ಟೀಂ ಇಂಡಿಯಾ ಗೆಲುವನ್ನು ಸಂಭ್ರಮಿಸಿದ್ದಕ್ಕೆ ದಲಿತ ಯುವಕನ ಹತ್ಯೆ

Public TV
1 Min Read

ಲಕ್ನೋ: ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದಕ್ಕೆ ಸಂಭ್ರಮಿಸುತ್ತಿದ್ದ ದಲಿತ ಯುವಕನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಪ್ರತಾಪಗಢ ರಾಮ್‍ಪುರ್ ಬೆಲಾ ಗ್ರಾಮದಲ್ಲಿ ನಡೆದಿದೆ.

ಪರಿಶಿಷ್ಟ ಜಾತಿಗೆ ಸೇರಿದ ಯುವಕ ವಿನಯ್ ಪ್ರಕಾಶ್ ಭಾನುವಾರ ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸುತ್ತಿದ್ದ. ಪಂದ್ಯದಲ್ಲಿ ಭಾರತ ಗೆದ್ದ ನಂತರ ಸಂಭ್ರಮ ವ್ಯಕ್ತಪಡಿಸಿ, ಕುಣಿದು ಕುಪ್ಪಳಿಸಿದ್ದಾನೆ. ಈ ಕುರಿತು ಇನ್ನೊಂದು ಸಮುದಾಯದೊಂದಿಗೆ ವಾದವನ್ನೂ ಮಾಡಿದ್ದಾನೆ. ಇದೇ ವಾದ ವಿಕೋಪಕ್ಕೆ ತಿರುಗಿ ಯುವಕ ವಾಸಿಸುತ್ತಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸೋಮವಾರ ಬೆಳಗ್ಗೆ ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿರುವ ವಿನಯ್ ಪ್ರಕಾಶ ಅವರ ಗುಡಿಸಲನ್ನು ನೋಡಿದಾಗ ಸುಟ್ಟು ಕರಕಲಾಗಿತ್ತು. ಹತ್ತಿರ ಬಂದು ನೋಡಿದಾಗ ಪ್ರಕಾಶ್ ದೇಹವೂ ಸಹ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿತ್ತು. ಇದನ್ನು ಕಂಡ ಗ್ರಾಮಸ್ಥರು, ಕೊಲೆ ಎಂದು ಶಂಕಿಸಿದ್ದಾರೆ. ರಾತ್ರಿ ಕ್ರಿಕೆಟ್ ಪಂದ್ಯ ವೀಕ್ಷಿಸುವ ವೇಳೆ ಭಾರತ ತಂಡದ ಗೆಲುವಿನ ನಂತರ ನಡೆದ ವಾದಕ್ಕೆ ಪ್ರತಿಯಾಗಿ ಈ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಎಸ್‍ಸಿ, ಎಸ್‍ಟಿ ಆಯೋಗ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಘಟನೆ ಕುರಿತು ತನಿಖೆ ನಡೆಸಿ ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಪ್ರತಾಪ್‍ಗಢ ಎಸ್‍ಪಿಗೆ ಮನವಿ ಮಾಡಿದ್ದು, ಘಟನೆ ಕುರಿತು ಆಯೋಗಕ್ಕೆ ವರದಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *