ದಕ್ಷಿಣ ಕೊರಿಯಾ ಕಂಪನಿ ಜೊತೆ ಡಾ. ಅಶ್ವಥ್ ನಾರಾಯಣ ಮಾತುಕತೆ

Public TV
1 Min Read

ಬೆಂಗಳೂರು: ದಕ್ಷಿಣ ಕೊರಿಯಾದ ಹೂಡಿಕೆ ಕಂಪನಿ ನಿಯೋಪ್ಲಕ್ಸ್ (Neoplux)ನಿಯೋಗದ ಜೊತೆ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗುರುವಾರ ಬೆಳಗ್ಗೆ ಮಾತುಕತೆ ನಡೆಸಿದರು.

ಭಾರತ ಹಾಗೂ ದಕ್ಷಿಣ ಕೊರಿಯಾ ನಡುವಿನ ಸಹಯೋಗಕ್ಕೆ ವೇದಿಕೆ ಕಲ್ಪಿಸುವ ಟಿಕೆಎನ್ ಅಡ್ವೈಸರ್ಸ್ ಹಾಗೂ ಸಿಟಿ ಪ್ರೆನ್ಯೂರ್ ಸಂಸ್ಥೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಸ್ಟಾರ್ಟ್ ಅಪ್ ವಲಯದಲ್ಲಿ ಹೊಸ ಅವಕಾಶ ಹಾಗೂ ಸಹಯೋಗದ ಸಾಧ್ಯತೆ ಕುರಿತು ನಿಯೋಪ್ಲಕ್ಸ್ ನ ಸಿಇಓ ಸ್ಯಾಂಗ್ ಹಾ ಲೀ ನೇತೃತ್ವದ ತಂಡದ ಜೊತೆಗೆ ಮಾತುಕತೆ ನಡೆಸಲಾಗಿದೆ ಎಂದು ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 8 ಸ್ಟಾರ್ಟ್ ಅಪ್‍ಗಳ ಪೈಕಿ ಐದನ್ನು ಬೆಂಗಳೂರಿನಲ್ಲೇ ಸ್ಥಾಪಿಸುವ ಬಗ್ಗೆ ಚರ್ಚೆ ನಡೆಸಿದ ನಿಯೋಪ್ಲಕ್ಸ್, ನಗರದಲ್ಲೇ ಸಂಸ್ಥೆಯ ಕೇಂದ್ರ ಕಚೇರಿ ತೆರೆಯುವ ಇಂಗಿತವನ್ನೂ ವ್ಯಕ್ತಪಡಿಸಿದೆ. ಯುವ ಉದ್ಯಮಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಸಿಟಿಪ್ರೆನ್ಯೂರ್ಸ್, ಮುಂದಿನ ಆಗಸ್ಟ್ ನಲ್ಲಿ ಬೆಂಗಳೂರಿನಲ್ಲಿ ಸಮಾವೇಶ ಆಯೋಜಿಸುವ ಆಶಯ ವ್ಯಕ್ತಪಡಿಸಿದೆ.

ಈ ಸಮಾವೇಶದಲ್ಲಿ 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಂಸ್ಥೆಯ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದರು. ನವೋದ್ಯಮಿಗಳಿಗೆ ಹೂಡಿಕೆದಾರರು, ಸರ್ಕಾರಿ ಅಧಿಕಾರಿಗಳು, ಖಾಸಗಿ ವಲಯದ ದಿಗ್ಗಜರೊಂದಿಗೆ ಸಂಪರ್ಕ ಕಲ್ಪಿಸಿ ಅಗತ್ಯ ನೆರವು ಒದಗಿಸುವ ಸಿಟಿಪ್ರೆನ್ಯೂರ್ಸ್, ವಿಶ್ವಸಂಸ್ಥೆಯ ಅರ್ಬನ್ ಇನ್ನೋವೇಶನ್ ಚಾಲೆಂಜ್‍ನಲ್ಲಿ ಭಾಗಿಯಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *