ಬೆಂಗಳೂರು: ಅಂದು ಮೆರೆದಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಮರೆಯಾಗ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಇದೀಗ ರಾಜಕೀಯ ವಲಯದಲ್ಲಿ ಎದ್ದಿದೆ.
ಹೌದು, ಸೇಡಿನ ವಿಚಾರವಾಗಿ ಕರ್ನಾಟಕದ ಕಾಂಗ್ರೆಸ್ ಎರಡು ಬಣ ಸೃಷ್ಟಿಯಾಗಿದೆ. ಈ ಮೂಲಕ ಸಿದ್ದರಾಮಯ್ಯ ವಿರುದ್ಧ ಕಾಂಗ್ರೆಸ್ನಲ್ಲಿ ಗಟ್ಟಿಯಾಗುತಿದ್ಯಾ ಒಂದು ಬಣ? ಅವರು ಪರದಾಡಿದ ಪಾಡು, ಈಗ ಹಳೆಯ ಸೇಡು ಹೀಗಾಗಿ `ಕೈ’ಗೆ `ಕೈ’ಯೇ ಶತ್ರುವಾಗ್ತಿದೆಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿಕೆಶಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗಿಬಿದ್ದಿದ್ದಾರಂತೆ. ಈ ಹಿಂದೆ ಪರಮೇಶ್ವರ್ ಸೋಲು, ಡಿಸಿಎಂ ಸ್ಥಾನದ ವಂಚಿಸಿದ್ದಕ್ಕೆ ಸೇಡಾ? ಡಿಕೆಶಿ ಅವರನ್ನ ಒಂದು ವರ್ಷ ದೂರ ಇಟ್ಟಿದ್ದಕ್ಕೆ ಸೇಡು ತೀರಿಸಿಕೊಳ್ತಿದ್ದಾರಾ ಎಂಬಂತಹ ಹಲವಾರು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.
ಸೇಡುಗಳೇನು?
2013ರಲ್ಲಿ ಕೊರಟಗೆರೆಯಲ್ಲಿ ಪರಮೇಶ್ವರ್ ಸೋತಿದ್ದು, ಪರಂ ಸೋಲಿಗೆ ಸಿದ್ದರಾಮಯ್ಯ ಅವರೇ ಕಾರಣ ಎನ್ನಲಾಗುತ್ತಿತ್ತು. ಇನ್ನು ಪರಿಷತ್ ಸದಸ್ಯರನ್ನಾಗಿ ಮಾಡಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರಿಗೆ ಸತಾಯಿಸಿ ಬಳಿಕ ಡಿಸಿಎಂ ಸ್ಥಾನ ಕೊಡಲು ನಿರಾಕರಿಸಿದ್ದರು ಎಂಬ ಆರೋಪವನ್ನೂ ಹೊರಿಸಲಾಗಿತ್ತು. ಈ ಸೇಡಿನಿಂದಾಗಿ ಪರಂ ಅವರಿಗೆ ಅತೀವ ನೋವುಂಟಾಗಿತ್ತು ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಸಚಿವ ಡಿಕೆಶಿಯನ್ನು ಸಿದ್ದರಾಮಯ್ಯ ಅವರು ಒಂದು ವರ್ಷ ದೂರ ಇಟ್ಟಿದ್ದು, ಕ್ಯಾಬಿನೆಟ್ಗೆ ಸೇರಿಸಿಕೊಂಡಿರಲಿಲ್ಲ. ಈ ನಿರ್ಧಾರ ಸಿದ್ದರಾಮಯ್ಯ ಅವರೇ ಮಾಡಿದ್ದು ಎಂದು ಆರೋಪಿಸಲಾಗಿದ್ದು, ಈಗ ಡಿಕೆಶಿ ಇದೇ ಘಟನೆಯನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದಾರೆ ಎನ್ನಲಾಗಿದೆ.