ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಅವಧಿಯಲ್ಲಿ ಆರೋಪಿಯೊಬ್ಬನಿಗೆ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಇದಾಗಿದೆ.

ಇಂದು ನಡೆದ ಕಲಾಪದಲ್ಲಿ ನ್ಯಾಯಾಧೀರಾದ ಬಿ.ಎಸ್.ರೇಖಾ ಅವರು, ಪ್ರಕರಣದ ಕುರಿತು 18 ದಿನಗಳಲ್ಲಿ ಮಾಲೂರು ಪೊಲೀಸರು 201 ಪುಟಗಳ ಚಾರ್ಜ್ ಶೀಟ್ ಪರಿಶೀಲಿಸಿ, 46 ಜನ ಸಾಕ್ಷಿದಾರರನ್ನು ವಿಚಾರಣೆ ನಡೆಸಿದರು. ಅವರ ಪೈಕಿ 33 ಮಂದಿ ಸಾಕ್ಷಿದಾರರ ಹೇಳಿಕೆಯನ್ನು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಿದ್ದಾರೆ.

ಏನಿದು ಪ್ರಕರಣ?
ಆಗಸ್ಟ್ 1 ರಂದು ಮಾಲೂರು ಪಟ್ಟಣದ ಶಾಲೆಯಿಂದ ಸಂಜೆ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ಹಿಂದಿರುಗುತ್ತಿದ್ದರು. ಆಗ ರೈಲ್ವೇ ಅಂಡರ್ ಪಾಸ್ ಬಳಿಯ ರಸ್ತೆ ಪಕ್ಕದ ಪೊದೆಯಲ್ಲಿ ಅಡಗಿ ಕುಳಿತಿದ್ದ ಸುರೇಶ್ ಬಾಬು ವಿದ್ಯಾರ್ಥಿನಿಯೊಬ್ಬಳನ್ನು ಗದ್ದೆಗೆ ಏಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಆದರೆ ವಿದ್ಯಾರ್ಥಿನಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಕೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ, ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಮರಳಿ, ಸ್ಥಳೀಯರಿಗೆ ಮಾಹಿತಿ ನೀಡಿದ್ದಳು. ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ವಿದ್ಯಾರ್ಥಿನಿ ಶವವಾಗಿ ಬಿದ್ದಿದ್ದಳು. ಈ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣ ಇಡೀ ಕೋಲಾರ ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿತ್ತು. ಘಟನೆಯಿಂದ ಆತಂಕಗೊಂಡಿದ್ದ ಜಿಲ್ಲೆಯ ಜನರು, ಸಾವಿರಾರು ವಿದ್ಯಾರ್ಥಿಗಳು ಅಮಾಯಕ ವಿದ್ಯಾರ್ಥಿನಿಯನ್ನು ಕೊಂದ ಆರೋಪಿಯ ಬಂಧನಕ್ಕಾಗಿ ಆಗ್ರಹಿಸಿ ಬೃಹತ್ ಹೋರಾಟವನ್ನೇ ಮಾಡಿದ್ದರು. ಆರೋಪಿಯನ್ನು ಬಂಧಿಸುವವರೆಗೆ ಹೋರಾಟ ಕೈಬಿಡೋ ಮಾತೇ ಇಲ್ಲ ಎಂದು ಪಟ್ಟು ಹಿಡಿದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *