ಗಡಿನಾಡ ಕನ್ನಡದ ಕಂದಮ್ಮಗಳಿಗೆ ಹೀರೋ ಆದ ದರ್ಶನ್!

Public TV
1 Min Read

ಬೆಂಗಳೂರು: ದರ್ಶನ್ ಎಂಬ ಹೆಸರು ಕೇಳಿದರೆ ಸಾಕು ಅಭಿಮಾನಿಗಳ ಮೈ ರೋಮಾಂಚನಗೊಳ್ಳುತ್ತದೆ. ದರ್ಶನ್ ಕೇವಲ ಸಿನಿಮಾದಲ್ಲಿ ಹೀರೋ ಆಗದೇ ನಿಜ ಜೀವನದಲ್ಲೂ ಮತ್ತೊಮ್ಮೆ ಹೀರೋ ಆಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ನ ಹೋಟೆಲ್‍ನಲ್ಲಿ ಕನ್ನಡ ಚಾನೆಲ್ ಬರದಕ್ಕೆ ದರ್ಶನ್ ಗರಂ ಆಗಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಆದರೆ ಈಗ ದೂರದ ಗಡಿಯಲ್ಲಿರುವ ಕನ್ನಡ ಶಾಲೆಯ ಮಕ್ಕಳಿಗೆ ದರ್ಶನ್ ಸಹಾಯ ಹಸ್ತವನ್ನು ನೀಡಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ ಒಂದು ಕನ್ನಡ ಶಾಲೆ ಇದೆ. ಗಡಿಗ್ರಾಮ ಆಗಿದ್ದರಿಂದ ಈ ಶಾಲೆಯ ಅಭಿವೃದ್ಧಿಗೆ ಎರಡು ರಾಜ್ಯ ಸರ್ಕಾರಗಳು ಮನಸ್ಸು ಮಾಡಿಲ್ಲ. ಅದು ಹೇಗೋ ದರ್ಶನ್ ಅವರಿಗೆ ಶಾಲೆ ಕಂಡಿದೆ. ಈ ಶಾಲೆಯ ಬಗ್ಗೆ ಮಾಹಿತಿ ಪಡೆದ ದರ್ಶನ್ ಅಲ್ಲಿಯ ಶಿಕ್ಷಕರಾದ ಶರಣಪ್ಪ ಪುಲರಿ ಎಂಬವರನ್ನು ಕರೆಸಿಕೊಂಡು 127 ಮಕ್ಕಳ ಡಿಜಿಟಲ್ ಶಿಕ್ಷಣಕ್ಕಾಗಿ ಒಟ್ಟು 30 ಟ್ಯಾಬ್‍ಗಳನ್ನ ಕೊಡಿಸಿದ್ದಾರೆ.

ಇತ್ತೀಚೆಗೆ ರಾಜ್ಯದಲ್ಲಿ ಮಕ್ಕಳು ಇಲ್ಲ ಎಂಬ ಕಾರಣಕ್ಕೆ ಕನ್ನಡ ಶಾಲೆಗಳು ಮುಚ್ಚುತ್ತಿವೆ. ದೂರದ ಗಡಿಯಲ್ಲಿರುವ ಕನ್ನಡದ ಶಾಲೆಯ ಡಿಜಿಟಲ್ ಶಿಕ್ಷಣಕ್ಕಾಗಿ ಟ್ಯಾಬ್‍ಗಳನ್ನು ನೀಡುವ ಕನ್ನಡದ ಕಂದಮ್ಮಗಳಿಗೆ ರಿಯಲ್ ಹೀರೋ ಆಗಿದ್ದಾರೆ. ಸರ್ಕಾರಿ ಕನ್ನಡ ಮಾಧ್ಯಮಗಳ ಶಾಲೆ ಬಗ್ಗೆ ನಮ್ಮ ಸ್ಯಾಂಡಲ್‍ವುಡ್‍ನ ಅನೇಕ ನಟರು ಮುತುವರ್ಜಿ ವಹಿಸಿರುವುದನ್ನ ನಾವಿಲ್ಲಿ ನೆನಪಿಸಿಕೊಳ್ಳಬೇಕು.

ಕಿಚ್ಚ ಸುದೀಪ್ ಹಾಗೂ ಚೇತನ್ ಸರ್ಕಾರಿ ಕನ್ನಡ ಮಾಧ್ಯಮಗಳನ್ನ ದತ್ತು ತೆಗೆದುಕೊಂಡು, ತಮ್ಮ ಕನ್ನಡ ಸೇವೆಯನ್ನ ಮಾಡುತ್ತಿದ್ದಾರೆ. ಕೆಲ ನಟರು ಯಾರಿಗೂ ಗೊತ್ತಾಗದಂತೆ ಕನ್ನಡ ಶಾಲೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡ ನಟರು ಒಂದಿಲ್ಲೊಂದು ಸಮಾಜಸೇವೆಯಿಂದ ಅಭಿಮಾನಿಗಳಲ್ಲಿ ಸ್ಫೂರ್ತಿಯ ಸೆಲೆಯಾಗುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *