ತಮ್ಮನ ಸರ್ಕಾರದಲ್ಲಿ ಅಣ್ಣ ಆಡಿದ್ದೇ ಆಟ- ರೇವಣ್ಣ ವಿರುದ್ಧ ಡಿಸಿಎಂ ಗರಂ

Public TV
1 Min Read

ಬೆಂಗಳೂರು: ಸೂಪರ್ ಸಿಎಂ ಎಚ್.ಡಿ ರೇವಣ್ಣ ವಿರುದ್ಧ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಗರಂ ಆಗಿದ್ದಾರೆ. ಎಲಿವೆಟೇಡ್ ಕಾರಿಡಾರ್ ವಿಷಯದಲ್ಲಿ ರೇವಣ್ಣ ಅವರನ್ನು ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಮಂಗಳವಾರ ನಡೆದ ಸಭೆಯಲ್ಲಿ ಸಿಎಂ ಸಮ್ಮುಖದಲ್ಲಿಯೇ ರೇವಣ್ಣಗೆ ಡಿಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾರ ಅಭಿಪ್ರಾಯವೂ ಪಡೆಯದೆ ಎಲಿವೆಟೇಡ್ ಕಾರಿಡಾರ್ ಕಾಮಗಾರಿಗೆ ರೇವಣ್ಣ ಮುಂದಾಗಿದ್ದರು. ರೇವಣ್ಣ ಅವರ ಈ ವರ್ತನೆಗೆ ಡಿಸಿಎಂ ಪರಮೇಶ್ವರ್ ಫುಲ್ ಗರಂ ಆಗಿದ್ದಾರೆ.

ಅದು ಹೇಗ್ರಿ ನೀವು ಒಬ್ಬರೇ ಅದನ್ನು ಮಾಡುತ್ತೀರಾ, ನೀವು ಪಿಡಬ್ಲ್ಯೂಡಿ ಸಚಿವರಾಗಿದ್ದು ಹೀಗೆ ಮಾಡೋದು ಸರೀನಾ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ. ಅಲ್ಲದೆ ನಾನು ಬೆಂಗಳೂರು ನಗರಾಭಿವೃದ್ದಿ ಸಚಿವನಿದ್ದೇನೆ. ಈ ಯೋಜನೆಗೆ ಬಗ್ಗೆ ನೀವು ನನ್ನ ಜೊತೆ ಚರ್ಚಿಸಬೇಕಿತ್ತು. ಕಾಮಗಾರಿ ಆರಂಭಿಸುವ ಬಗ್ಗೆ ನನ್ನ ಅಭಿಪ್ರಾಯ ಪಡೆಯಬಹುದಿತ್ತು. ನನ್ನ ಜೊತೆ ಚರ್ಚಿಸಿ ಬಿಡಿಎ, ಬಿಬಿಎಂಪಿ ಅಭಿಪ್ರಾಯ ಪಡೆಯಬೇಕಿತ್ತು. ಅದು ಬಿಟ್ಟು ನೀವೊಬ್ಬರೇ ಕಾಮಗಾರಿ ಆರಂಭಿಸಲು ಹೊರಟಿದ್ದೀರಿ. ನಿಮ್ಮ ಈ ನಿರ್ಧಾರ ಸರೀನಾ, ಅದು ಹೇಗೆ ನೀವು ಒಬ್ಬರೇ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆಯೇ ಸುರಿಸಿದ್ದಾರೆ ಎನ್ನಲಾಗಿದೆ.

ರೇವಣ್ಣ ಅವರನ್ನು ಪರಮೇಶ್ವರ್ ತರಾಟೆಗೆ ತೆಗೆದುಕೊಂಡ ವೇಳೆಯಲ್ಲಿ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಪರಮೇಶ್ವರ್ ಅವರನ್ನು ಸಮಾಧಾನಪಡಿಸಿದ್ದಾರೆ. ಎಲಿವೆಟೇಡ್ ಕಾರಿಡಾರ್ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುತ್ತೇನೆ. ಬೆಂಗಳೂರು ನಗರ ಶಾಸಕರು, ಬಿಬಿಎಂಪಿ, ಬಿಡಿಎ ಆಯುಕ್ತರ ಸಭೆ ಕರೆಯುತ್ತೇನೆ. ಆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು ಒಂದು ತೀರ್ಮಾನಕ್ಕೆ ಬರೋಣ ಎಂದ ಸಿಎಂ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *