2 ತಿಂಗ್ಳ ಹಿಂದೆ ಹಳಿಯಲ್ಲಿ ಪ್ರಿಯಕರನ ಶವ, ಈಗ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಗೆಳತಿಯ ಮೃತದೇಹ ಪತ್ತೆ

Public TV
3 Min Read

ರಾಂಚಿ: ಸುಟ್ಟು ಕರಕಲಾಗಿರುವ ಯುವತಿಯ ದೇಹವೊಂದು ಆಕೆಯ ಮಾವನ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಜನವರಿ 8ರಂದು ಜಾರ್ಖಂಡ್ ರಾಜ್ಯದ ಧನ್‍ಬಾದ್ ನಗರದಲ್ಲಿ ನಡೆದಿದೆ.

ಖುಷ್ಬೂ ಸಾವನ್ನಪ್ಪಿದ ಯುವತಿ. ಈ ಹಿಂದೆ 19 ನವೆಂಬರ್ 2017ರಂದು ಖುಷ್ಬೂ ಪ್ರಿಯಕರ ಯೋಗೇಶ್ ಶವ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಪ್ರಿಯಕರನ ಸಾವಿಗೆ ಮನನೊಂದ ಖುಷ್ಬೂ ಕೂಡ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.

ಖುಷ್ಬೂ ಸಾವನ್ನಪ್ಪಿದ್ದು ಹೇಗೆ?: ಮಾವನ ಮನೆಗೆ ಬಂದ ಖುಷ್ಬೂ ಏಕಾಂಗಿಯಾಗಿಯೇ ಇರುತ್ತಿದ್ದಳು. ಜನವರಿ 8ರಂದು ಸುಮಾರು ರಾತ್ರಿ 8 ಗಂಟೆಗೆ ಖುಷ್ಬೂ ಊಟ ಮಾಡಿ, 11 ಗಂಟೆವರೆಗೂ ಟಿವಿ ನೋಡಿದ್ದಾಳೆ. ಜನವರಿ 9ರಂದು ಬೆಳಗಿನ ಜಾವ ಮನೆಯ ಸದಸ್ಯರೊಬ್ಬರು ಬೆಳಗಿನ ಉಪಹಾರ ತಯಾರಿಸಲು ಅಡುಗೆ ಮನೆಗೆ ಹೋದಾಗ ಕೋಣೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಇದ್ರಿಂದ ಗಾಬರಿಯಾದ ಮಹಿಳೆ ಮನೆಯ ಇತರೆ ಸದಸ್ಯರನ್ನು ವಿಷಯ ತಿಳಿಸಿದ್ದಾರೆ. ನಂತರ ಬಾಗಿಲನ್ನು ಒಡೆದು ನೋಡಿದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ.

ಖುಷ್ಬೂ ಮತ್ತು ಯೋಗೇಶ್ ಇಬ್ಬರೂ ಧನ್‍ಬಾದ್ ನಗರದ ಪುಟಕಿ ಕ್ಷೇತ್ರದ ನಿವಾಸಿಗಳು. ಯೋಗೇಶ್ ಸಾವಿನ ಬಳಿಕ ಖುಷ್ಬೂ ಮಾನಸಿಕವಾಗಿ ತುಂಬಾ ಸೋತು ಹೋಗಿದ್ದಳು. ಪ್ರತಿದಿನ ಯೋಗೇಶ್ ಬಗ್ಗೆ ಚಿಂತಿಸುತ್ತಾ, ಒಂಟಿಯಾಗಿರಲು ಇಚ್ಚಿಸುತ್ತಿದ್ದಳು. ಸ್ಥಳ ಬದಲಾವಣೆ ಆದ್ರೆ ಮಗಳ ಮನಸ್ಥಿತಿ ಸುಧಾರಿಸಬಹುದು ಎಂದು ಆಕೆಯನ್ನು ಮಾವನ ಮನೆಗೆ ಕಳುಹಿಸಲಾಗಿತ್ತು. ಮಾವನ ಮನೆಗೆ ತೆರಳಿದ ಮಗಳು ಅದೇ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಖುಷ್ಬೂ ತಾಯಿ ಫೂಲ್‍ದೇವಿ ಹೇಳಿದ್ದಾರೆ.

