ದಾವಣಗೆರೆ: ಜಿಲ್ಲೆಯಲ್ಲಿ ನಡೆದ ಯುವ ಕಾಂಗ್ರೆಸ್ (Congress) ಪದಗ್ರಹಣ ಕಾರ್ಯಕ್ರಮದಲ್ಲಿ `ಕೈ’ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ.
ಯೂತ್ ಕಾಂಗ್ರೆಸ್ನ ರಾಜ್ಯಾಧ್ಯಕ್ಷ ಹೆಚ್.ಎಸ್ ಮಂಜುನಾಥ್ ಗೌಡ, ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಮುಂದೆಯೇ ಬಣ ರಾಜಕೀಯ ಹಿನ್ನೆಲೆ `ಕೈ’ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಕಾರ್ಯಕ್ರಮದ ವೇಳೆ ಎರಡು ಬಣಗಳ ಮಧ್ಯೆ ವಾಗ್ಯುದ್ಧ ಮತ್ತು ತಳ್ಳಾಟ ನಡೆಯಿತು.
ನಿಕಟಪೂರ್ವ ಅಧ್ಯಕ್ಷರ ಪದಾಧಿಕಾರಿಗಳು ಮತ್ತು ನೂತನ ಅಧ್ಯಕ್ಷರ ಬಣಗಳ ನಡುವೆ ಭಿನ್ನಮತ ಸ್ಫೋಟಗೊಂಡು, ಪದಗ್ರಹಣ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಮಾಡಿಲ್ಲ ಎಂದು ಒಂದು ಬಣ ಆಕ್ರೋಶ ಹೊರಹಾಕಿದರೆ, ಇನ್ನೊಂದು ಬಣ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ಹಿಂದಿನ ಪದಾಧಿಕಾರಿಗಳು, ನಿಕಟಪೂರ್ವ ಅಧ್ಯಕ್ಷರಿಗೆ ಆಹ್ವಾನ ನೀಡಿಲ್ಲ, ಹಾಲಿ ಜಿಲ್ಲಾಧ್ಯಕ್ಷ ವರುಣ್ ಬೆಣ್ಣೆಹಳ್ಳಿ, ನಿಕಟಪೂರ್ವ ಅಧ್ಯಕ್ಷ ನಿಖಿಲ್ ಕೊಂಡಜ್ಜಿಯವರನ್ನು ಆಹ್ವಾನ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ನಿಕಟಪೂರ್ವ ಜಿಲ್ಲಾಧ್ಯಕ್ಷರಿಂದ ಅಧಿಕಾರ ಹಸ್ತಾಂತರ ಮಾಡಬೇಕು, ಆದರೆ ಅಧಿಕೃತವಾಗಿ ಆಹ್ವಾನ ಮಾಡದೆ ಕಡೆಗಣಿಸಿದ್ದಾರೆ. ಕೈ,ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆಯನ್ನು ಕೊನೆಗೂ ಹಿರಿಯ ಕಾಂಗ್ರೆಸ್ ಮುಖಂಡರು ಮಧ್ಯ ಪ್ರವೇಶ ಮಾಡಿ, ಪರಿಸ್ಥಿತಿಯನ್ನು ಸರಿಪಡಿಸಿದರು.