ಬನ್ನಿ.. ಬನ್ನಿ ಯಾರು ಗೆದ್ದರೂ ನಮ್ಮವ್ರೇ – ಕಾಂಗ್ರೆಸ್, ಪಕ್ಷೇತರ ಅಭ್ಯರ್ಥಿಗಳ ಜೊತೆ ಸಿ.ಟಿ ರವಿ ಫೋಟೋ

Public TV
1 Min Read

ಚಿಕ್ಕಮಗಳೂರು: ಹೇ.. ಎಲ್ಲರನ್ನೂ ಕರೀರಪ್ಪಾ… ನಮ್ ಅಭ್ಯರ್ಥಿ ಎಲ್ಲೋದ್ರು. ಕಾಂಗ್ರೆಸ್ ವಾಣಿ, ಇಂಡಿಪೆಂಡೆಂಟ್ ವಿನಯ್ ಎಲ್ಲರನ್ನೂ ಕರೀರಪ್ಪಾ… ಪಕ್ಷ ಬೇರೆ ಇರ್ಬೋದು. ಯಾರ್ ಗೆದ್ರೆ ಏನಂತೆ.. ಎಲ್ಲರೂ ನಮ್ಮವರೇ ಎಂದು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಬಿಜೆಪಿ-ಕಾಂಗ್ರೆಸ್-ಪಕ್ಷೇತರ ಅಭ್ಯರ್ಥಿಗಳ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಇಂದು ಚಿಕ್ಕಮಗಳೂರು ನಗರದಲ್ಲಿ ನಗರಸಭೆ ಚುನಾವಣೆ ಇತ್ತು. ಈ ವೇಳೆ ಮತದಾನ ಮಾಡಲೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮತದಾನ ಮಾಡಲೆಂದು ದಂಪತಿ ಸಮೇತ ಆಗಮಿಸಿದ್ದರು. ನಗರದ ಐ.ಜಿ.ರಸ್ತೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಬೂತ್‍ಗೆ ಬಸವನಹಳ್ಳಿಯಲ್ಲಿರುವ ಮನೆಯಿಂದ ಸಿ.ಟಿ.ರವಿ ಹಾಗೂ ಪತ್ನಿ ಪಲ್ಲವಿ ನಡೆದೇ ಬಂದು ಮತದಾನ ಮಾಡಿದರು. ಇದನ್ನೂ ಓದಿ: ಚಂಡೀಗಢ ಬಿಜೆಪಿ, ಕಾಂಗ್ರೆಸ್‍ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ

ಮತದಾನ ಮಾಡಿ ಹೊರಬಂದ ಕೂಡಲೇ ಅಲ್ಲಿದ್ದವರು ಸಿ.ಟಿ.ರವಿ ಜೊತೆ ಫೋಟೋಗೆ ಮುಗಿಬಿದ್ದಿದ್ದರು. ಈ ವೇಳೆ ಸಿ.ಟಿ. ರವಿ ಜೊತೆ ಫೋಟೋ ತೆಗೆಸಿಕೊಳ್ಳಲು ಪಕ್ಷೇತರ ಅಭ್ಯರ್ಥಿ ವಿನಯ್ ಕೂಡ ಬಂದರು. ಅಲ್ಲಿದ್ದ ಇತರರು ಕೂಡ ಫೋಟೋಗೆ ಮುಂದೆ ಬರುತ್ತಿದ್ದರು. ಆಗ ಸ್ವತಃ ಸಿ.ಟಿ.ರವಿ, ಹೇ ಬನ್ರಪ್ಪಾ… ಎಲ್ಲರನ್ನೂ ಕರೀರಿ. ನಮ್ ರಾಜು ಎಲ್ಲಿ, ಕಾಂಗ್ರೆಸ್ ವಾಣಿ, ವಿನಯ್ ಎಲ್ಲರೂ ಬನ್ನಿ ಎಂದು ಎಲ್ಲರ ಜೊತೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ.

ಎಲೆಕ್ಷನ್ ಬೇರೆ, ಪಕ್ಷ ಬೇರೆ. ಯಾರೇ ಗೆಲ್ಲಲಿ, ಯಾರೇ ಸೋಲಲಿ. ಯಾರು ಸೋತು-ಗೆದ್ರು ಎಲ್ಲರೂ ನಮ್ಮವರೇ ಎಂದು ಎಲ್ಲರನ್ನೂ ಕರೆಸಿ ಜೊತೆಯಲ್ಲೇ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡ ಪ್ರಸಂಗ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *