ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

Public TV
1 Min Read

ಬೆಂಗಳೂರು: ಪ್ರತಿನಿತ್ಯ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ವಿರೋಧಿಸಿ ಶುಕ್ರವಾರ ರಾಜ್ಯಾಧ್ಯಂತ ಪೆಟ್ರೋಲ್ ಬಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಂಕ್ ಮಾಲೀಕರು ಮುಂದಾಗಿದ್ದಾರೆ.

ಬಂದ್‍ಗೆ ಬೆಂಗಳೂರು ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಬೆಂಬಲ ನೀಡಿದ್ದು, ಶುಕ್ರವಾರ ದೇವನಹಳ್ಳಿ ಪೆಟ್ರೋಲ್ ಟ್ಯಾಂಕರ್ ಟರ್ಮಿನಲ್‍ನಿಂದ ತೈಲವನ್ನು ಖರೀದಿಸದೇ ಇರುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ, ದೈನಂದಿನ ದರ ಪರಿಷ್ಕರಣೆಯಿಂದ ಕೇವಲ ಕಂಪನಿಗಳಿಗೆ ಲಾಭವಾಗಲಿದೆ. ದಿನವೊಂದಕ್ಕೆ 4000 ಕೋಟಿ ರೂ. ಲಾಭವಾಗಲಿದೆ. ಡೀಲರ್‍ಗಳಿಂದ ಕಿತ್ತುಕೊಳ್ಳಲು ಇಂಥಾ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದರು.

ನಿಜವಾದ ಉಪಯೋಗ ನೀಡಬೇಕು ಅಂದರೆ ಬ್ಯಾರಲ್ ದರಕ್ಕೆ ತಕ್ಕಂತೆ ತೆರಿಗೆಯನ್ನು ಕಡಿಮೆ ಮಾಡಬೇಕು. ತೈಲ ಕಂಪೆನಿಗಳ ಈ ನಿರ್ಧಾರವನ್ನು ವಿರೋಧಿಸಿ ಶುಕ್ರವಾರ ಒಂದು ದಿನ ದೇವನಹಳ್ಳಿ ಟ್ಯಾಂಕರ್ ಟರ್ಮಿನಲ್ ನಿಂದ ನಾವು ಪೆಟ್ರೋಲ್, ಡೀಸೆಲ್ ಖರೀದಿ ಮಾಡುವುದಿಲ್ಲ. ಸ್ಟಾಕ್ ಇರುವ ಪೆಟ್ರೋಲ್ ಮಾತ್ರ ಮಾರಾಟ ಮಾಡುತ್ತೇವೆ ಹೊರತು ಖರೀದಿ ಮಾಡುವುದಿಲ್ಲ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳುತ್ತೇವೆ. ಶುಕ್ರವಾರ ಎಲ್ಲಿಯವರೆಗೂ ಸ್ಟಾಕ್ ಇರುತ್ತದೋ ಅಲ್ಲಿಯವರೆಗೆ ಮಾರಾಟ ಮಾಡುತ್ತೇವೆ. ಗ್ರಾಹಕರಿಗೆ ಯಾವುದೇ ಸಮಸ್ಯೆ ಮಾಡುವುದಿಲ್ಲ ಎಂದು ರವೀಂದ್ರ ಹೇಳಿದರು.

 

Share This Article
Leave a Comment

Leave a Reply

Your email address will not be published. Required fields are marked *