ಬಿಜೆಪಿ ಶಾಸಕರ ಜೊತೆ ತಿಂಡಿ ಸವಿದ ಡಿಸಿಎಂ

Public TV
1 Min Read

– ಬಿಜೆಪಿಯಲ್ಲಿ ಒಳ್ಳೆಯ ಸ್ನೇಹಿತರಿದ್ದಾರೆ
– ಆರೋಗ್ಯ ವಿಚಾರಿಸೋದು ನಮ್ಮ ಕರ್ತವ್ಯ

ಬೆಂಗಳೂರು: ವಿಶ್ವಾಸಮತ ಯಾಚನೆಯ ವಿಳಂಬವನ್ನು ಖಂಡಿಸಿ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿಯೇ ಅಹೋರಾತ್ರಿ ಧರಣಿ ಮಾಡಿದ್ದು, ರಾತ್ರಿಯೆಲ್ಲ ಸದನದಲ್ಲಿ ನಿದ್ದೆ ಮಾಡಿ ಬೆಳ್ಳಂಬೆಳಗ್ಗೆ ವಿಧಾನಸೌಧದಲ್ಲಿ ತಿಂಡಿ ಮಾಡಿದ್ದಾರೆ.

ಬಿಜೆಪಿ ಶಾಸಕರು ವಿಧಾನಸೌಧದಲ್ಲಿ ಇಡ್ಲಿ, ವಡೆ, ದೋಸೆ, ಉಪ್ಪಿಟ್ಟು, ಕೇಸರಿಬಾತ್ ಸವಿದಿದ್ದಾರೆ. ಬಿಜೆಪಿ ಶಾಸಕರ ಬ್ರೇಕ್ ಫಾಸ್ಟ್ ವೇಳೆ ಡಿಸಿಎಂ ಪರಮೇಶ್ವರ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ಶಾಸಕರ ಜೊತೆ ಪರಮೇಶ್ವರ್ ಕೂಡ ತಿಂಡಿ ತಿಂದಿದ್ದಾರೆ.

ಪರಮೇಶ್ವರ್ ಬಿಜೆಪಿಯ ಇಂದಿನ ರಣತಂತ್ರ ತಿಳಿದುಕೊಳ್ಳಲು ಬೆಳ್ಳಂಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ನಿದ್ದೆ ಮಾಡಿದ್ರಾ? ಜಾಗರಣೆ ಮಾಡಿದ್ರಾ? ಸೊಳ್ಳೆ ಕಡಿದ್ವಾ? ಆರೋಗ್ಯ ಹೇಗಿದೆ? ಎಂದು ಬಿಜೆಪಿ ಶಾಸಕರ ಆರೋಗ್ಯವನ್ನು ಪರಮೇಶ್ವರ್ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗುರುವಾರ ರಾತ್ರಿಯಿಂದ ವಿಧಾನಸೌಧದಲ್ಲಿ ತಂಗಿದ್ದಾರೆ. ಸಭಾಧ್ಯಕ್ಷರು ಅವರ ಯೋಗಕ್ಷೇಮ, ಊಟ, ವಸತಿ ಏರ್ಪಡಿಸಬೇಕು ಎಂದು ಸೂಚಿಸಿದ್ದರು. ಹೀಗಾಗಿ ರಾತ್ರಿ ಭೋಜನದ ವ್ಯವಸ್ಥೆ, ಮಲಗಲು, ಪಿಲ್ಲೋ ಕೊಟ್ಟಿದ್ದೆವು. ಇಂದು ಬೆಳಗ್ಗೆ ಕೂಡ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ನಾನು ಅವರ ಜೊತೆಯಲ್ಲಿಯೇ ತಿಂಡಿ ಸವಿದೆ. ಮುಂಜಾಗೃತಾ ಕ್ರಮವಾಗಿ ವೈದ್ಯರ ಒಂದು ತಂಡವನ್ನು ಇಲ್ಲೆ ಇರಿಸಿದ್ದೆವು. ಸದ್ಯಕ್ಕೆ ಎಲ್ಲರೂ ಆರೋಗ್ಯವಾಗಿದ್ದಾರೆ. ಯಾರಿಗೂ ಏನು ತೊಂದರೆಯಾಗಿಲ್ಲ ಎಂದು ಪರಮೇಶ್ವರ್ ಹೇಳಿದ್ದಾರೆ.

ಸದನದ ಒಳಗಿನ ವರ್ತನೆಗಳು ಬೇರೆ, ಹೊರಗಿನ ವರ್ತನೆಗಳೇ ಬೇರೆ. ನನಗೆ ತುಂಬಾ ಒಳ್ಳೆಯ ಸ್ನೇಹಿತರು ಬಿಜೆಪಿಯಲ್ಲಿ ಇದ್ದಾರೆ. ರಾತ್ರಿ ವಿಧಾನಸಭೆಯಲ್ಲೇ ಬಿಜೆಪಿ ಸ್ನೇಹಿತರು ಮಲಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸುವುದು ನಮ್ಮ ಕರ್ತವ್ಯವಾಗಿದೆ. ಅದಕ್ಕಾಗಿ ಬೆಳಗ್ಗೆಯೇ ವಿಧಾನಸಭೆಗೆ ಬಂದಿದ್ದೇನೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *