ವೋಟ್, ಸೀಟ್ ಆಯ್ತು ಈಗ ನೋಟಿಗಾಗಿ ಏಸು ಪ್ರತಿಮೆ: ಡಿಕೆಶಿ ವಿರುದ್ಧ ಕಲ್ಲಡ್ಕ ಕಿಡಿ

Public TV
3 Min Read

– ಸೋನಿಯಾ ಓಲೈಕೆಗಾಗಿ ಏಸು ಪ್ರತಿಮೆ
– ಡಿಕೆಶಿ ಮಗಳು ಲಿಲ್ಲಿ, ಮಗ ಡೇವಿಡ್ ಆಗಬಹುದು

ರಾಮನಗರ: ನಾವು ಶಾಂತಿ ಕದಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ನಾವು ಶಾಂತಿ ಕದಡಿಲ್ಲ. ನೀವು ಶಾಂತಿಯ ಹೆಸರಲ್ಲಿ ನಮ್ಮ ತಾಳ್ಮೆ ಕೆದಕುತಿದ್ದೀರಿ. ಬಾಲಗಂಗಾಧರ ನಾಥ ಸ್ವಾಮಿ ಪ್ರತಿಮೆ ಮಾಡಬಹುದಿತ್ತು. ಮಹಾತ್ಮ ಗಾಂಧೀಜಿಯವರ ಮೂರ್ತಿ ನಿರ್ಮಿಸಿದರೂ ನಮಗೆ ಅಡ್ಡಿಯಿಲ್ಲ. ಆದರೆ ಸೋನಿಯಾ ಗಾಂಧಿ ಓಲೈಕೆಗಾಗಿ ಮೂರ್ತಿ ಮಾಡಿದ್ದಕ್ಕೆ ನಮ್ಮ ವಿರೋಧವಿದೆ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಪಾಲ ಬೆಟ್ಡದ ಏಸು ಪ್ರತಿಮೆ ನಿರ್ಮಾಣ ಖಂಡಿಸಿ ‘ಕನಕಪುರ ಚಲೋ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಗ್ದರಿಗೆ ಮೋಸ ಮಾಡಿ ಕೆಲಸ ಮಾಡುತ್ತಿದ್ದೀರಾ? ಮೋಸ ವಂಚನೆ ಮೂಲಕ ಪ್ರತಿಮೆ ನಿರ್ಮಿಸುತ್ತಿದ್ದೀರಾ? ಮೋಸ ವಂಚನೆಯಿಂದ ಮತಾಂತರ ಮಾಡುತ್ತಿದ್ದೀರಾ? ಈ ಮತಾಂತರಕ್ಕೆ ಡಿಕೆ ಸಹೋದರರು ಸಾಥ್ ನೀಡುತ್ತಿದ್ದಾರೆ. ನಿಮ್ಮ ಅಪ್ಪ- ಅಮ್ಮ ನಿಮಗೆ ಜನ್ಮ ನೀಡಿದ್ದಾರೆ. ನಿಮಗೆ ಶಿವ, ಸುರೇಶ ಎಂದು ಹೆಸರಿಟ್ಟಿದ್ದಾರೆ. ಸುರೇಶನ್ನು ದಿನೇಶ ಅಂತಾ ಕರೆಯಲು ಆಗುತ್ತಾ? ಒಂದು ಕಡೆಯ ಓಟು, ನೋಟು ಮುಖ್ಯವಾಯಿತೇ? ವೋಟಿಗೋಸ್ಕರ ಸೀಟಿಗೋಸ್ಕರ ಈ ರೀತಿ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ನಾವು ಮುಗ್ಧ ಜನರು, ಹಿಂದೂಗಳು ಮುಗ್ದರು. 33 ಕೋಟಿ ದೇವರು 1947ರಲ್ಲೇ ಇದ್ದಾರೆ ಎಂದು ಹೇಳುತ್ತಾರೆ. ದೇವರಲ್ಲಿ ಒಬ್ಬ ಅಲ್ಲ, ಒಬ್ಬ ಏಸು ಇದ್ದರೆ ನಮ್ಮ ವಿರೋಧವಿಲ್ಲ. ಆದರೆ ಅವರ ಹೆಸರಿನಲ್ಲಿ ಮತಾಂತರ ನಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. 33 ಕೋಟಿ ದೇವರು ಎಲ್ಲಿ ಬರುತ್ತಾರೆ ಎಂದು ಕೇಳುತ್ತಾರೆ? ನಮಗೆ 33 ಕೋಟಿ ದೇವರ ಪೈಕಿ ಒಬ್ಬರು ನಮ್ಮನ್ನು ಕಾಪಾಡುತ್ತಾರೆ ಎಂದು ಹೇಳಿದರು.