ಖುಷ್ಬೂ ಮತ್ತು ಯೋಗೇಶ್ ಇಬ್ಬರೂ ಒಬ್ಬರನೊಬ್ಬರನ್ನು ಪ್ರೀತಿಸುತ್ತಿದ್ದರು. ಮದುವೆ ಆಗಲು ಸಹ ತೀರ್ಮಾನಿಸಿದ್ದರು. ಕಪೂರಿಯಾ ನಗರದ ಫಾಗೂ ಮಹತೋ ಇಂಟರ್ ಕಾಲೇಜಿನಲ್ಲಿ ಖುಷ್ಬೂ ವ್ಯಾಸಂಗ ಮಾಡುತ್ತಿದ್ದಳು. ಯೋಗೇಶ್ ರಾಂಚಿಯ ರಾಮ್ ಟಹಲ್ ಚೌಧರಿ ಕಾಲೇಜಿನಲ್ಲಿ 12ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಖುಷ್ಬೂ ಮತ್ತು ಯೋಗೇಶ್ ಒಂದೇ ಊರಿನವರು ಆಗಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರ ಉಂಟಾಗಿತ್ತು.

ಮನೆಯಿಂದ ಓಡಿ ಹೋಗಿದ್ರು: ಪ್ರೀತಿಯಲ್ಲಿ ಮುಳುಗಿದ ಖುಷ್ಬೂ ಮತ್ತು ಯೋಗೇಶ್ ಇಬ್ಬರೂ ನಾಪತ್ತೆಯಾಗಿದ್ದರು. ನವೆಂಬರ್ 15ರಂದು ರಾಂಚಿಯ ಹಾಸ್ಟೇಲ್‍ನಿಂದ ಯೋಗೇಶ್ ನಾಪತ್ತೆಯಾದ್ರೆ, ಖುಷ್ಬೂ ನವೆಂಬರ್ 16ರಂದು ಮನೆಯಿಂದ ನಾಪತ್ತೆಯಾಗಿದ್ದಳು. ಮನೆಯಿಂದ ಹೊರಬಂದ ಜೋಡಿ ರಾಂಚಿಯ ರೈಲ್ವೆ ನಿಲ್ದಾಣದ ಬಳಿಯ ನ್ಯೂ ವಿಶ್ವಾಸ್ ಹೋಟೆಲ್‍ನ ರೂಮ್ ನಂಬರ್ 7ರಲ್ಲಿ ತಂಗಿದ್ದರು. ಹೋಟೆಲ್‍ನಲ್ಲಿದ್ದ ಖುಷ್ಬೂಳನ್ನು ಆಕೆಯ ಸೋದರ ಪತ್ತೆ ಮಾಡಿ, ಮನೆಗೆ ಕರೆದುಕೊಂಡು ಹೋಗಿದ್ದರು. ಇತ್ತ ಖುಷ್ಬೂ ಮನೆಗೆ ಹೋದ್ಮೇಲೆ ಮರುದಿನ ಅಂದರೆ ನವೆಂಬರ್ 19ರಂದು ಯೋಗೇಶ್ ಶವ ರೈಲ್ವೇ ಹಳಿಯಲ್ಲಿ ಪತ್ತೆಯಾಗಿತ್ತು.

ಕೊಲೆಯೋ/ಆತ್ಮಹತ್ಯೆಯೋ: ಯೋಗೇಶ್ ತಂದೆ ಹೇಳಿಕೆಯನ್ನು ನೋಡುವುದಾದರೆ ಇಬ್ಬರದು ಅಸಹಜ ಸಾವು ಇರಬಹುದು ಎಂಬ ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಖುಷ್ಬೂಳನ್ನು ಹೋಟೆಲ್‍ನಿಂದ ಮನೆಗೆ ಕರೆದುಕೊಂಡು ಹೋದ ನಂತರ ಯೋಗೇಶ್‍ನನ್ನು ಯಾರ ಜೊತೆ ಹೋದ ಎಂಬುದು ಆಕೆಗೆ ತಿಳಿದಿತ್ತು. ನನ್ನ ಮಗನ ಸಾವಿಗೆ ಖುಷ್ಬೂ ಮೂಲ ಸಾಕ್ಷಿಯಾಗಿದ್ದಳು. ಈ ಕುರಿತು ಆಕೆ ತನ್ನ ಹೇಳಿಕೆಯನ್ನು ಕೋರ್ಟ್ ಮುಂದೆ ದಾಖಲಿಸಲು ಸಿದ್ಧಳಿದ್ದಳು. ಆ ದಿನ ಯೋಗೇಶ್ ಯಾರ ಜೊತೆ ಹೋಗಿದ್ದ ಎನ್ನುವ ವಿಚಾರ ಆಕೆಯೊಬ್ಬಳಿಗೆ ಮಾತ್ರ ತಿಳಿದಿತ್ತು. ಖುಷ್ಬೂ ಎಲ್ಲಿ ಸತ್ಯ ಹೇಳುತ್ತಾಳೆ ಎನ್ನುವ ಭಯದಿಂದ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಯೋಗೇಶ್ ತಂದೆ ದೇವನ್ ಮಹತೋ ಆರೋಪಿಸುತ್ತಾರೆ.

ಸಾವಿನ ಸುತ್ತ ಅನುಮಾನದ ಹುತ್ತ:
1. ಖುಷ್ಬೂ ತಾಯಿಯ ಹೇಳಿಕೆಯ ಪ್ರಕಾರ, ಅಂದು ರಾತ್ರಿ ಮಗಳು ಎಲ್ಲರೊಂದಿಗೆ ಊಟ ಮಾಡಿದ್ದಾಳೆ ಎಂದು ಸಂಬಂಧಿಕರು ಹೇಳಿದ್ದಾರೆ. ಆದ್ರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಖುಷ್ಬೂ ಅಂದು ಊಟ ಮಾಡಿರಲಿಲ್ಲ ಮತ್ತು ಆಕೆಯ ದೇಹದಲ್ಲಿ ಆಹಾರ ಪತ್ತೆಯಾಗಿಲ್ಲ.

2. ಒಂದು ವೇಳೆ ಅಡುಗೆ ಮನೆಯಲ್ಲಿ ಖುಷ್ಬೂ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದರೆ, ಆಕೆ ಬೆಂಕಿಯ ತೀವ್ರತೆಗೆ ಕೋಣೆಯಲ್ಲಿ ಅತ್ತಿತ್ತ ಓಡಾಡಿರುವ ಸಾಧ್ಯತೆಗಳಿರುತ್ತವೆ. ಆದ್ರೆ ಅಡುಗೆ ಕೋಣೆಯ ಸಾಮಗ್ರಿಗಳೆಲ್ಲಾ ವ್ಯವಸ್ಥಿತವಾಗಿದ್ದವು ಎಂದು ಪೊಲೀಸರು ಹೇಳುತ್ತಾರೆ.

3. ಚಿಕ್ಕ ಕೋಣೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದರೂ, ಅಲ್ಲಿರುವ ಯಾವ ವಸ್ತುಗಳಿಗೆ ಹಾನಿಯುಂಟಾಗಿಲ್ಲ. ಇನ್ನೂ ಕೋಣೆಯ ಗೋಡೆಗಳ ಮೇಲೆ ಹೊಗೆಯ ಕುರುಹು ಕಂಡು ಬಂದಿಲ್ಲ.

4. ಬೆಂಕಿ ಹಚ್ಚಿಕೊಂಡ ವ್ಯಕ್ತಿ ನೋವಿನಿಂದ ಚೀರಾಡುತ್ತಾರೆ. ಆದ್ರೆ ಖುಷ್ಬೂ ಚೀರಾಟ ಮನೆಯ ಸದಸ್ಯರಿಗೆ ಆಕೆಯ ಯಾರಿಗೂ ಕೇಳಿಸಲ್ಲವೆ ಎಂಬ ಅನುಮಾನ ಸಹ ಹುಟ್ಟಿಕೊಂಡಿದೆ.

 

Share This Article
Leave a Comment

Leave a Reply

Your email address will not be published. Required fields are marked *