ಚಿಕ್ಕಬಳ್ಳಾಪುರ | ರಾಜ್ಯಕ್ಕೂ ತಟ್ಟಿದ ಸೈಕ್ಲೋನ್ ಎಫೆಕ್ಟ್ – ಚುಮುಚುಮು ಚಳಿಯೊಂದಿಗೆ ತುಂತುರು ಮಳೆ!

Public TV
2 Min Read

– ಪ್ರವಾಸಿಗರ ಮನಸೆಳೆದ ನಂದಿಬೆಟ್ಟದ ಮಂಜು

ಚಿಕ್ಕಬಳ್ಳಾಪುರ: ಬಂಗಾಳಕೊಲ್ಲಿಯಲ್ಲಿ (Bay of Bengal) ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದಲ್ಲಿ ನಿನ್ನೆ ಹಲವೆಡೆ ಭಾರೀ ಮಳೆಯಾಗಿದ್ರೆ.. ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ. ಇನ್ನು ನಿನ್ನೆ ಮುಂಜಾನೆಯಿಂದ ಮೋಡ ಕವಿದ ವಾತಾವರಣ ಉಂಟಾಗಿ, ಚಳಿಯ ಜೊತೆ ತುಂತುರ ಹನಿಯಲ್ಲಿ ಜನರು ಗಡಗಡ ನಡುಗಿದ್ದಾರೆ.

ಅತ್ತ ನಂದಿ ಬೆಟ್ಟದಲ್ಲಿ ಮಂಜುಮುಸುಕಿದ ವಾತಾವರಣ ಪ್ರವಾಸಿಗರ ಚಿತ್ತಾಕರ್ಷಿಸಿದೆ. ಇತ್ತ ಕಾಫಿನಾಡು ಚಿಕ್ಕಮಗಳೂರಲ್ಲಿ ಚುಮುಚುಮು ಚಳಿಯ ನಡುವೆ ದತ್ತಪೀಠದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಭಕ್ತರು ಪಾಲ್ಗೊಂಡು ಪೂಜೆ ಪುನಸ್ಕಾರ ನೆರವೇರಿಸಿದ್ರು. ಇದನ್ನೂ ಓದಿ: ರಾಜ್ಯದಲ್ಲಿ ಅಪರಾಧಿಗಳಿಗೆ ಜಾಗವಿಲ್ಲ – ಹರಿಯಾಣ ಸಿಎಂ ಖಡಕ್ ವಾರ್ನಿಂಗ್

ಮಂಜಿನಿಂದ ಆವೃತವಾಗಿರುವ ವಿಶ್ವವಿಖ್ಯಾತ ನಂದಿಗಿರಿಧಾಮ, ಎದುರಗಡೆ ಇರೋ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮೈಗೆ ಹೊದ್ದುಕೊಂಡಿರೋ ಮಂಜು, ಮಂಜಿನ ನಡುವೆಯೇ ಪ್ರೇಮಿಗಳ ಕಲರವ, ಅರಳಿ ನಿಂತ ಹೂಗಳು, ಹಚ್ಚು ಹಸುರಾಗಿ ಸಂಭ್ರಮಿಸುತ್ತಿರೋ ಗಿಡ ಮರಗಳು, ತೊಟಕ್ ತೊಟಕ್ ಅಂತ ಮರ ಗಿಡಗಳಿಂದ ಜಾರಿ ಬೀಳುವ ಇಬ್ಬನಿಯ ಹನಿಗಳ ಸದ್ದು, ಇದರ ನಡುವೆಯೇ ಪ್ರೇಮಿಗಳ ಪಿಸುಮಾತು ಅಬ್ಬಬ್ಬಾ ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮ..

ಹೌದು. ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ, ಅದ್ರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸ್ತಾರೆ. ಅದ್ರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದ್ದು, ಮಂಜಿನ ನಡುವೆಯೇ ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ಪೋಟೋ, ಸೆಲ್ಫಿ ತಗೊಂಡು ಸಖತ್ ಎಂಜಾಯ್ ಮಾಡ್ತಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಇದನ್ನೂ ಓದಿ: ಚಾಮುಂಡಿ ದೇವಿಗೆ ಕೊಟ್ಟ ಹರಕೆ ಸೀರೆ ಕಾಳಸಂತೆಯಲ್ಲಿ ಮಾರಾಟ ಆರೋಪ – ಸ್ನೇಹಮಯಿ ಕಷ್ಣ ದೂರು

ದತ್ತಪೀಠದಲ್ಲಿ ಮಂಜು.. ತುಂತುರು ಮಳೆ:
ಅತ್ತ, ಕಾಫಿನಾಡು ಚಿಕ್ಕಮಗಳೂರಿಗೂ ಚಂಡಮಾರುತದ ಎಫೆಕ್ಟ್ ತಟ್ಟಿದೆ. ದಟ್ಟ ಮಂಜಿನ ನಡುವೆ ತುಂತುರು ಮಳೆ ದತ್ತಭಕ್ತರನ್ನು ಗಢಗಢ ನಡುಗುವಂತೆ ಮಾಡಿದೆ. ದತ್ತಜಯಂತಿ ಅಂಗವಾಗಿ ಅನುಸೂಯ ದೇವಿ ದರ್ಶನ ಪಡೆಯಲು ಆಗಮಿಸಿದ ಸಾವಿರಾರು ಮಹಿಳೆಯರು.. ಚಳಿ ಮಳೆಯಲ್ಲಿ ನಡುಗುತ್ತಲೇ ದೇವಿ ದರ್ಶನ ಪಡೆದಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮಹಾಕುಂಭ ಮೇಳ – 5,500 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿಯಿಂದ ಚಾಲನೆ

Share This Article