Biparjoy Cyclone: 100 ಕಿ.ಮೀ ವೇಗದಲ್ಲಿ ತೀರ ತಾಕಿದ ತೂಫಾನ್- ಗುಜರಾತ್ ಕರಾವಳಿಯಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ

Public TV
2 Min Read

– ಸುರಕ್ಷಿತ ಸ್ಥಳಗಳಿಗೆ 1 ಲಕ್ಷ ಮಂದಿ ಶಿಫ್ಟ್

ಗಾಂಧಿನಗರ: ಬಿಪರ್‌ಜಾಯ್ ತೂಫಾನ್ (Biparjoy Cyclone) ತೀವ್ರತೆಗೆ ಅರಬ್ಬಿ ಸಮುದ್ರ ತೀರ ಪ್ರದೇಶ ತತ್ತರಿಸಿದೆ. ಭೀಕರ ಚಂಡಮಾರುತ ಸಂಜೆ 7.10ರ ಸುಮಾರಿಗೆ ಗುಜರಾತ್‍ (Gujrat) ನ ಕಛ್ ಪ್ರಾಂತ್ಯ (Kutch) ದ ಕೋಟ್ ಲಖಪತ್ ಬಳಿ ತೀರವನ್ನು ತಾಕಿದೆ.

ಗುಜರಾತ್ ತೀರ ಪ್ರದೇಶದಲ್ಲಿ ಭೀಕರ ಬಿರುಗಾಳಿ ಬೀಸುತ್ತಿದೆ. ಕೆಲವೆಡೆ ಇದಕ್ಕೆ ಭಾರೀ ಮಳೆ ಜೊತೆಯಾಗಿದೆ. ದೊಡ್ಡ ಮಟ್ಟದಲ್ಲಿ ಹಾನಿ ಸಂಭವಿಸ್ತಿದೆ. ಗುಜರಾತ್ ತೀರದಲ್ಲಿ ದಟ್ಟ ಕಾರ್ಮೋಡಗಳು ಆವರಿಸಿದ್ದು, ಸಮುದ್ರ ಪ್ರಕ್ಷುಬ್ಧಗೊಂಡಿದೆ. ಈ ತೂಫಾನ್ ಸಂಪೂರ್ಣವಾಗಿ ತೀರವನ್ನು ದಾಟಲು ಕನಿಷ್ಠ ಐದಾರು ಗಂಟೆ ಬೇಕಾಗುತ್ತದೆ. ಸದ್ಯ ಗಂಟೆಗೆ 100 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ತೀರ ದಾಟುವ ಹೊತ್ತಿಗೆ ಈ ಗಾಳಿಯ ವೇಗ 120ರಿಂದ 130 ಕಿಲೋಮೀಟರ್ ಗೆ ಹೆಚ್ಚಾಗಬಹುದು. ಜನತೆ ಎಚ್ಚರಿಂದ ಇರಬೇಕು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ತೀರ ಪ್ರದೇಶದ 20ಕ್ಕೂ ಹೆಚ್ಚು ಗ್ರಾಮಗಳಿಂದ ಜನರನ್ನು ಖಾಲಿ ಮಾಡಿಸಲಾಗಿದೆ. ಅಂದಾಜು 1 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸರ್ಕಾರ ಶಿಫ್ಟ್ ಮಾಡಿದೆ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಬಿಪರ್‌ಜಾಯ್ ರಾತ್ರಿ 11.30ರ ಹೊತ್ತಿಗೆ ತೀರವನ್ನು ದಾಟುವ ನಿರೀಕ್ಷೆ ಇದ್ದು, ತೀರ ದಾಟಿದ ನಂತರ ಇದು ತೀವ್ರ ತೂಫಾನ್ ಆಗಿ. ನಂತರ ದುರ್ಬಲಗೊಳ್ಳಲಿದೆ. ಇದರ ಪ್ರಭಾವ ಕಛ್-ಸೌರಾಷ್ಟ್ರ ಪ್ರಾಂತ್ಯದಲ್ಲಿ ಭಾರೀ ಮಳೆ ಆಗಲಿದೆ. ಇದನ್ನೂ ಓದಿ: ಗುಜರಾತ್‍ಗೆ Biparjoy Cyclone ಕಂಟಕ – 150 ಕಿ.ಮೀ ವೇಗದಲ್ಲಿ ಗಾಳಿ ಮಳೆ