ಪ್ರಭಾಕರ್ ಭಟ್ ಯಾರು ಅಂತಾ ಡಿಕೆ ಶಿವಕುಮಾರ್ ಹೇಳುತ್ತಾರೆ. ನಾನು ಯಾರು ಎನ್ನುವುದು ಗೊತ್ತಿಲ್ಲ ಅಂದಿದ್ದಕ್ಕೆ ಸಂತೋಷ. ಶ್ರೀರಾಮುಲು ಮಗಳ ಮದುವೆಯಲ್ಲಿ ಡಿಕೆಶಿ ನನ್ನನ್ನು ಕರೆದು ಮಾತನಾಡಿಸಿದರು. ಈಗ ಪ್ರಭಾಕರ ಭಟ್ಟ ನನಗೆ ಗೊತ್ತಿಲ್ಲ ಅಂತಾರೆ. ಮದುವೆಯಲ್ಲಿ ಸಿಕ್ಕ ಪ್ರಭಾಕರ ಭಟ್ಟನೆ ನಾನು ನೆನಪಿರಲಿ. ಇದೀಗ ನಾನು ಅವರ ಊರಿಗೆ ಬಂದಿದ್ದರೂ ನಾನು ಯಾರೂ ಎನ್ನುವುದು ಗೊತ್ತಿಲ್ಲ ಎಂದು ಹೇಳುತ್ತಾರೆ. ಡಿಕೆಶಿಯವರೇ ನಿಮ್ಮ ಮಗಳು ಲಿಲ್ಲಿ ಆಗಬಹುದು. ದುನೇಶ್ ಅಂತ ಮಗನ ಹೆಸರಿದ್ದರೆ ಅವನು ಮುಂದೆ ಡೇವಿಡ್ ಆಗಬಹುದು. ನಿಮಗೆ ಶಿವ ಅಂತ ತಮ್ಮನಿಗೆ ಸುರೇಶ ಅಂತ ಹೆಸರಿಟ್ಟಿದ್ದಾರೆ ಅದನ್ನ ಉಳಿಸಿ. ವೋಟು ಸೀಟು ಎರಡು ಆಗಿದ್ದು ಡಿಕೆಶಿ ಸಹೋದರರಿಗೆ ಈಗ ಬೇಕಾಗಿರುವುದು ನೋಟು ಎಂದು ವ್ಯಂಗ್ಯವಾಡಿದರು.

ಅಮೆರಿಕ, ಇಂಗ್ಲೆಂಡ್ ಚರ್ಚಿನಲ್ಲಿ ಜನರೇ ಇಲ್ಲದೇ ಚರ್ಚ್ ಖಾಲಿ ಖಾಲಿ ಆಗಿದೆ. ವಿಶ್ವ ಹಿಂದೂ ಪರಿಷತ್ 3 ಖಾಲಿ ಚರ್ಚ್ ಖರೀದಿಸಿದ್ದಾರೆ. ಬಲಿದಾನಕ್ಕೆ ನಾವು ತಯಾರಿದ್ದೇವೆ. ಆದರೆ ಅದಕ್ಕೆ ಮೊದಲು ನಿಮ್ಮ ಬಲಿದಾನ ಗ್ಯಾರಂಟಿ. ಸಿದ್ದರಾಮಯ್ಯ ಜೊತೆ ಸೇರಿ ನಮ್ಮ ಮೂರುವರೆ ಸಾವಿರ ಮಕ್ಕಳ ಅನ್ನದ ಮೇಲೆ ಕಲ್ಲು ಹಾಕಿದ್ದೀರಿ. ಇಲ್ಲಿ ಒಡೆದ ಅಕ್ರಮ ಕಲ್ಲು ತಂದು ಕಲ್ಲಡ್ಕದ ಮಕ್ಕಳ ತಟ್ಟೆಗೆ ಹಾಕಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ರಾಂಚಿ ಯಲ್ಲಿ ಪೋಪ್ ಬರುವ ಕಾರ್ಯಕ್ರಮವಿತ್ತು. ಮತಾಂತರದ ಬಗ್ಗೆ ಸಂಘ ಎಚ್ಚರಿಸಿತು. ಆಗ ಅಲ್ಲಿನ ಜಿಲ್ಲಾಧಿಕಾರಿಯಾಗಿದ್ದ ವ್ಯಕ್ತಿ ಕಾಂಗ್ರೆಸ್ ಡಿಸಿ. ಅವನು ಪೋಪ್ ಅವರನ್ನ ತಡೆಯಲು ಆಗುವುದಿಲ್ಲ ಎಂದ. ಆಗ ಅಲ್ಲಿದ್ದ ಆದಿವಾಸಿ ಜನಾಂಗದವನೊಬ್ಬ ಬಾಣವನ್ನ ಮೇಲಕ್ಕೆ ಬಿಟ್ಟ ಹಾರುತ್ತಿದ್ದ ಹಕ್ಕಿ ಕೆಳಗೆ ಬಿತ್ತು. ಆಗ ಡಿಸಿ ನನಗೂ ಬಾಣ ಬಿಡುಬಹುದು ಎಂದು ಹೆದರಿದ. ಇಲ್ಲೂ ಹೀಗೆಯೇ ಆಗಬೇಕು ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *