ಅರೆ ಬೆತ್ತಲೆಯಾಗಿ ಬೇವಿನ ಸೀರೆ ಹರಕೆ – ಕೋಣದ ಬಲಿ ತಡೆಯಲು ಅಧಿಕಾರಿಗಳ ಜಾಗರಣೆ

Public TV
1 Min Read

ದಾವಣಗೆರೆ: ಎರಡು ವರ್ಷಗಳಿಗೊಮ್ಮೆ ನಡೆಯುವ ದಾವಣಗೆರೆ ನಗರ ದೇವತೆ ದುಗ್ಗಮ್ಮನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಭಕ್ತರು ದೇವಿಯ ಕೃಪೆಗೆ ಪಾತ್ರರಾಗಲು ಹರಕೆ ತೀರುಸುತ್ತಿದ್ದಾರೆ. ಈ ನಡುವೆ ಮಕ್ಕಳು ಹಾಗೂ ಮಹಿಳೆಯರಿಗೆ ಅರೆ ಬೆತ್ತಲೆಯಾಗಿ ಬೇವಿನ ಸೀರೆ ಉಟ್ಟು ದೇವಸ್ಥಾನ ಪ್ರದಕ್ಷಿಣೆ ಹಾಕುತ್ತಿದ್ದರು. ಈ ಆಚರಣೆಯನ್ನು ಕಂಡು ಡಿಸಿ ಮಹಾಂತೇಶ್ ಬೀಳಗಿ ಹಾಗೂ ಎಸ್‍ಪಿ ಹನುಮಂತರಾಯ ಇದನ್ನು ಪಾಲಿಸುತ್ತಿದ್ದವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ದಾವಣಗೆರೆ ನಗರದ ದೇವತೆ ದುಗ್ಗಮ್ಮ ದೇವಸ್ಥಾನದ ರಸ್ತೆಯಲ್ಲಿ ಮಕ್ಕಳನ್ನು ಬೆತ್ತಲೆ ಮಾಡಿ ನೀರು ಹಾಕಿ ಬೇವಿನ ಸೀರೆ ಉಡಿಸುತ್ತಿದ್ದ ಪೋಷಕರಿಗೆ ಅಧಿಕಾರಿಗಳು ಕ್ಲಾಸ್ ತೆಗೆದುಕೊಂಡಿದ್ದಲ್ಲದೆ, ಈ ರೀತಿ ಮೂಡ ನಂಬಿಕೆಯಿಂದ ಮಕ್ಕಳಿಗೆ ಹಿಂಸೆ ನೀಡಬಾರದು ಎಂದು ತಿಳಿಹೇಳಿದ್ದಾರೆ. ಅಲ್ಲದೆ ಎಸ್‍ಪಿ ಹನುಮಂತರಾಯ ಕರ್ತವ್ಯದಲ್ಲಿ ಇದ್ದ ಪೋಲೀಸ್ ಸಿಬ್ಬಂದಿಗೆ ಕೂಡ ತರಾಟೆಗೆ ತೆಗೆದುಕೊಂಡರು.

ಇತ್ತ ದೇವರಿಗೆ ಕೋಣದ ಬಲಿ ತಡೆಯಲು ಡಿಸಿ, ಎಸ್‍ಪಿ ಸೇರಿದಂತೆ ಅಧಿಕಾರಿಗಳು ದೇವಸ್ಥಾನದ ಎದುರು ಇಡೀ ರಾತ್ರಿ ಜಾಗರಣೆ ಮಾಡಿದರು. ಸರ್ಕಾರದ ಆದೇಶದಂತೆ ದೇವಿಗೆ ಬಿಟ್ಟ ಕೋಣದ ರಕ್ತ ಸಿರಿಂಜ್‍ನಿಂದ ತೆಗೆದು ದೇವಿಗೆ ಅರ್ಪಣೆ ಮಾಡಿದ್ದಲ್ಲದೆ, ಧಾನ್ಯದಲ್ಲಿ ಬೆರಸಿ ಇಡೀ ನಗರಕ್ಕೆ ಚರಕ ಚಲ್ಲಿದರು. ಅಲ್ಲದೆ ದುರ್ಗಾಂಬಿಕಾ ದೇವಿ ಜಾತ್ರೆಯ ಪ್ರಯುಕ್ತ ದೇವಿಗೆ ಕೋಣ ಬಲಿ ಕೊಡುವುದು ಇಲ್ಲಿಯ ಸಂಪ್ರದಾಯವಾಗಿದ್ದು, ಈ ಬಾರಿ ಸಂಪೂರ್ಣ ನಿಷೇಧ ಮಾಡಿದ್ದಲ್ಲದೆ ದೇವಸ್ಥಾನ ಧರ್ಮದರ್ಶಿ ಸಮಿತಿಯ ಸಹಕಾರದೊಂದಿಗೆ ಜಿಲ್ಲಾಡಳಿತ ಕೋಣ ಬಲಿ ತಡೆಯೊಡ್ಡಿದೆ.

ದೇವಸ್ಥಾನ ಸುತ್ತಲು 100 ಮೀಟರ್ ಪ್ರದೇಶದಲ್ಲಿ ಯಾವುದೇ ಪ್ರಾಣಿ ಬಲಿ ನಡೆಯದಂತೆ ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದೆ. ದೇವಸ್ಥಾನದ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆ ನಿಯೋಜಿಸಲಾಗಿದೆ. ಅಲ್ಲದೆ ರಾತ್ರಿಯಿಡಿ ಭಕ್ತರು ದೀಡ್ ನಮಸ್ಕಾರ, ಉರುಳುಸೇವೆ ಮಾಡಿ ದೇವಿಗೆ ಹರಕೆ ತೀರಿಸಿದರು.

Share This Article
Leave a Comment

Leave a Reply

Your email address will not be published. Required fields are marked *