ಈಗಾಗಲೇ ದ್ವಾರಕ, ಪೋರಬಂದರ್, ಜಾಮ್‍ನಗರ, ಮೋರ್ಬಿ ಸೇರಿ ಹಲವೆಡೆ ಮೂರರಿಂದ ಆರು ಮೀಟರ್ ಎತ್ತರದವರೆಗೂ ರಕ್ಕಸಗಾತ್ರದ ಅಲೆಗಳು ಏಳುತ್ತಿವೆ. ತೂಫಾನ್ ತೀವ್ರತೆಯನ್ನು ಗಮನದಲ್ಲಿರಿಸಿಕೊಂಡು ಸಮೀಪ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದೇಗುಲಗಳು, ಕಚೇರಿಗಳು, ಶಾಲೆಗಳು ಬಂದ್ ಆಗಿವೆ. 76 ರೈಲುಗಳ ಸಂಚಾರ ಬಂದ್ ಆಗಿದೆ. ಭೂಸೇನೆ, ನೌಕಾಪಡೆ, ವಾಯುಪಡೆಗಳು ಸನ್ನದ್ಧವಾಗಿವೆ. ಅರಬ್ಬಿ ಸಮುದ್ರದಲ್ಲಿ ಏರ್ಪಟ್ಟ ಚಂಡಮಾರುತಗಳಲ್ಲಿ ಇದು ಹೆಚ್ಚು ಕಾಲ ಚಾಲ್ತಿಯಲ್ಲಿರುವ ಸೈಕ್ಲೋನ್ ಆಗಿರುವುದು ವಿಶೇಷ.

ಈ ಸೈಕ್ಲೋನ್ ಪ್ರಭಾವ ಗುಜರಾತ್ ಜೊತೆಗೆ 8 ರಾಜ್ಯಗಳ ಮೇಲಿದೆ. ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಡಿಯು-ಡಾಮನ್, ಲಕ್ಷದ್ವೀಪ, ದಾದ್ರಾ ನಗರ್ ಹವೇಲಿ ಮೇಲೆ ಬೀರಿದೆ. ನೆರೆಯ ಪಾಕಿಸ್ತಾನ (Pakistan) ದಲ್ಲಿಯೂ ಬಿರುಗಾಳಿ ಸಹಿತ ಜೋರು ಮಳೆ ಆಗುತ್ತಿದೆ. ಇನ್ನು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಿಪರ್‌ಜಾಯ್ ಚಂಡಮಾರುತ ತೀವ್ರತೆಯನ್ನು ಸೌದಿಅರೇಬಿಯಾದ ಗಗನಯಾನಿ ಸುಲ್ತಾನ್ ಅಲ್‍ನೆಯಾಡಿ ಸೆರೆ ಹಿಡಿದಿದ್ದಾರೆ.

ಬಿಪರ್‌ಜಾಯ್ ಸೈಕ್ಲೋನ್ ಕರ್ನಾಟಕದ ಕರಾವಳಿ ತೀರದಲ್ಲೇನೂ ದೊಡ್ಡ ಅವಾಂತರ ಉಂಟು ಮಾಡಿಲ್ಲ. ಹೆಚ್ಚಿದ ಗಾಳಿಯಿಂದಾಗಿ ಮಳೆ ಆಗಿಲ್ಲ. ಆದರೆ ಸಮುದ್ರ ಪಕ್ಷುಬ್ಧಗೊಂಡಿದೆ. ಪರಿಣಾಮ ಮಲ್ಪೆ ಪಡುಕೆರೆಯ ತೀರದಲ್ಲಿ ಕಡಲ್ಕೊರೆತ ಹೆಚ್ಚಿದೆ. ಅರ್ಧ ಕಿಲೋಮೀಟರ್‍ನಷ್ಟು ದೂರ ಕಡಲು ಕೊರೆತ ಉಂಟಾಗಿದೆ. ಭಾರೀ ಗಾತ್ರದ ಕಲ್ಲುಗಳನ್ನು ಭಾರೀ ಅಲೆಗಳು ಸಮುದ್ರದೊಳಕ್ಕೆ ಹೊತ್ತೊಯ್ದಿವೆ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದ ಕಡಲ ತೀರಗಳಲ್ಲಿ ರಕ್ಕಸಗಾತ್ರದ ಅಲೆಗಳು ಕಂಡುಬರ್ತಿವೆ. ಜೂನ್ 19ರವರೆಗೂ ಇದೇ ಪರಿಸ್ಥಿತಿ ಇರಲಿದೆ.. ಹೀಗಾಗಿ ಮೀನುಗಾರಿಕೆ ಬಂದ್ ಮಾಡಲಾಗಿದೆ. ಮೀನುಗಾರರು ತಮ್ಮ ಬೋಟುಗಳನ್ನು ಮುಂಜಾಗ್ರತಾ ಕ್ರಮವಾಗಿ ಬೇರೆಡೆಗೆ ಶಿಫ್ಟ್ ಮಾಡ್ತಿದ್ದಾರೆ.

Share This Article