ಕೊರತೆ ಸೃಷ್ಟಿ ಮಾಡಿ ದುಬಾರಿ ಬೆಲೆಗೆ ಡಿಎಪಿ ಗೊಬ್ಬರ ಮಾರಾಟ

Public TV
1 Min Read

ಯಾದಗಿರಿ: ಜಿಲ್ಲೆಯಲ್ಲಿ ಗೊಬ್ಬರದ ಏಜೆನ್ಸಿಗಳು ಸರ್ಕಾರ ನಿಗದಿ ಮಾಡಿದ ದರಕ್ಕಿಂತ ದುಬಾರಿ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿ, ಅನ್ನದಾತರಿಗೆ ಮೋಸ ಮಾಡುತ್ತಿದ್ದ ದಂಧೆ ಬಯಲಾಗಿದೆ. ಕೃತಕ ಅಭಾವ ಸೃಷ್ಟಿ ಮಾಡಿ ಡಿಎಪಿ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದರ ಜೊತೆಗೆ ನಕಲಿ ಬಿಲ್ ಗಳನ್ನು ನೀಡಿ ರೈತರಿಗೆ ವಂಚನೆ ಮಾಡುತ್ತಿದ್ದ ಕೃತ್ಯ ಬೆಳಕಿಗೆ ಬಂದಿದೆ.

ಒಂದು ಕಡೆ ಕೃಷಿ ಇಲಾಖೆ ಅಧಿಕಾರಿಗಳು ಡಿಎಪಿ ಗೊಬ್ಬರ ಕೊರತೆಯಿಲ್ಲ, ಯಾದಗಿರಿ ಜಿಲ್ಲೆಗೆ 4 ಸಾವಿರ ಟನ್ ಡಿಎಪಿ ಗೊಬ್ಬರ ಪೂರೈಕೆಯಾಗಿದೆ. ಸದ್ಯಕ್ಕೆ ಯಾವುದೇ ರಸಗೊಬ್ಬರ ಅಭಾವ ಇಲ್ಲ ಎನ್ನುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಡಿಎಪಿ ಗೊಬ್ಬರದ ಸ್ಟಾಕ್ ಇಲ್ಲವೆಂದು ಕೃತಕ ಅಭಾವ ಸೃಷ್ಟಿ ಮಾಡಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಗದ್ದೆಯಲ್ಲಿ ನಾಟಿ ಕಾರ್ಯಾಗಾರ

ಕೇಂದ್ರ ಸರ್ಕಾರ ನಿಗದಿ ಮಾಡಿದಂತೆ ಪ್ರತಿ 50 ಕೆ.ಜಿ. ಡಿಎಪಿ ಗೊಬ್ಬರಕ್ಕೆ 1,200 ರೂ.ಗಳಂತೆ ಮಾರಾಟ ಮಾಡಬೇಕು. ಆದರೆ ಸರ್ಕಾರ ನಿಗದಿ ಮಾಡಿದ ದರಕ್ಕಿಂತ 300 ರೂ. ಹೆಚ್ಚಿನ ಹಣ ಪಡೆದು ಪ್ರತಿ 50 ಕೆ.ಜಿ. ರಸಗೊಬ್ಬರದ ಬ್ಯಾಗ್ ಗೆ 1,500 ರೂಪಾಯಿಗೆ ಮಾಲೀಕರು ಮಾರಾಟ ಮಾಡುತ್ತಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಇಂತಹ ದಂಧೆ ಬೆಳಕಿಗೆ ಬಂದಿದ್ದು, ತೋಟೆಂದ್ರ ಎಂಬ ಎಜೆನ್ಸಿ ಹೆಸರಿನಲ್ಲಿರುವ ಅಂಗಡಿಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿ ಮಾಡಿ, ದುಬಾರಿ ಬೆಲೆಗೆ ಗೊಬ್ಬರ ಮಾರಾಟ ಮಾಡಿ, ನಕಲಿ ಬಿಲ್ ನೀಡಿ ರೈತರಿಗೆ ಮೋಸ ಮಾಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *