ಅದ್ಧೂರಿಯಾಗಿ ಆರಂಭಗೊಂಡ ಯುವ ದಸರಾ

Public TV
2 Min Read

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಅಕ್ಷರಶಃ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ತೋರ್ಪಡಿಸುತ್ತಿದೆ. ದಸರಾ ಆರಂಭವಾಗಿ ಮೂರು ದಿನಗಳು ಕಳೆದಿದ್ದು, ಪ್ರತಿದಿನ ಒಂದೊಂದು ವಿಭಿನ್ನ ಕಾರ್ಯಕ್ರಮದ ಮೂಲಕ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ.

ಮೈಸೂರಿನ ಮಹಾರಾಜ ಮೈದಾನದಲ್ಲಿ ಶುಕ್ರವಾರ ರಾತ್ರಿ ಆರಂಭಗೊಂಡ ಯುವ ದಸರಾ ಕಾರ್ಯಕ್ರಮ ಅಕ್ಷರಶಃ ಮನರಂಜನೆಯೆ ಭೋಜನವನ್ನೇ ಉಣಬಡಿಸಿದೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ವೇದಿಕೆಯ ಮೇಲೆ ಬಂದ ಜಾನಪದ, ಭಾವಗೀತೆ ಭಕ್ತಿಗೀತೆಗಳಲ್ಲಿ ಭಕ್ತಹೂರಣವೇ ತುಂಬಿತ್ತು. ಹಾಡನ್ನು ಕೇಳಿ ಸುಸ್ತಾಗಿದ್ದ ಯುವಸ್ತೋಮವನ್ನು ‘ತರ ತರ ಹಿಡಿಸಿದೆ ಮನಸಿಗೆ ನೀನು’ ಮತ್ತು ‘ಅಕ್ಕ ನಿನ್ ಮಗಳು ನಂಗ್ ಚಿಕ್ಕೋಳ್ ಆಗಲ್ವಾ’ ಎಂದು ಎಂಟ್ರಿಕೊಟ್ಟ ನಟಿ ರಾಗಿಣಿ ರಂಜಿಸಿದ್ದಾರೆ. ನಟಿ ಸಾನ್ವಿ ಪಡ್ಡೆ ಹೈಕ್ಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಇದಾದ ಬಳಿಕ ಕಾಲೇಜು ವಿದ್ಯಾರ್ಥಿಗಳ ತಂಡ ಮಾಡಿದ ಚಾಮುಂಡೇಶ್ವರಿ ವೃತ್ತಾಂದ ಮತ್ತು ಶಿವತಾಂಡವದ ನೃತ್ಯ ನೆರೆದಿದ್ದವರನ್ನು ಭಕ್ತಿಯ ಪರಕಾಷ್ಠೆಯಲ್ಲಿ ತೇಲುವಂತೆ ಮಾಡಿತು.

ಸಿಎಂ ಕುಮಾರಸ್ವಾಮಿ ತಮ್ಮ ಕ್ಯಾಬಿನೆಟ್ ಮಂತ್ರಿಗಳೊಂದಿಗೆ ಓಪನ್ ಬಸ್ಸಿನಲ್ಲಿ ಮೈಸೂರಿನ ವಿದ್ಯುತ್ ಅಲಂಕಾರವನ್ನು ವೀಕ್ಷಣೆ ಮಾಡಿ ಯುವ ದಸರಾ ವೇದಿಕೆಗೆ ಬಂದಿದ್ದರು. ಕಾರ್ಯಕ್ರಮವನ್ನು ಸುಧಾಮೂರ್ತಿ ಅವರಿಗೆ ಹೇಳಿ ಉದ್ಘಾಟನೆ ಮಾಡಿಸಿದ್ದಾರೆ. ನಂತರ ಜನರ ಮಧ್ಯ ಭಾಗದಲ್ಲಿ ಹಾಕಿದ್ದ ಚೇರ್ ನಲ್ಲಿ ಸುಧಾಮೂರ್ತಿ ಅವರೊಂದಿಗೆ ಕಾರ್ಯಕ್ರಮ ವೀಕ್ಷಣೆ ಮಾಡಲು ಕುಳಿತ್ರು. ಇದಾದ ಬಳಿಕ ಯುವ ದಸರಾ ವೇದಿಕೆಯಲ್ಲಿ ಸಂಗೀತದ ಮಿಂಚೆ ಪಸರಿಸಿದಂತೆ ಆಗಿತ್ತು.

ಮೊದಲಿಗೆ ವಿಜಯ್ ಪ್ರಕಾಶ್ ಕಂಠ ಸಿರಿಯಲ್ಲಿ ಬಂದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಗೆ ಜನರು ಫುಲ್ ಫೀದಾ ಆಗಿದ್ದರು. ಮೊಬೈಲ್ ನಲ್ಲಿ ಟಾರ್ಚ್ ಹಾಕಿ ವಿಜಯ್ ಪ್ರಕಾಶ್ ಕಡೆ ಹಿಡಿದು ತಲೆದೂಗಿಸಿದ್ದಾರೆ. ಬೆಳಗ್ಗೆ ಎದ್ದು ಯಾರಾ ಮುಖ ನಾನು ನೋಡಿದೆ ಗೀತೆಗೆ ಯುವಕರು ದನಿಗೂಡಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ನಂತರ ಸಿಎಂ ಕುಮಾರಸ್ವಾಮಿ ಅವರು ವಿಜಯ್ ಪ್ರಕಾಶ್ ಗೆ ಒಳಿತು ಮಾಡು ಮನುಸ ಗೀತೆ ಹಾಡುವಂತೆ ಮನವಿ ಮಾಡಿದ್ದು, ಅದರಂತೆ ವಿಜಯ್ ಪ್ರಕಾಶ್ ಒಳಿತು ಮಾಡು ಮನಸು ಗೀತೆ ಹಾಡೋಕೆ ಪ್ರಾರಂಭ ಮಾಡಿದ್ರು. ಈ ವೇಳೆ ಸಿಎಂ ಕುಮಾರಸ್ವಾಮಿ ವಿಜಯ್ ಪ್ರಕಾಶ್ ಕಂಠದಲ್ಲಿ ಬಂದ ಒಳಿತು ಮಾಡು ಮನಸು ಗೀತೆ ಕೇಳಿ ಕಣ್ಣೀರು ಹಾಕಿದ್ದಾರೆ.

ದಸರೆಯ ಪ್ರಮುಖ ಆಕರ್ಷಣೆಯಾದ ಯುವ ದಸರಾಗೆ ಮೊದಲ ದಿನವೇ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಇನ್ನೂ ಐದು ದಿನಗಳ ಕಾಲ ಯುವ ದಸರಾ ಮೂಲಕ ಯುವಸ್ತೋಮಕ್ಕೆ ಸಖತ್ ಮಜಾ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *