ಹಾಸನ: ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರೊಬ್ಬರು ಡಿಕೆಶಿ ಕಾಲಿಗೆ ಬೀಳಲು ಬಂದಾಗ ನಾನೇನು ಮಠದ ಸ್ವಾಮೀಜಿನಾ ಕಾಲಿಗೆ ಬೀಳುತ್ತಿದ್ದಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಗದರಿದ ಘಟನೆ ಹಾಸನದಲ್ಲಿ ನಡೆಯಿತು.
ಹಾಸನದ ಖಾಸಗಿ ಕಲ್ಯಾಣ ಮಂಟಪದಲ್ಲಿ ಡಿಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುತ್ತಿತ್ತು. ಈ ವೇಳೆ ಕಾರ್ಯಕರ್ತರು ಪದೇ ಪದೇ ಘೋಷಣೆ ಕೂಗುತ್ತ ಭಾಷಣ ಮಾಡಲು ಬಿಡದಂತೆ ಗಲಾಟೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಹಾರ ಹಾಕುವುದು, ಕಾಲಿಗೆ ಬೀಳುವುದು ಮಾಡುತ್ತಿದ್ದರು. ಈ ವೇಳೆ ಡಿಕೆಶಿ ಅಸಮಾಧಾನ ಹೊರಹಾಕಿದರು.
ನಂತರ ಮಾತನಾಡಿದ ಅವರು, ನೀವೆಲ್ಲಾ ಸೇರಿ ಸಭೆಯನ್ನು ಹಾಳು ಮಾಡುತ್ತಿದ್ದೀರಿ. ಯಾರಾದರೂ ಹೆಸರಿಡಿದು ಜೈಕಾರ ಹಾಕಿದರೆ ವಾಪಸ್ ಹೋಗುತ್ತೇನೆ. ಯಾರು ಕಿರುಚಬಾರದು, ಕಿರುಚಿದರೆ ಮೈಕ್ ಬಿಸಾಕುತ್ತೇನೆ. ಹೂವಿನ ಹಾರ ಇಟ್ಕೊಂಡಿರೋರೆಲ್ಲ ಆ ಕಡೆ ನಡೀರಿ. ನಿಮಗೆ ಶಕ್ತಿ ಇದ್ದರೇ ಬಿಜೆಪಿ, ಜೆಡಿಎಸ್ಯನ್ನು ಸೋಲಿಸಿ ಜೈಕಾರ ಹಾಕಿ ಎಂದು ಕಾರ್ಯಕರ್ತರಿಗೆ ಖಡಕ್ ಆಗಿ ಸೂಚಿಸಿದರು. ಇದನ್ನೂ ಓದಿ: ಕಾವೇರಿ ನೀರಿಗಾಗಿ ದಂಡಿ ಸತ್ಯಾಗ್ರಹದಂತೆ ಹೋರಾಟ ಮಾಡುತ್ತೇನೆ: ಡಿ.ಕೆ.ಶಿವಕುಮಾರ್
ಮಂಡ್ಯದವರು ಒರಟು ಅಂತಿದ್ದೆ. ನೀವು ಹಾಸನದವರು ಅದಕ್ಕಿಂತ ಒರಟರು. ನಿಮ್ಮ ಅಭಿಮಾನ ತಪ್ಪಲ್ಲ. ಆದರೆ ವ್ಯಕ್ತಿ ಪೂಜೆಗೆ ನಾನು ಅವಕಾಶ ಕೊಡಲ್ಲ, ಅದರ ಬದಲು ಪಕ್ಷವನ್ನು ಪೂಜಿಸಿ ಎಂದು ಸಲಹೆ ನೀಡಿದರು. ಡಿಕೆಶಿ ಎಷ್ಟೇ ಮನವಿ ಮಾಡಿದರೂ, ಕಾರ್ಯಕರ್ತರು ಸುಮ್ಮನಾಗದ ಕಾರಣ, ಕೆಲಕಾಲ ಭಾಷಣ ನಿಲ್ಲಿಸಿ ನಂತರ ಡಿಕೆಶಿ ಭಾಷಣ ಆರಂಭಿಸಿದರು. ಇದನ್ನೂ ಓದಿ: ಮಹಿಳೆಯಿಂದ ವಂಚನೆ – ಪೊಲೀಸ್ ಠಾಣೆ ಮೆಟ್ಟಿಲೇರಿದ ನಿರ್ದೇಶಕ ನಾಗಶೇಖರ್
ಈ ವೇಳೆ ಮಾತನಾಡಿದ ಅವರು, ನೀವು ಅಧಿಕಾರ ನೀಡುವುದು ನನಗಲ್ಲ, ಕಾಂಗ್ರೆಸ್ಗೆ ನೀಡಿ. ಇದರಿಂದ ನೀವು ನನಗೆ ಅಧಿಕಾರ ಕೊಟ್ಟ ಹಾಗೆ ಆಗುತ್ತದೆ. ಮೇಕೆದಾಟು ಪಾದಯಾತ್ರೆಗೆ ನೀವು ಬರಬೇಕು. ಜನವರಿ ಒಂಬತ್ತರಿಂದ ಹತ್ತೊಂಬತ್ತರವರೆಗೆ ಪಾದಯಾತ್ರೆ ನಡೆಯಲಿದೆ. ಅದರಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಡಿಕೆಶಿ ಮನವಿ ಮಾಡಿದರು. ಇದೇ ವೇಳೆ ತಮಗೆ ಬೆಳ್ಳಿಗದೆ ನೀಡಲು ಅಭಿಮಾನಿಗಳು ಮುಂದಾದಾಗ ಅದನ್ನು ಸ್ವೀಕರಿಸಲು ಡಿಕೆಶಿ ನಿರಾಕರಿಸಿದರು.