ಚಿನ್ನದ ನಾಡಿನಲ್ಲಿ ರಾಮಾಯಣ, ಮಹಾಭಾರತ, ಮಹಾ ವಿಷ್ಣುವಿನ ದಶಾವತಾರದ ಬೊಂಬೆಗಳು ಜೋಡಣೆ

Public TV
1 Min Read

ಕೋಲಾರ: ದಸರಾ ಹಬ್ಬದ ಅಂಗವಾಗಿ ಕೋಲಾರದ ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ರಾಮಾಯಣ ಹಾಗೂ ಮಹಾಭಾರತದ ಬೊಂಬೆಗಳನ್ನು ಜೋಡಿಸಲಾಗಿದೆ. ಅಲ್ಲದೇ ಅನಂತಪದ್ಮನಾಭ ಸ್ವಾಮಿಯ ವೈಭವ ಹಾಗೂ ಮಹಾ ವಿಷ್ಣುವಿನ ದಶಾವತಾರ ಕೂಡ ನೋಡಬಹುದಾಗಿದೆ.

ಕೋಟಿಲಿಂಗೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಪ್ರಯುಕ್ತ ಇಲ್ಲಿನ ಭಕ್ತಿ ಮಂದಿರದಲ್ಲಿ ತಾಯಿ ಚಾಮುಂಡೇಶ್ವರಿ ಸಹಿತ ನೂರಾರು ವಿವಿಧ ರೀತಿಯ ನವರಾತ್ರಿ ಬೊಂಬೆಗಳನ್ನಿಟ್ಟು ನಿತ್ಯ ಅದ್ಧೂರಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶೇಷವಾಗಿ ಕೃಷ್ಣನ ಲೀಲೆಗಳನ್ನು ತೋರಿಸುವ ಬೊಂಬೆಗಳು, ವಿಷ್ಣುವಿನ ದಶಾವತಾರದ ಬೊಂಬೆಗಳು, ಮದುವೆ ಸಂಪ್ರದಾಯವನ್ನು ಬಿಂಬಿಸುವ ಬೊಂಬೆಗಳು, ರಥೋತ್ಸವಗಳು, ಚಾಮುಂಡೇಶ್ವರಿ ದೇವಿಯ ವಿವಿಧ ಅವತಾರಗಳನ್ನು ಇಲ್ಲಿ ಕಾಣಬಹುದು.

ಸ್ವತಂತ್ರ್ಯ ಹೋರಾಟಗಾರರಾದ ಚಂದ್ರಶೇಖರ್ ಆಜಾದ್, ಸಾವರ್ಕರ್ ರಂತ ಸ್ವತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರ ಬೊಂಬೆಗಳನ್ನು ಇಲ್ಲಿ ಕಾಣಬಹುದು. ಕಳೆದ 20 ವರ್ಷಗಳಿಂದ ಇಲ್ಲಿ ನವರಾತ್ರಿ ಹಬ್ಬವನ್ನು ವಿಶಿಷ್ಟವಾಗಿ ಹಾಗೂ ಅದ್ಧೂರಿಯಾಗಿ ಆಚರಣೆ ಮಾಡುತ್ತಾ ಬಂದಿದ್ದು, ಪ್ರತಿನಿತ್ಯ 101 ಮಹಿಳೆಯರಿಂದ ಶಕ್ತಿ ದೇವಿಗೆ ಕುಂಕುಮಾರ್ಚನೆ ಹಾಗೂ ಹೋಮಗಳನ್ನು ಮಾಡಲಾಗುತ್ತದೆ.


ಜಿಲ್ಲೆಯ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಾಗಿರುವ ಕೋಟಿಲಿಂಗೇಶ್ವರದಲ್ಲಿ 9 ದಿನಗಳ ಕಾಲ ನವರಾತ್ರಿ ಬೊಂಬೆಗಳನ್ನು ಇಡಲಾಗುತ್ತದೆ. ಪ್ರವಾಸಿಗರು ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ನೂರಾರು ಮಹಿಳೆಯರು ಪ್ರತಿನಿತ್ಯ ಕುಂಕುಮಾರ್ಚನೆ, ಹೋಮ, ದೀಪಾಲಂಕಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಜೊತೆಗೆ ಪ್ರತಿನಿತ್ಯ ಚಾಮುಂಡೇಶ್ವರಿ ದೇವಿಯ ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ನಡೆಸಲಾಗುತ್ತದೆ.

ಹತ್ತಾರು ಮಹಿಳೆಯರು, ಮಕ್ಕಳು ಪೂಜೆಯಲ್ಲಿ ಭಾಗವಹಿಸಿ ತಾಯಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ. ವಿಶೇಷವಾಗಿ ಸರಸ್ವತಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿನ ನೂರಾರು ಮಕ್ಕಳಿಗೆ ಪುಸ್ತಕ ಹಾಗೂ ಪೆನ್‍ಗಳನ್ನು ಇಲ್ಲಿ ವಿತರಣೆ ಮಾಡುವ ಮೂಲಕ ಮಕ್ಕಳಿಗೆ ಸರಸ್ವತಿಯ ಅನುಗ್ರಹ ಕರುಣಿಸಲಿ ಎಂದು ಪೂಜೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯಿಂದ ಇಲ್ಲಿಗೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತದೆ.

ನವರಾತ್ರಿ ಆಚರಣೆಯನ್ನು ಕೇವಲ ಮೈಸೂರು ಭಾಗಕ್ಕಷ್ಟೇ ಅಲ್ಲ ಹಳೆ ಮದ್ರಾಸು ಭಾಗದಲ್ಲೂ ದಸರಾ ವೈಭವ ಕಳೆ ಗಟ್ಟುತ್ತದೆ. ಚಿನ್ನದ ನಾಡಲ್ಲೂ ದಸರಾ ಉತ್ಸಾಹ, ಆಸಕ್ತಿ ತುಂಬಿದ್ದು ಹಬ್ಬಕ್ಕೆ ಮತ್ತಷ್ಟು ಮೆರುಗು ಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *