ಜಮೀನಿಗೆ ನುಗ್ಗಿದ ಡ್ಯಾಂ ಹಿನ್ನೀರು- ರೈತರ ಬೆಳೆ ನೀರು ಪಾಲು

Public TV
1 Min Read

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ವಿಜಯಪುರದ ಆಲಮಟ್ಟಿ ಲಾಲಬಾಹ್ದೂರ ಶಾಸ್ತ್ರಿ ಜಲಾಶಯಕ್ಕೆ 2 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಅಧಿಕ ನೀರು ಹರಿದು ಬಂದ ಕಾರಣ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, 2 ಲಕ್ಷ ಕ್ಯೂಸೆಕ್ ನೀರನ್ನು ನಾರಾಯಣಪುರ ಬಸವ ಸಾಗರ ಜಲಾಶಯಕ್ಕೆ ಹೊರಬಿಡಲಾಗುತ್ತಿದೆ. ಇದರಿಂದ ನಾರಾಯಣಪುರ ಜಲಾಶಯದ ಹಿನ್ನೀರು ವಿಜಯಪುರ ಜಿಲ್ಲೆಯ ರೈತರ ಜಮೀನಿಗೆ ನುಗ್ಗಿದೆ. ಇದರಿಂದ ಅಪಾರ ಪ್ರಮಾಣದ ರೈತರ ಬೆಳೆ ನೀರು ಪಾಲಾಗಿದೆ.

ಜಿಲ್ಲೆಯ ಯಲಗೂರ, ಮುದೂರ, ಕಾಳಗಿ, ಬಳಬಟ್ಟಿ, ವಡವಡಗಿ, ಯಲ್ಲಮ್ಮನಬೂದಿಹಾಳ, ಮಸೂತಿ, ಕಾಶಿನಕುಂಟಿ, ಅರಳದಿನ್ನಿಯ ಗ್ರಾಮಗಳ ನದಿ ಪಕ್ಕದ ಜಮೀನಿಗೆ ಹಿನ್ನೀರು ನುಗ್ಗಿದೆ. ಜಮೀನಿನಲ್ಲಿ ಬಿತ್ತನೆ ಮಾಡಲಾಗಿದ್ದ ತೊಗರಿ, ಸಜ್ಜೆ, ಕಬ್ಬು ಬೆಳೆ ಸಂಪೂರ್ಣ ಹಾನಿಯಾಗಿದೆ.

ಮಳೆ ಇಲ್ಲದೆ ಕಂಗೆಟ್ಟಿದ್ದ ರೈತರು ಅಲ್ಪ ಸ್ವಲ್ಪ ಬೆಳೆದಿದ್ದ ಬೆಳೆ ಕೂಡ ನೀರು ಪಾಲಾಗಿರುವುದರಿಂದ ಕಂಗಾಲಾಗಿದ್ದಾರೆ. ಬೆಳೆ ಹಾನಿಯಾಗಿರುವ ಕಾರಣ ರೈತರು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *