ಡಿಸಿಎಂಗಾಗಿ ಮತ್ತೆ ಝೀರೋ ಟ್ರಾಫಿಕ್ – 20 ನಿಮಿಷ ಶಾಲಾ ವಿದ್ಯಾರ್ಥಿಗಳಿಗೆ ಫುಲ್ ಕಿರಿಕಿರಿ

Public TV
2 Min Read

– ಶಾಲಾ ಮಕ್ಕಳ ಬಳಿ ಕ್ಷಮೆ ಕೇಳುವೆ
– ಬಿಜೆಪಿಗೆ ಮತ ಹಾಕಿದ್ರೂ ಸಂಕಷ್ಟಕ್ಕೆ ಸ್ಪಂದಿಸ್ತೇವೆ

ಬೆಂಗಳೂರು: ಉಪಮುಖ್ಯಮಂತ್ರಿ ಅವರು ಮತ್ತೆ ಮತ್ತೆ ಝೀರೋ ಟ್ರಾಫಿಕ್‍ನಲ್ಲಿ ಹೋಗುತ್ತಿದ್ದು, ಇದೀಗ ಪರಮೇಶ್ವರ್ ಅವರ ಝೀರೋ ಟ್ರಾಫಿಕ್ ಪರಿಣಾಮದಿಂದ ಶಾಲಾ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿದೆ.

ಆರ್.ಟಿ.ನಗರ ಪೊಲೀಸ್ ಠಾಣೆ ಬಳಿ ರಸ್ತೆ ಅಗಲೀಕರಣ ವೀಕ್ಷಣೆಗೆಂದು ಡಿಸಿಎಂ ಪರಮೇಶ್ವರ್ ಬಂದಿದ್ದರು. ಈ ಸಂದರ್ಭದಲ್ಲಿ ಪರಮೇಶ್ವರ್ ಕಾರಿನ ಹಿಂದೆ ಬೆಂಬಲಿಗರ ಸಾಲು ಸಾಲು ಕಾರುಗಳಿದ್ದವು. ಇದರಿಂದಾಗಿ ಖಾಸಗಿ ಶಾಲಾ ಬಸ್ಸಿಗೆ ತೊಂದರೆಯಾಗಿದೆ. ಪರಮೇಶ್ವರ್ ಸ್ಥಳಕ್ಕೆ ಬಂದು 20 ನಿಮಿಷ ಆದರೂ ಶಾಲಾ ಮಕ್ಕಳ ಬಸ್ ಸಿಗ್ನಲ್‍ನಲ್ಲೇ ನಿಲ್ಲಿಸಿದ್ದರು. ಕೊನೆಗೆ 20 ನಿಮಿಷಗಳ ನಂತರ ಬಸ್ ಬಿಟ್ಟಿದ್ದಾರೆ. ಇದರಿಂದ ಜನ ಪ್ರತಿನಿಧಿಗಳಿಂದ ಶಾಲಾ ಮಕ್ಕಳಿಗೆ ಕಿರಿಕಿರಿ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಡಿಸಿಎಂ ಪರಮೇಶ್ವರ್ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ. ದಿಣ್ಣೂರು ಮುಖ್ಯ ರಸ್ತೆ ಅಗಲಿಕರಣ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ತಪಾಸಣೆ ಮಾಡಿದ್ದಾರೆ. ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ದಿನ್ನೂರು ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಿಸಿಎಂ ಟೇಪ್ ಹಿಡಿದು ಅಳತೆ ಮಾಡಿಸಿದ್ದಾರೆ. ಡಿಸಿಎಂ ಪರಮೇಶ್ವರ್ ಗೆ ಹೆಬ್ಬಾಳ ಶಾಸಕ ಭೈರತಿ ಸುರೇಶ್, ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಕಮಿಷನರ್ ಮಂಜುನಾಥ್ ಪ್ರಸಾದ್ ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.

ಸುಸಜ್ಜಿತ ರಸ್ತೆ ಮಾಡಿ, ಸುವ್ಯವಸ್ಥಿತವಾಗಿ ಮಾಡಿಕೊಟ್ಟರೆ ರಸ್ತೆ ಅಗಲೀಕರಣ ಅವಶ್ಯಕತೆ ಇಲ್ಲ. ರಸ್ತೆಗಳಲ್ಲೂ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳೇ ತುಂಬಿಕೊಂಡಿವೆ. ರಸ್ತೆಗಳು ಕಸದ ತೊಟ್ಟಿಯಾಗಿದೆ. ಜೊತೆಗೆ ರಸ್ತೆ ತುಂಬಾ ಗುಂಡಿಗಳೇ ತುಂಬಿವೆ. ಈ ಸಮಸ್ಯೆಯನ್ನು ಮೊದಲು ಪರಿಹಾರ ಮಾಡಿ. ರಸ್ತೆ ಅಗಲೀಕರಣ ಅವಶ್ಯಕತೆ ಇರುವುದಿಲ್ಲ ಎಂದು ಸಾರ್ವಜನಿಕರು ಡಿಸಿಎಂ ರೌಂಡ್ಸ್ ವೇಳೆ ದೂರು ನೀಡಿದ್ದಾರೆ.

