ಬಿಜೆಪಿಯಿಂದ ಯಾರು ಹಣದ ಆಫರ್ ನೀಡಿದ್ದಾರೆ ಬಹಿರಂಗಪಡಿಸಲಿ: ಸಿ.ಟಿ ರವಿ

Public TV
2 Min Read

ಬೆಂಗಳೂರು: ಯಾರು ಹಣದ ಆಫರ್ ನೀಡಿದ್ದಾರೆಂದು ಶಾಸಕ ಕೆ.ಮಹಾದೇವ್ ಬಹಿರಂಗಪಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆಗ್ರಹಿಸಿದರು.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ 40 ಕೋಟಿ ಆಫರ್ ಎಂಬ ಶಾಸಕ ಕೆ.ಮಹಾದೇವ್ ಆರೋಪ ನಿರಾಧಾರ. ಮಹಾದೇವ್ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಿಎಂಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಯಾವಾಗ ಆಫರ್ ಬಂತು, ಯಾರು ಆಫರ್ ಮಾಡಿದರು ಎಂದು ಬಹಿರಂಗಪಡಿಸಲಿ. ಜೆಡಿಎಸ್‍ನಲ್ಲಿ ಸ್ವತಃ ಮಾರ್ಕೆಟ್ ಸೃಷ್ಟಿ ಮಾಡಿಕೊಳ್ಳಲು ಶಾಸಕರು ಇಂತಹ ಆರೋಪ ಮಾಡಿದ್ದಾರೆ ಎಂದು ಹರಿಹಾಯ್ದರು.

ಮಹಾದೇವ್ ಇಂತಹ ಹೇಳಿಕೆಗಳ ಮೂಲಕ ಸಿಎಂಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮಹಾದೇವ್ ಆರೋಪ ನಿರಾಧಾರ. ಪ್ರಚಾರ ಪಡೆಯಲು ಹಾಗೂ ಡಿಮ್ಯಾಂಡ್ ಸೃಷ್ಟಿಸಿಕೊಳ್ಳಲು ಬಿಜೆಪಿ ವಿರುದ್ಧ ಹಣದ ಆಮಿಷ ಆರೋಪ ಮಾಡಿದ್ದಾರೆ. ಮಹಾದೇವ್‍ಗೆ ಜೆಡಿಎಸ್ ನಲ್ಲಿ ಬೆಲೆ ಇಲ್ಲ. ಹೀಗಾಗಿ ತಮ್ಮ ಡಿಮ್ಯಾಂಡ್ ಹೆಚ್ಚಿಸಿಕೊಳ್ಳಲು ಇಂಥ ಆರೋಪ ಮಾಡಿದ್ದಾರೆ. ಮಹಾದೇವ್ ತಮ್ಮ ಹೇಳಿಕೆ ಕುರಿತು ಬಿಜೆಪಿ ಕ್ಷಮೆ ಕೇಳಬೇಕು ಎಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಶಾಸಕರ ರಾಜೀನಾಮೆಗೆ ಮೋದಿ, ಅಮಿತ್ ಶಾ ಕಾರಣ ಎಂಬ ಸಿದ್ದರಾಮಯ್ಯ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಮೈತ್ರಿ ಸರ್ಕಾರ ಬೀಳಿಸುವ ಸಂಚನ್ನು ನಿಮ್ಮ ಪಕ್ಷದ ಶಾಸಕರೇ ಮಾಡುತ್ತಿದ್ದಾರೆ. ನಿಮ್ಮ ಅವಾಂತರಗಳೇ ನಿಮ್ಮ ಸರ್ಕಾರ ಬೀಳಲು ಕಾರಣ. ಸಿದ್ದರಾಮಯ್ಯಗೆ ಮೋದಿಯವರ ಜಪ ಮಾಡದಿದ್ದರೆ ಮಾಡಿದ ಊಟ ಜೀರ್ಣವಾಗುವುದಿಲ್ಲ. ಬಿಜೆಪಿ ನಾಯಕರು ಮೈತ್ರಿ ಶಾಸಕರನ್ನು ಸೆಳೆಯುವ ಕೆಲಸ ಮಾಡುವುದಿಲ್ಲ. ನಿಮ್ಮ ಆಂತರಿಕ ಸಮಸ್ಯೆಗಳಿಂದ ನಿಮ್ಮ ಶಾಸಕರು ರಾಜೀನಾಮೆ ಕೊಡುತ್ತಿದ್ದಾರೆ. ಸೋಲಿನ ಹತಾಷೆಯಿಂದ ಸಿದ್ದರಾಮಯ್ಯ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಬ್ಯಾಕ್ ಸೀಟಲ್ಲಿ ಕೂತು ಡ್ರೈವ್ ಮಾಡ್ತಾರೆ
ಇಷ್ಟು ದಿನ ಫ್ರಂಟ್ ಸೀಟಲ್ಲಿ ಕೂತು ಡ್ರೈವ್ ಮಾಡುತ್ತಿದ್ದರು. ಇನ್ನು ಬ್ಯಾಕ್ ಸೀಟಲ್ಲಿ ಕೂತು ಡ್ರೈವ್ ಮಾಡುತ್ತಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ಕುರಿತು ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿರುವ ಹೊಸಬರ ಹೆಸರು ಸಹ ರಬ್ಬರ್ ಸ್ಟಾಂಪ್‍ಗಳು. ಕಾಂಗ್ರೆಸ್‍ನಲ್ಲಿ ಭಟ್ಟಂಗಿಗಳೇ ತುಂಬಿಕೊಂಡಿದ್ದಾರೆ. ರಾಹುಲ್ ಗಾಂಧಿ ತಮ್ಮ ನಿರ್ಗಮನ ಸಂದರ್ಭದಲ್ಲೂ ಸತ್ಯ ಹೇಳುತ್ತಿಲ್ಲ. ಈಗಲೂ ಇವಿಎಂ, ಚುನಾವಣಾ ಆಯೋಗದ ಮೇಲೆ ರಾಹುಲ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾರೇ ಹೊಸ ಅಧ್ಯಕ್ಷರಾದರೂ ಕಾಂಗ್ರೆಸ್‍ನಲ್ಲಿ ಗಾಂಧಿ ಕುಟುಂಬದ ಹಿಡಿತ ಇದ್ದೇ ಇರುತ್ತದೆ ಎಂದು ಹರಿಹಾಯ್ದಿದ್ದಾರೆ.

ಕಾಳಜಿ ಇದ್ದಿದ್ದರೆ ಕರೆಸಿ ಮಾತನಾಡುತ್ತಿದ್ದರು
ಆನಂದ್ ಸಿಂಗ್ ಅವರ ಮೇಲೆ ಕಾಂಗ್ರೆಸ್ ನವರಿಗೆ ಕಾಳಜಿ ಇದ್ದಿದ್ದರೆ ಕರೆಸಿ ಮಾತನಾಡುತ್ತಿದ್ದರು. ಸ್ಪೀಕರ್‍ಗೆ ದೂರು ನೀಡುತ್ತಿರಲಿಲ್ಲ. ಸ್ಪೀಕರ್ ಮೇಲೆ ನಂಬಿಕೆ ಇದ್ದು, ವಿವೇಚನೆಯಿಂದ ರಾಜೀನಾಮೆ ಅಂಗೀಕರಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ. ಮೈತ್ರಿ ಸರ್ಕಾರದ ಫೌಂಡೇಷನ್‍ನಲ್ಲಿ ಒಂದೊಂದೇ ಕಲ್ಲು ಬೀಳಲು ಶುರುವಾಗಿದೆ. ಉಮೇಶ್ ಜಾಧವ್ ಅವರಿಂದ ಶುರುವಾದ ಶಾಸಕರ ರಾಜೀನಾಮೆ ಈಗಲೂ ಮುಂದುವರಿದಿದೆ ಎಂದು ಸಿ.ಟಿ.ರವಿ ಟೀಕಿಸಿದರು.

Share This Article
Leave a Comment

Leave a Reply

Your email address will not be published. Required fields are marked *