ದಿಣ್ಣೂರು ಮುಖ್ಯರಸ್ತೆ ಅಗಲೀಕರಣ ಬಹಳ ದಿನಗಳಿಂದ ಮಾಡಲು ಒತ್ತಡವಿತ್ತು. ನೀಲಿನಕ್ಷೆ ಪಾಲಿಕೆ ಸಿದ್ಧಪಡಿಸಿ ಹಣ ಒದಗಿಸಲಾಗಿದೆ. 80 ಅಡಿ ಅಗಲೀಕರಣ ಮಾಡಲು ಅಂದಾಜು ಮಾಡಲಾಗಿದೆ. ಇದಕ್ಕಾಗಿ ಅಂಗಡಿ, ಮನೆ ಒಡೆಯಬೇಕಾಗುತ್ತದೆ. ಎರಡು ಭಾಗದಲ್ಲಿ 10 ಅಡಿ ಅಗಲೀಕರಣ ಮಾಡಿ ಎಂದು ಸ್ಥಳೀಯರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸ್ಥಳೀಯರ ನಷ್ಟ ಭರಿಸುವ ಬಗ್ಗೆಯೂ ಚರ್ಚೆಯಾಗುತ್ತಿದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ಡಿಸಿಎಂ ಕ್ಷಮೆ:
ಶಾಲಾ ಮಕ್ಕಳಿಗೆ ಝೀರೋ ಟ್ರಾಫಿಕ್ ಅಡ್ಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ನಾನು ಶಾಲಾ ಮಕ್ಕಳ ಬಳಿ ಕ್ಷಮೆ ಕೇಳುವೆ. ಜೊತೆಗೆ ಎಲ್ಲರಿಗೂ ಕ್ಷಮೆ ಕೇಳುವೆ. ನಮ್ಮಿಂದ ಯಾರಿಗೆ ಬೇಸರ ಆಗಬಾರದು. ಪೊಲೀಸರಿಗೆ ಅಂಬುಲೆನ್ಸ್, ಶಾಲಾ ವಾಹನಗಳಿಗೆ ಅಡ್ಡಿ ಮಾಡಬೇಡಿ ಎಂದು ಹೇಳಿದ್ದೆ. ಆದರೂ ಈ ರೀತಿ ಕೆಲವೊಮ್ಮೆ ಆಗಿದೆ. ಇದು ನನಗೂ ಬೇಸರ ತಂದಿದೆ. ಮತ್ತೊಮ್ಮೆ ಹೀಗೆ ಆಗಲ್ಲ ಎಂದು ಶಾಲಾ ಮಕ್ಕಳ  ಮತ್ತು ಪೋಷಕರ ಬಳಿ ಕ್ಷಮೆ ಕೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎಲ್ಲರಿಗೂ ಮತ ಹಾಕಿದ್ದೀರಿ. ಯಾರಿಗೆ ಮತ ಹಾಕಿದ್ದೀರಿ, ಹಾಕಿಲ್ಲ ಅಂತ ಗೊತ್ತಿಲ್ಲ. ಆದರೆ ಬಿಜೆಪಿಗೆ ಹೆಚ್ಚು ಮತ ಹಾಕಿದ್ದೀರಿ, ಪರವಾಗಿಲ್ಲ. ಜನಸಮುದಾಯಕ್ಕೆ ತೊಂದರೆ ಆಗಬಾರದು ಅಷ್ಟೇ. ಜನರ ಸಂಕಷ್ಟಕ್ಕೆ ಮೈತ್ರಿ ಸರ್ಕಾರ ಸ್ಪಂದಿಸಲಿದೆ ಎಂದರು.

ಹಲವೆಡೆ ಶುದ್ಧವಿಲ್ಲದ ನೀರು ಕೊಡುತ್ತಾರೆ ಎಂಬ ಮಾಹಿತಿ ಇದೆ. ಯಾಕೆ ಹೀಗೆ ಆಗುತ್ತೆ ಗೊತ್ತಿಲ್ಲ. ಅಪಾರ್ಟ್ ಮೆಂಟ್‍ಗಳ ಸೌಲಭ್ಯ ನೀಡುವುದರಲ್ಲಿ ವಂಚನೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ, ಬಿಡಿಎ ಜನರಿಗೆ ಅನುಕೂಲ ಮಾಡಿಕೊಡಲು ಬದ್ಧನಾಗಿದ್ದೇನೆ ಎಂದು ಅಪಾರ್ಟ್ ಮೆಂಟ್ ನೀರಿನ ಪೂರೈಕೆ ಬಗ್ಗೆ ಡಿಸಿಎಂ ಗರಂ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *